ಕಾಳಿ ವಿಗ್ರಹಕ್ಕಾಗಿ ಮಡಿಕೇರಿಯಲ್ಲಿ ಮುಸ್ಲಿಂ ಮಹಿಳೆ ಹೋರಾಟ
ಮಡಿಕೇರಿ, ಸೆಪ್ಟೆಂಬರ್ 6: ಖಾಸಗಿ ಶಾಲೆಯ ಸಂಸ್ಥಾಪಕಿಯಾಗಿರುವ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಶಾಲಾ ಕೊಠಡಿಯ ತಳಭಾಗದಲ್ಲಿ ಮಹಾಕಾಳಿಯ ವಿಗ್ರಹವಿದ್ದು ಅದನ್ನು ಹೊರತೆಗೆದು ದೇವಸ್ಥಾನ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸುತ್ತಿರುವ ಘಟನೆ ಕೊಡಗಿನ ಕುಶಾಲನಗರದಲ್ಲಿ ನಡೆದಿದೆ.
ತಲಾಖ್ ವಿರುದ್ಧ ಹನುಮಾನ್ ಮೊರೆಹೋದ ಮುಸ್ಲಿಂ ಮಹಿಳೆಯರು
ಬ್ರೀಲಿಯಂಟ್ ಬ್ಲೂಮ್ ಶಾಲೆಯ ಸಂಸ್ಥಾಪಕಿ ಮುಬೀನ್ ತಾಜ್ ಎಂಬುವರೇ ಜಿಲ್ಲಾಡಳಿತದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದು, ಈಗಾಗಲೇ ಹಲವು ಬಾರಿ ಈ ಸಂಬಂಧ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ತಾನೇ ತ್ರಿಶೂಲ ಹಿಡಿದು ಕುಶಾಲನಗರದ ಪಟ್ಟಣ ಪಂಚಾಯಿತಿ ಮುಂದೆ ಏಕಾಂಗಿಯಾಗಿ ಸಾಗಿ ಪ್ರತಿಭಟನೆ ನಡೆಸಿದ್ದಾರೆ.
ಮುಬೀನ್ ತಾಜ್ ಅವರ ಒತ್ತಾಯ ಏನೆಂದರೆ ಅವರ ಶಾಲೆಯ ಕೊಠಡಿಯೊಂದರ ನೆಲದೊಳಗೆ ಪುರಾತನ ಕಾಲದ ಮಹಾಕಾಳಿಯ ವಿಗ್ರಹವಿದೆ ಅದನ್ನು ಹೊರ ತೆಗೆಯಲು ಅನುಮತಿ ನೀಡ ಬೇಕೆಂತೆ. ಇದನ್ನು ಕಾಳಿಯೇ ಕನಸಲ್ಲಿ ಬಂದು ತಿಳಿಸಿದ್ದಾಳಂತೆ. ಆ ಪ್ರಕಾರ ಹೇಳುವುದಾದರೆ, ಸುಮಾರು 600ವರ್ಷಗಳ ಹಿಂದೆ ಈ ಸ್ಥಳದಲ್ಲಿ ಮಹಾಕಾಳಿಯ ದೇವಾಲಯವಿದ್ದು ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಲ್ಲಿ ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸಲಾಗಿತ್ತು.
ಈ ಸಮಯದಲ್ಲಿ ಅಂದು ಪೂಜೆ ಸಲ್ಲಿಸುತ್ತಿದ್ದ ಪುರೋಹಿತರೊಬ್ಬರು ಮಹಾಕಾಳಿಯ ವಿಗ್ರಹವನ್ನು ಭೂಮಿಯೊಳಗೆ ಅಡಗಿಸಿಟ್ಟಿದ್ದರು. ಅದು ಭೂಮಿಯೊಳಗೆ ಇದೆಯಂತೆ. ಅದರ ಮೇಲೆ ಶಾಲಾ ಕಟ್ಟಡ ಕಟ್ಟಲಾಗಿರುವುದರಿಂದ ಈಗ ಅದನ್ನು ಹೊರ ತೆಗೆಯುವಂತೆ ದೇವಿ ಕನಸಲ್ಲಿ ಬಂದು ಹೇಳಿದ್ದಾಳಂತೆ. ಹೀಗಾಗಿ ಮುಬೀನ್ ತಾಜ್ ಕಾಳಿ ವಿಗ್ರಹ ತೆಗೆಯಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.