ಮಡಿಕೇರಿಯಲ್ಲಿ ಮನರಂಜಿಸಿದ 'ಬೇಲ್ ನಮ್ಮೆ'
ಮಡಿಕೇರಿ, ಜುಲೈ 24: ಕೊಡಗಿನಲ್ಲಿ ಭತ್ತದ ಕೃಷಿ ವಿನಾಶದ ಅಂಚಿಗೆ ಸಾಗುತ್ತಿರುವ ವೇಳೆಯಲ್ಲಿ ಹಿಂದಿನ ಕಾಲದಿಂದಲೂ ಕೊಡಗಿನವರ ಪ್ರಮುಖ ಬೆಳೆಯಾದ ಭತ್ತದ ಕೃಷಿಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗುವ ಸಲುವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಪೋಕ್ಲು ಕೊಡವ ಸಮಾಜದ ಸಾಂಸ್ಕೃತಿಕ ಮನರಂಜನಾ ಕೂಟ ಮತ್ತು ಬಿದ್ದಾಟಂಡ ಕುಟುಂಬಸ್ಥರ ಸಹಯೋಗದೊಂದಿಗೆ ಬೇಲ್ ನಮ್ಮೆ(ಸಾಂಸ್ಕೃತಿಕ ಹಬ್ಬ)ಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಬಿದ್ದಾಟಂಡ ಬೋಪಯ್ಯ ಅವರ ಭತ್ತದ ಗದ್ದೆಯಲ್ಲಿ ಬೇಲ್ ನಮ್ಮೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಮಳೆಗಾಲದ ಪ್ರಮುಖ ಮನೋರಂಜನೆಯಾಗಿ ಗಮನಸೆಳೆಯುತ್ತಿದೆ.
ಭಾಗಮಂಡಲದಲ್ಲಿ ಸಂಭ್ರಮದ ಜರಗಿದ ಪೊಲಿಂಕಾನ ಉತ್ಸವ
ಸುರಿಯುವ ಮಳೆಯಲ್ಲಿ, ಕೆಸರು ಗದ್ದೆಯಲ್ಲಿ ನಡೆಯುವ ಪ್ರತಿಯೊಂದು ಸ್ಪರ್ಧೆಯೂ ಮಜಾ ನೀಡುತ್ತದೆ. ಈ ಬಾರಿ ನಡೆದ ಬೇಲ್ ನಮ್ಮೆ ಹತ್ತು ಹಲವು ವಿಶೇಷತೆಗಳಿಗೆ ಕಾರಣವಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ಮಹಿಳೆಯರು, ಪುರುಷರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಸೆಳೆದರು.
ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಪೈರು ತೆಗೆಯುವ, ನಾಟಿ ನೆಡುವ ತರಬೇತಿ, ಪೈಪೋಟಿಯೂ ನಡೆಯಿತು. ಇನ್ನು ಹಗ್ಗಜಗ್ಗಾಟ, ವಾಲಿಬಾಲ್, ನಾಟಿ ಓಟ, ಸ್ಪರ್ಧಿಸಿ ಕೆಲವರು ನಗೆ ಬೀರಿದರೆ, ಮತ್ತೆ ಕೆಲವರು ಸ್ಪರ್ಧೆಯಲ್ಲಿ ಭಾಗವಹಿಸಿದ ಸಂಭ್ರಮದಲ್ಲಿ ಮಿಂದೆದ್ದರು.
ಮಕ್ಕಳು, ಯುವತಿಯರು, ಯುವಕರು ರಂಗು ರಂಗಿನ ಉಡುಗೆ ತೊಡುಗೆಯಲ್ಲಿ ಮಿಂಚಿದರು. ಮಧ್ಯಾಹ್ನಕ್ಕೆ ಕುರ್ಚಿ ಮೀನು ಸಾರು ಊಟ ಹಳೆಯ ಕಾಲದ ಊಟೋಪಚಾರವನ್ನು ನೆನಪಿಸಿತು. ಕಾರ್ಯಕ್ರಮವನ್ನು ವಿಧಾನ ಸಭಾ ಸದಸ್ಯ ಕೆ.ಜಿ. ಬೋಪಯ್ಯ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ ಮರೆಯದಿರಿ
ತನ್ನದೇ ಆದ ಚಾರಿತ್ರಿಕ ಹಿನ್ನಲೆ ಹೊಂದಿ ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಜತೆಗೆ ಪ್ರತಿಯೊಬ್ಬರು ಮುಂದಿನ ದಿಗಳಲ್ಲಿ ಭತ್ತದ ಕೃಷಿಗೆ ಒತ್ತು ನೀಡಬೇಕಾಗಿದೆ. ಇದರಿಂದ ಅಂತರ್ಜಲ ಕಾಪಾಡಲು ಸಾಧ್ಯವಾಗಲಿದೆ ಎಂದರಲ್ಲದೆ, ಇಲ್ಲಿನ ಹಬ್ಬ ಹರಿದಿನಗಳು ಭತ್ತದ ಕೃಷಿಯಿಂದಲೇ ಆರಂಭಗೊಂಡಿವೆ. ಜಿಲ್ಲೆಯ ಜನ ಸಂಸ್ಕೃತಿ ಮರೆಯದೆ ಉಳಿಸಿ ಬೆಳೆಸಿಕೊಂಡು ಹೋಗುವಂತೆ ಕೆ.ಜಿ.ಬೋಪಯ್ಯ ಕಿವಿಮಾತು ಹೇಳಿದರು.
ಹಣದಿಂದ ಸಂಸ್ಕೃತಿ ಉಳಿಯೋಲ್ಲ
ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮಾತನಾಡಿ, ಕೊಡಗಿನಲ್ಲಿ ಈ ಹಿಂದೆ ಜನರು ಕೃಷಿಯನ್ನು ಅವಲಂಬಿಸಿ ಬದುಕುತ್ತಿದ್ದರು. ಇಂದು ಹಣದ ಆಸೆಯಿಂದ ಪಟ್ಟಣ ಸೇರುತ್ತಿದ್ದಾರೆ. ಹಣದಿಂದ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಿಲ್ಲ ಎಲ್ಲರೂ ತಮ್ಮ ನೆಲ, ಜಲದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಭತ್ತದ ಕೃಷಿಗೆ ಹೆಚ್ಚಿನ ಒಲವು
ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಭತ್ತದ ಬೆಳೆ ಬೆಳೆಯದ ಕಾರಣ ಇಂದು ಕೊಡಗಿನಲ್ಲಿ ಅಂತರ್ಜಲ ಕುಸಿದಿದೆ. ಮುಂದೆ ಇದು ಕೊಡಗಿಗೆ ಮಾರಕವಾಗಲಿದೆ. ಆದುದರಿಂದ ಎಲ್ಲರೂ ಭತ್ತದ ಕೃಷಿಯತ್ತ ಹೆಚ್ಚಿನ ಒಲವು ತೋರಬೇಕು ಎಂದರು.
ಉಪಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ವಹಿಸಿದ್ದರು. ನಾಪೋಕ್ಲು ಕೊಡವ ಸಮಾಜದ ಕಲ್ಚರಲ್ ರಿಕ್ರಿಯೇಷನ್ ಕೂಟದ ಅಧ್ಯಕ್ಷ ಕಾಂಡಂಡ ಜೋಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮ್ಮುಣಿಚಂಡ ಪ್ರವೀಣ್ ಚಂಗಪ್ಪ ಆಧುನಿಕತೆಲ್ ಕೆಳಂಜ ನೆಲ್ಲ್ ಕೃಷಿ' ಎಂಬ ಬಗ್ಗೆ ವಿಚಾರ ಮಂಡನೆ ಮಾಡಿದರು. ಬಿದ್ದಾಟಂಡ ಬೋಪಯ್ಯ, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯೆ ಪುಲ್ಲೇರ ಪದ್ಮಿನಿ, ಅಕಾಡೆಮಿ ಸದಸ್ಯರಾದ ಮೂಕೈರಿರ ಲೀಲಾವತಿ, ಅಣ್ಣೀರ ಹರೀಶ್ ಮಾದಪ್ಪ ಇದ್ದರು.