ಭುಸ್ಸೆಂದು.. ಕಾಡಿಂದ ನಾಡಿಗೆ ಬಂದ ಕಾಳಿಂಗ ಸರ್ಪ
ಮಡಿಕೇರಿ, ಜನವರಿ 31: ಭುಸ್ಸೆಂದು.. ಅರಣ್ಯದಿಂದ ನಾಡಿನತ್ತ ಬಂದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಭಾರೀ ಗಾತ್ರದ ಕಾಳಿಂಗಸರ್ಪವನ್ನು ಸೆರೆ ಹಿಡಿದು ಮರಳಿ ಕಾಡಿಗೆ ಬಿಡುವಲ್ಲಿ ಗೋಣಿಕೊಪ್ಪಲಿನ ಸ್ನೇಕ್ ಶರತ್ ಮತ್ತು ಸ್ನೇಕ್ ಬಾವೆ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ದಕ್ಷಿಣ ಕೊಡಗಿನ ಗೋಣಿಕೊಪ್ಪ ಬಳಿಯ ದೇವರಪುರದಲ್ಲಿರುವ ದೇವರಪುರ ಸಾವಿರಬಟ್ಟಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಕಣ್ಣಿಗೆ ಆಕಸ್ಮಿಕವಾಗಿ ಕಾಳಿಂಗ ಸರ್ಪ ಬಿದ್ದಿತ್ತು. ಜನರು ಹೌಹಾರಿ ಹಿಂದಕ್ಕೆ ಸರಿದು ಅದು ಏನು ಮಾಡುತ್ತದೆ ಎಂಬುದನ್ನೆ ನೋಡುತ್ತಾ ನಿಂತರು.[ಉರಗತಜ್ಞನಿಗೇ ಭೀತಿ ಹುಟ್ಟಿಸಿದ ಕಾಳಿಂಗ ಸರ್ಪ]
ಅಷ್ಟರಲ್ಲೇ ಕೆಲವರು ಸ್ನೇಕ್ ಶರತ್ ಮತ್ತು ಸ್ನೇಕ್ ಬಾವೆ ಅವರಿಗೆ ಸುದ್ದಿ ಮುಟ್ಟಿಸಿದ್ದರು. ಹೀಗಾಗಿ ಅವರು ಸ್ಥಳಕ್ಕೆ ಬಂದಿದ್ದರು. ತಮ್ಮ ಚಾಕಚಕ್ಯತೆ ಬಳಸಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಚೀಲಕ್ಕೆ ತುಂಬಿಸುವಲ್ಲಿ ಯಶಸ್ವಿಯಾದರು.
ಈ ಕಾಳಿಂಗ ಸರ್ಪ ಹೆಣ್ಣಾಗಿದ್ದು, ಎಂಟೂವರೆ ಕೆ.ಜಿ. ತೂಕ ಮತ್ತು ಹತ್ತು ಅಡಿ ಉದ್ದವಿತ್ತು. ಅಂದಾಜು ಆರೇಳು ವರ್ಷ ವಯಸ್ಸಿನದಾಗಿದೆ. ಸಾಮಾನ್ಯವಾಗಿ ದಟ್ಟ ಕಾಡುಗಳಲ್ಲಿರುವ ಇವು ಪಶ್ಚಿಮಘಟ್ಟದ ಅರಣ್ಯದಲ್ಲಿ ಹೆಚ್ಚಾಗಿವೆ. ನಾಗರಹೊಳೆ ಅಭಯಾರಣ್ಯದಿಂದ ಬಹುಶಃ ಬೇಟೆ ಅರಸಿ ಬಂದಿರಬಹುದೆಂದು ತಿಳಿಸಿದರು.
ಇದರೊಂದಿಗೆ ಕೆಲದಿನಗಳ ಹಿಂದೆ ಈಚೂರು ನಾಡುಗುಂಡಿಯಲ್ಲಿ ಸುಮಾರು ಆರು ವರ್ಷದ, ಏಳು ಕೆ.ಜಿ.ತೂಕದ ಒಂಬತ್ತು ಅಡಿ ತೂಕದ ಕಾಳಿಂಗ ಸರ್ಪವನ್ನು ಹಿಡಿಯಲಾಗಿತ್ತು. ಇದೆರಡು ಸರ್ಪಗಳನ್ನು ಇದೀಗ ಸುರಕ್ಷಿತವಾಗಿ ಮಾಕುಟ್ಟ ಅರಣ್ಯದಲ್ಲಿ ಬಿಡಲಾಗಿದೆ.