ಮಡಿಕೇರಿ: ಪಿಕಪ್ ವಾಹನ ಪಲ್ಟಿ, 22 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಮಡಿಕೇರಿ, ಮಾರ್ಚ್. 14 : ಕಾರ್ಮಿಕರನ್ನು ಸಾಗಿಸುತ್ತಿದ್ದ ಪಿಕಪ್ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಸುಮಾರು 22 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ವಿರಾಜಪೇಟೆಯ ಕಾವೇರಿ ಶಾಲೆಯ ಬಳಿ ನಡೆದಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಚೆಂಬೆಬೆಳ್ಳೂರುನಿಂದ ಕಕ್ಕಬೆಗೆ ಬೆಳಿಗ್ಗೆ ಮೋಹನ್ ಎನ್ನುವರ ಕಾಫಿ ತೋಟದಲ್ಲಿ ಕೆಲಸ ಮಾಡಿಸಿಕೊಂಡು ಸಂಜೆ ಮನೆಗೆ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡವರು ಮೂಲತಃ ಅಸ್ಸಾಂನವರಾಗಿದ್ದು, ಇವರು ಕೆಲಸಕ್ಕೆಂದು ಕಳೆದ 10 ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು.
ಘಟನೆಯಲ್ಲಿ ಮುಸ್ಲುದ್ದೀನ್ (35), ಓಸ್ವಾರಿ (30) ಉಕ್ಕ್ಕಿಯ್ಯ (25) ಬೆಹರಾನ್ (30) ರೋಸನಾರ್ (20), ಸುಂತಾನ್, (25) ಎಲೀಮಿನ (20) ಷರ್ಪುದ್ದೀನ್ (25) ರಹೀಂ ಅಬ್ದುಲ್ಲಾ (45) ಸೂಫಿಯ (35) ಸುಲೈಮಾನ್ (30), ಬಹಾನುತ್ತಮ್ (25) ಸಾಯ್ರೂಮ್ (22) ನಜೀಮಾ (21) ಮಿನಾರ್ಬೇಗಂ (28) ಒಟ್ಟು 22 ಗಾಯಗೊಂಡಿರುವರ ಪೈಕಿ 13 ಮಂದಿ ಮಹಿಳೆಯರು ಹಾಗೂ 9 ಮಂದಿ ಪುರುಷರು ಸೇರಿದ್ದಾರೆ.
ಗಾಯಾಳುಗಳಿಗೆ ವೀರಾಜಪೇಟೆ ಹಾಗೂ ಮಡಿಕೇರಿಯ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಗಾಯಗೊಂಡ ಇಬ್ಬರು ಯುವತಿಯರು ಹಾಗೂ ಒಬ್ಬ ಪುರುಷ ಸೇರಿದಂತೆ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಪಿಕಪ್ ಜೀಪು (ನಂ ಕೆ.ಎ.12ಬಿ 2767) ಚೆಂಬೆಬೆಳ್ಳೂರು ಕಾಫಿ ತೋಟದ ಮಾಲೀಕ ಮೋಹನ್ ಎಂಬುವರಿಗೆ ಸೇರಿದ್ದು, ವಾಹನ ಚಾಲಕ ಬೋಪಣ್ಣ ಎಂಬಾತ ತಲೆಮರೆಸಿಕೊಂಡಿದ್ದಾನೆ.
ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಹಾಗೂ ಸಹಾಯಕ ಶಿವಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.