ಮಾಲೂರು ಸರ್ಕಲ್ ಇನ್ ಸ್ಪೆಕ್ಟರ್ ಠಾಣೆಯಲ್ಲೇ ಆತ್ಮಹತ್ಯೆ
ಮಾಲೂರು, ಅಕ್ಟೋಬರ್ 18: ಮಾಲೂರು ಪೊಲೀಸ್ ಠಾಣೆ ಸರ್ಕಲ್ ಇನ್ ಸ್ಪೆಕ್ಟರ್ ರಾಘವೇಂದ್ರ(42) ಠಾಣೆಯಲ್ಲೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ ಹಾಗೂ ಕೆಲಸದ ಒತ್ತಡ ಅತ್ಮಹತ್ಯೆಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಆರು ತಿಂಗಳ ಹಿಂದಷ್ಟೇ ಮಾಲೂರು ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರು ರಾಘವೇಂದ್ರ. ಮಾಲೂರು ಪಟ್ಟಣದ ಅರಳೇರಿ ರಸ್ತೆ ಎಸ್ ಎಲ್ ವಿ ಲೇಔಟ್ ನಲ್ಲಿ ಮನೆ ಮಾಡಿದ್ದರು. ಇದಕ್ಕೂ ಮುನ್ನ ಲೋಕಾಯುಕ್ತ ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂಬ ಮಾಹಿತಿ ಸಹ ಇದೆ. ಕೌಟುಂಬಿಕ ಕಲಹ ಏನಿರಲಿಲ್ಲ. ಅವರು ಸ್ವತಃ ಅಕ್ಕನ ಮಗಳನ್ನೇ ಮದುವೆಯಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.[ವಿಷ ಸೇವಿಸಿದ್ದು ಇಡೀ ಕುಟುಂಬ, ಹೋಗಿದ್ದು ಮಕ್ಕಳಿಬ್ಬರ ಪ್ರಾಣ]
ಸೋಮವಾರ ರಾತ್ರಿ ರಕ್ತಚಂದನ ಸಾಗಿಸುತ್ತಿದ್ದ ಮಾಹಿತಿ ಆಧರಿಸಿ, ದಾಳಿಗೆ ತೆರಳಿದ್ದ ರಾಘವೇಂದ್ರ, ಆ ನಂತರ ಪೊಲೀಸ್ ಠಾಣೆಗೆ ಹಿಂತಿರುಗಿದ್ದರು. ತಾವೊಬ್ಬರೇ ಟಿವಿ ನೋಡುತ್ತಿದ್ದರು. ಬೆಳಗ್ಗೆ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಬಂದಿರುವ ಮಾಹಿತಿ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಎಸ್. ಗೋಪಿನಾಥ್ ಠಾಣೆಗೆ ಭೇಟಿ ನೀಡಿದರು. ಮಾಧ್ಯಮದವರು ತಮ್ಮನ್ನು ಠಾಣೆ ಒಳಗೆ ಬಿಡಬೇಕು ಎಂದು ಒತ್ತಾಯಿಸಿದರು. ಆಗ ಮಾತನಾಡಿದ ದಿವ್ಯಾ, ಬೆರಳಚ್ಚು ತಜ್ಞರು ಬಂದು ಸಾಕ್ಷ್ಯ ಸಂಗ್ರಹಿಸಿ, ರಾಘವೇಂದ್ರ ಕುಟುಂಬದವರು ಬರುವವರೆಗೆ ಯಾರನ್ನೂ ಒಳಗೆ ಬಿಡಲು ಸಾಧ್ಯವಿಲ್ಲ ಎಂದರು.[ಮದುವೆ ಒಲ್ಲೆ ಎಂದಿದ್ದಕ್ಕೆ ಪ್ರೇಯಸಿ ಮನೆ ಎದುರೇ ವಿಷ ಕುಡಿದ]
ಇದೇ ವಿಚಾರವಾಗಿ ಮಾಧ್ಯಮದವರು ಹಾಗೂ ದಿವ್ಯಾ ಗೋಪಿನಾಥ್ ಮಧ್ಯೆ ಮಾತುಕತೆ ನಡೆಯಿತು. ಆ ನಂತರ ಅವರ ಮಾತಿಗೆ ಒಪ್ಪಿದ ಮಾಧ್ಯಮದವರು ಸುಮ್ಮನಾದರು. ರಾಘವೇಂದ್ರ ಅವರು, ಆತ್ಮಹತ್ಯೆಗೆ ನಾನೇ ಕಾರಣ, ಮಗನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಡೆತ್ ನೋಟ್ ಬರೆದಿರುವ ಮಾಹಿತಿ ಸಿಕ್ಕಿದೆ. ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಎಸ್ ಪಿ ದಿವ್ಯಾ ಗೊಪಿನಾಥ್ ತಿಳಿಸಿದ್ದಾರೆ.