ಮುದ್ದೇನಹಳ್ಳಿಯಲ್ಲಿ ಬೆಂಗಳೂರು ಉತ್ತರ ವಿ.ವಿ ಕ್ಯಾಂಪಸ್
ಚಿಕ್ಕಬಳ್ಳಾಪುರ, ಆಗಸ್ಟ್ 05 : ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬೆಂಗಳೂರು ಉತ್ತರ ವಿವಿಯ ತಾತ್ಕಾಲಿಕ ಕೇಂದ್ರ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಬೆಂಗಳೂರು ಉತ್ತರ ವಿವಿಗಾಗಿ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ 110 ಎಕರೆ ಜಮೀನು ಗುರುತಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಈ ಕುರಿತು ಮಾತನಾಡಿದ್ದು, 'ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಪ್ರದೇಶ ಒಳಗೊಂಡಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ತಾತ್ಕಾಲಿಕವಾಗಿ ವಿಟಿಯು ಸ್ನಾತಕೋತ್ತರ ಕೇಂದ್ರದಲ್ಲಿ ಸ್ಥಾಪಿಸುವ ಸಾಧ್ಯತೆ ಬಗ್ಗೆ ಚಿಂತನೆ ನಡೆದಿದೆ' ಎಂದು ಹೇಳಿದರು.[ಮೂರು ಭಾಗವಾಗಲಿದೆ ಬೆಂಗಳೂರು ವಿವಿ]
'ವಿವಿ ಕ್ಯಾಂಪಸ್ ನಿರ್ಮಿಸಲು ಗುರುತಿಸಿರುವ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು ಎರಡರಿಂದ ಮೂರು ವರ್ಷಗಳಾದರೂ ಬೇಕು. ಅಲ್ಲಿವರೆಗೆ ಲಕ್ಷಾಂತರ ರೂಪಾಯಿ ಬಾಡಿಗೆ ಕೊಟ್ಟು ಬೇರೆ ಕಟ್ಟಡದಲ್ಲಿ ವಿವಿ ನಡೆಸುವುದಕ್ಕಿಂತ ತಾತ್ಕಾಲಿಕವಾಗಿ ವಿಟಿಯು ಕೇಂದ್ರದಲ್ಲಿ ನಡೆಸುವ ಉದ್ದೇಶವಿದೆ' ಎಂದು ಸಚಿವರು ತಿಳಿಸಿದರು.[ವಿಶ್ವವಿದ್ಯಾಲಯ ಒಡೆದು ಮೂರು ಭಾಗ]
ಬೆಂಗಳೂರು ವಿವಿ ಮೂರು ಭಾಗ : ಬೆಂಗಳೂರು ವಿವಿಯನ್ನು ಮೂರು ಭಾಗಗಳಾಗಿ ವಿಭಜನೆ ಮಾಡಲು ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದ ಕೆಲ ಭಾಗಗಳಿಗೆ ಅನುಕೂಲವಾಗುವಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತದೆ.
ನೂತನ ವಿವಿಯ ಕ್ಯಾಂಪಸ್ ನಿರ್ಮಾಣಕ್ಕೆ ಜಂಗಮಕೋಟೆ ಬಳಿ 200 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಇದರಲ್ಲಿ 102 ಎಕರೆ ಪ್ರದೇಶ ಲಭ್ಯವಿರುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಜಾಗ ಮಂಜೂರು ಮಾಡಲು ಸರ್ಕಾರವೂ ಒಪ್ಪಿಗೆ ಕೊಟ್ಟಿದೆ. 2017-18ನೇ ಸಾಲಿನ ಶೈಕ್ಷಣಿಕ ವರ್ಷದಿಂದ ನೂತನ ವಿವಿಯ ಶ್ವಾಶ್ವತ ಕ್ಯಾಂಪಸ್ ಕಾರ್ಯಾರಂಭ ಮಾಡಲಿದೆ.