112 ಭರವಸೆಗಳ ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯಾಂಶಗಳು
ಬೆಂಗಳೂರು, ಫೆಬ್ರವರಿ 03 : ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ 22 ಪುಟಗಳ 112 ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಚಿವರಾದ ಎಚ್.ಕೆ.ಪಾಟೀಲ, ಎಚ್.ಆಂಜನೇಯ ಮುಂತಾದವರು ಮಂಗಳವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ರೈತರು, ಮಹಿಳೆಯರು, ಅಂಗವಿಕಲರು, ದಲಿತರು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮೀಣ ಜನರ ಬದುಕು ಹಸನಾಗಿಸುವ 122 ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ. [ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ವಿವರ]
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಗ್ರಾಮ ಸ್ವರಾಜ್ಯ ತರುವುದು ಕಾಂಗ್ರೆಸ್ ಸರ್ಕಾರದ ಬಯಕೆಯಾಗಿದೆ. ಆದ್ದರಿಂದಲೇ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾಯ್ದೆಯನ್ನು ಜಾರಿಗೆ ತರಲಾಗಿದೆ' ಎಂದು ಹೇಳಿದರು. [ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ, ವೆಚ್ಚ ನಿಗದಿ]
ಫೆ.13 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ 175 ತಾಲೂಕು ಮತ್ತು 30 ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 15 ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದೆ.... ಕಾಂಗ್ರೆಸ್ ಪ್ರಣಾಳಿಕೆ ಭರವಸೆಗಳು ಚಿತ್ರಗಳಲ್ಲಿ
ಕುಡಿಯುವ ನೀರಿನ ಯೋಜನೆ
* ರಾಜ್ಯದ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು 10 ಸಾವಿರ ಕೋಟಿ ರೂ. ಯೋಜನೆ. ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ.
* ಬಡವರ ವಸತಿಗಾಗಿ 'ಕುಟುಂಬಕ್ಕೊಂದು ಸೂರು' ಯೋಜನೆ. ಪ್ರತಿ ಮನೆಯಲ್ಲಿಯೂ ಶೌಚಾಲಯ ಕಟ್ಟಿಸಲು ಕ್ರಮ. ಬಯಲು ಬರ್ಹಿದೆಸೆ ನಿರ್ಮೂಲನೆಗೆ ಗುರಿ
ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು
* ಅಕ್ರಮ ಪಂಪ್ಸೆಟ್ ಸಕ್ರಮಗೊಳಿಸುವ ಯೋಜನೆ ವಿಸ್ತರಣೆ, ಸ್ತ್ರೀ ಶಕ್ತಿ ಸಂಘಗಳಿಗೆ ವಾರ್ಷಿಕ 25 ಸಾವಿರ ರೂ. ಅನುದಾನ, ಹೈಸ್ಕೂಲ್ ಮಕ್ಕಳಿಗೆ ಸೌರದೀಪ, ಹಳ್ಳಿಗೊಂದು ಕೆರೆ ನಿರ್ಮಾಣ, ಗ್ರಾಮ ಪಂಚಾಯಿತಿಗಳಿಗೆ ಇಂಟರ್ನೆಟ್ ಸಂಪರ್ಕ.
* ಶಾಲಾ ಮಕ್ಕಳಿಗೆ ಹಾಲಿನ ಜೊತೆ ಹಣ್ಣು, ಮೊಟ್ಟೆ ವಿತರಣೆ, ಗ್ರಾಮೀಣಾಭಿವೃದ್ಧಿ ಕುರಿತು ವಿಶ್ವವಿದ್ಯಾಲಯ ಸ್ಥಾಪನೆ, ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಾಣ, ಅವರ ಅಭಿವೃದ್ಧಿಗೆ ಪ್ರತ್ಯೇಕ ನಿಧಿ ಸ್ಥಾಪನೆ.
ಪ್ರಣಾಳಿಕೆಯಲ್ಲಿನ ಭರವಸೆಗಳು
* ಪ್ರತಿ ಗ್ರಾಮವನ್ನು ಪೋಡಿ ಮುಕ್ತಗೊಳಿಸಲು ಮಾರ್ಗಸೂಚಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗೆ 10 ಕೋಟಿ ತನಕ ಅನುದಾನ ನೀಡಲು ಕ್ರಮ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ 'ವಿದ್ಯಾವಿಮಾ ಯೋಜನೆ' ಆರಂಭ, ವೃದ್ಧರಿಗೆ ಔಷಧೋಪಚಾರ ಮಾಡಲು 'ವೃದ್ಧ ಸೌಖ್ಯ' ಯೋಜನೆ ಜಾರಿ.
* ವಿಕಲಚೇತನರ ಅಗತ್ಯ ಪೂರೈಸಲು ಪಂಚಾಯಿತಿಗಳಲ್ಲಿ ಅಧಿಕಾರೇತರ ಸದಸ್ಯರನ್ನು ನೇಮಿಸಲು ಕ್ರಮ, ಕೋಮು ಸೌಹಾರ್ದ ಕಾಪಾಡಲು 'ಗ್ರಾಮ ಸೌಹಾರ್ದ ಸಮಿತಿ' ರಚನೆ, ಜನಸಂಖ್ಯೆ ಆಧರಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅನುದಾನ ಹಂಚಿಕೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲೇನಿದೆ?
* ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸುವುದು, ಗ್ರಾಮಗಳಲ್ಲಿನ ಯೋಜನೆ ಅನುಷ್ಠಾನಕ್ಕಾಗಿ 'ಗ್ರಾಮ ಯೋಜನಾ ನಿರ್ದೇಶನಾಲಯ ಸ್ಥಾಪನೆ', ಯೋಜನೆ, ಕಾರ್ಯಕ್ರಮ ಜಾರಿ ವಿಳಂಬವಾದರೆ ಶಿಸ್ತು ಕ್ರಮ, ಕುಂದುಕೊರತೆ ನಿವಾರಿಸಲು 'ಕುಂದುಕೊರತೆ ನಿವಾರಣಾ ಪ್ರಾಧಿಕಾರ' ರಚನೆ
* ರೈತರಲ್ಲಿ ವಿಶ್ವಾಸ ತುಂಬಲು 'ನಿಮ್ಮೊಂದಿಗೆ ನಾವು' ಘೋಷಣೆಯೊಂದಿಗೆ ವಿಶೇಷ ಸತ್ಯಾನ್ವೇಷಣಾ ಆಯೋಗ' ರಚನೆ, ಫಲಾನುಭವಿಗಳ ಸಹಭಾಗಿತ್ವದಡಿ 'ನಮ್ಮ ಹೊಲ-ನಮ್ಮ ರಸ್ತೆ' ನಿರ್ಮಾಣ, ಕೃಷಿ ಮಾರುಕಟ್ಟೆ ವ್ಯವಸ್ಥೆ ಪಾರದರ್ಶಕಗೊಳಿಸಲು 'ಇ-ಪೇಮೆಂಟ್ ವ್ಯವಸ್ಥೆ'
ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಅಂಶಗಳು
* ಪ್ರತಿ ಜಿಲ್ಲೆಯಲ್ಲಿಯೂ ಹಾಲು ಉತ್ಪಾದಕರ ಸಹಕಾರಿ ಸಂಘ ಸ್ಥಾಪನೆಗೆ ಕ್ರಮ, ಮೇವು ಕೊಯ್ಯುವ ಯಂತ್ರಗಳಿಗೆ ಶೇ 50ರಷ್ಟು ಪ್ರೋತ್ಸಾಹ ಧನ, ಎಲ್ಲಾ ಕೆರೆಗಳ ಒತ್ತುವರಿ ತೆರವುಗೊಳಿಸಲು ಕ್ರಮ, ಬರಪೀಡಿತ ಜಿಲ್ಲೆಗಳಲ್ಲಿ ಹನಿ ನೀರಾವರಿ ಪ್ರೋತ್ಸಾಹಿಸಲು ಶೇ 75ರಷ್ಟು ಪ್ರೋತ್ಸಾಹ ಧನ ನೀಡಿಕೆ.
* ಮಳೆ ನೀರು ಕೊಯ್ಲು ಮತ್ತು ಮರು ಬಳಕೆ ಕಡ್ಡಾಯಗೊಳಿಸಲು ಶೇ.50ರಷ್ಟು ಪ್ರೋತ್ಸಾಹ ಧನ ನೀಡಿಕೆ. ಪ್ರತಿ ಹಳ್ಳಿಗಳಿಗೆ ಸೌರಶಕ್ತಿ ಅಳವಡಿಸಲು ಶೇ 75ರಷ್ಟು ಪ್ರೋತ್ಸಾಹ ಧನ ನೀಡಿಕೆ. ಬೀದಿದೀಪ, ಕುಡಿಯುವ ನೀರು ಮತ್ತು ಅದರ ಸಂಸ್ಕರಣೆಗೆ ಬಳುಸುವ ವಿದ್ಯುತ್ಗೆ ಪೂರ್ಣ ವಿನಾಯಿತಿ.