ಯುವ ಬ್ರಿಗೇಡ್ ನಿಂದ 'ಕಾರ್ಗಿಲ್ ವಿಜಯ ದಿವಸ್' ಆಚರಣೆ
ಭಾರತಾಂಬೆಯ ಕಿರೀಟದ ಮಣಿಯನ್ನು ಮತ್ತೆ ನಮ್ಮ ಸುರ್ಪದಿಗೆ ತೆಗೆದುಕೊಂಡು ವಿಜಯದ ಪತಾಕೆಯನ್ನು ಹಾರಿಸಿದ ನಮ್ಮ ವೀರಯೋಧರ ಯಶೋಗಾಥೆಯನ್ನು ಸಾರುವ ದಿನವೇ "ಕಾರ್ಗಿಲ್ ವಿಜಯ ದಿವಸ್".
ನಮ್ಮ ರಾಷ್ಟ್ರದ ಗಡಿಯನ್ನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ನಮ್ಮ ಸೈನಿಕರ ಕಾಳಜಿಯನ್ನು ನಾವು ಯಾವತ್ತೂ ಮರೆಯುವಂತಿಲ್ಲ.
ಅದರಲ್ಲೂ ಕಳ್ಳ ಹೆಜ್ಜೆಯಿಟ್ಟು ಬಂದ ಪಾಕ್ ಸೈನಿಕರನ್ನು ವಿಪರೀತ ಪ್ರತಿಕೂಲ ಸನ್ನಿವೇಶ ಇದ್ದಾಗಲೂ ಕಾರ್ಗಿಲ್ ನಿಂದ ಓಡಿಸಿದ ನಮ್ಮ ದೇಶದ ವೀರಪುತ್ರರಲ್ಲಿ 530ಕ್ಕೂ ಹೆಚ್ಚು ಕೆಚ್ಚೆದೆಯ ಗಂಡುಗಲಿಗಳು ವೀರ ಮರಣ ಅಪ್ಪಿದ ಘಟನೆಯನ್ನಂತೂ ಮರೆಯಲು ಸಾಧ್ಯವೇ ಇಲ್ಲ.
ಅವರ ತ್ಯಾಗ, ಶೌರ್ಯದಿಂದಲೇ ಇವತ್ತಿಗೂ ನಾವು ನೆಮ್ಮದಿಯ ಬದುಕನ್ನು ಅನುಭವಿಸುತ್ತಿದ್ದೇವೆ. ನಮ್ಮ ದೇಶದ ಇತಿಹಾಸದಲ್ಲಿ ಕಾರ್ಗಿಲ್ ವಿಜಯೋತ್ಸವ ಯಾವತ್ತೂ ಅಳಿಸದೆ ನಿಲ್ಲುತ್ತದೆ.
1999 ರ ಜುಲೈ 26 ರ ಕಾರ್ಗಿಲ್ ವಿಜಯ್ ದಿವಸ್ ಅನ್ನು ನಾವು ಮತ್ತೆ ಸಂಭ್ರಮಿಸುವ ಮೂಲಕ ತಾಯ್ನಾಡಿಗಾಗಿ ಪ್ರಾಣ ಅರ್ಪಿಸಿದ ಸಮವಸ್ತ್ರದಲ್ಲಿದ್ದ ದೇಶಭಕ್ತರನ್ನು ನೆನಪಿಸುವ ಸಮಯ ಮತ್ತೆ ಬಂದಿದೆ.
ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದ ಯುವಕರ "ಯುವ ಬ್ರಿಗೇಡ್" ಕಾರ್ಗಿಲ್ ದಿವಸದ ಮಹತ್ವವನ್ನು ಇಂದಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಿಳಿಸುವ ಮತ್ತು ಸಾರ್ವಜನಿಕರಲ್ಲಿ ರಾಷ್ಟ್ರಭಕ್ತಿಯ ದೀಪವನ್ನು ಪ್ರಜ್ವಲಿಸುವ ಶ್ರೇಷ್ಟ ಕಾರ್ಯಕ್ಕೆ ಮತ್ತೆ ತಯಾರಾಗುತ್ತಿದೆ.
ಜುಲೈ 27ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಉಡುಪಿ ಜಿಲ್ಲೆ ಕಾರ್ಕಳದ ಹೆಬ್ರಿಯಲ್ಲಿರುವ PRS ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ "ಕಾರ್ಗಿಲ್ ವಿಜಯ ದಿವಸ್" ಅಂಗವಾಗಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದ ಮೂಲಕ ಚಕ್ರವರ್ತಿ ಸೂಲಿಬೆಲೆ ಅವರು ಕರಾವಳಿ ಕರ್ನಾಟಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯ ಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಅಂದು ಮಧ್ಯಾಹ್ನ 2ಗಂಟೆಗೆ SVT ವುಮೆನ್ಸ್ ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಕಾರ್ಗಿಲ್ ವಿಜಯದ ನೆನಪನ್ನು ವಿದ್ಯಾರ್ಥಿನಿಯರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಅಂದು ಸಂಜೆ 4.30 ಕ್ಕೆ ಕಾರ್ಕಳದ ಅನಂತಶಯನ ರಸ್ತೆಯಲ್ಲಿರುವ ಶ್ರೀ ವಿಘ್ನೇಶ್ವರ ವೇಣುಗೋಪಾಲ ದೇವಸ್ಥಾನದ ಶ್ರೀ ಕೃಷ್ಣ ಕೃಪಾದಲ್ಲಿ "ಕಾರ್ಗಿಲ್ ವಿಜಯ ದಿವಸ" ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜುಲೈ 28 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿಯ ಹಳೇಕೋಟೆಯಲ್ಲಿರುವ ವಾಣಿ ಪಿಯು ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆಯವರಿಂದ ಕಾರ್ಗಿಲ್ ವಿಜಯದಿನ ವಿಶೇಷ ಉಪನ್ಯಾಸ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಕಾರ್ಗಿಲ್ ಜೈತ್ರಯಾತ್ರೆಯ ಅರಿವನ್ನು ಸಾರ್ವಜನಿಕರಿಗೆ ಬಿತ್ತುವ ಸಾರ್ವಜನಿಕ ಕಾರ್ಯ ಕ್ರಮ ನಡೆಯಲಿದೆ.
ಸಂಜೆ 6 ಗಂಟೆಗೆ ಪುತ್ತೂರಿನ ಸ್ವಾಮಿ ಕಲಾಮಂದಿರ ತೆಂಕಿಲದಲ್ಲಿ ನಡೆಯುವ ಸಾರ್ವಜನಿಕ ಕಾರ್ಯ ಕ್ರಮದಲ್ಲಿಯೂ ಚಕ್ರವರ್ತಿ ಸೂಲಿಬೆಲೆಯವರು ಭಾಗವಹಿಸಿ ರಾಷ್ಟ್ರಭಕ್ತಿಯ ಪರಾಕಾಷ್ಟೆಯ ಸಂಕೇತವಾಗಿರುವ ಕಾರ್ಗಿಲ್ ವಿಜಯದ ಬಗ್ಗೆ ಮಾತನಾಡಲಿದ್ದಾರೆ.
ಜುಲೈ 29 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಭವಿಷ್ಯದ ಬೆಳಕಾಗಿರುವ ಯುವಜನಾಂಗದೊಂದಿಗೆ ಚಕ್ರವರ್ತಿ ಸೂಲಿಬೆಲೆಯವರು ಕಾರ್ಗಿಲ್ ವಿಜಯ ದಿವಸದ ವಿರೋಚಿತ ಕಥನಗಳ ಬಗ್ಗೆ ಸಂವಹನ ನಡೆಸಲಿದ್ದಾರೆ.
ಅಂದು ಸಂಜೆ 4.30ಕ್ಕೆ ಕಾಸರಗೋಡಿನ ಕುಂಬ್ಳೆಯ ಸಿಟಿಹಾಲ್ ನಲ್ಲಿ ಕಾರ್ಗಿಲ್ ವಿಜಯ ದಿನದ ಅಂಗವಾಗಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಪ್ರಧಾನ ಭಾಷಣವನ್ನು ರಾಷ್ಟ್ರಭಕ್ತರು ಆಲಿಸಬಹುದಾಗಿದೆ.
ದೇಶಭಕ್ತರ ಯುವ ಬಿಗ್ರೇಡ್ ಸಸ್ಯಸಂಕುಲದ ಉಳಿವನ್ನು ಹೆಚ್ಚಿಸುವ ಶ್ರೇಷ್ಟ ಕಾರ್ಯ "ಪೃಥ್ವಿ ಯೋಗ" ವನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡಿದೆ.
ಚಕ್ರವರ್ತಿ ಸೂಲಿಬೆಲೆಯವರ ಉಪಸ್ಥಿತಿಯಲ್ಲಿ ಮಲೆನಾಡಿನ ತಪ್ಪಲಲ್ಲಿರುವ ಪುಟ್ಟ ಊರು ಹೆಬ್ರಿಯಲ್ಲಿ ಜುಲೈ 27 ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಪೃಥ್ವಿಯೋಗ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ.