ಎತ್ತಿನಹೊಳೆ ಯೋಜನೆಯ ಟೆಂಡರ್ ಪಾರದರ್ಶಕವಾಗಿದೆ
ಕರ್ನಾಟಕ ಸರ್ಕಾರ 12,912.36 ಕೋಟಿ ರೂ. ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಿತು. ಪ್ರಸ್ತುತ ಈ ಏತ ನೀರಾವರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕರ್ನಾಟಕ ನೀರಾವರಿ ನಿಗಮದಲ್ಲಿ ಕಾಮಗಾರಿಗಳ ಟೆಂಡರ್ಗಳನ್ನು ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾಯ್ದೆಯ ನಿಯಮಾವಳಿಗಳಂತೆಯೇ ಆಹ್ವಾನಿಸಲಾಗುತ್ತಿದೆ.
ಜಲ ಸಂಪನ್ಮೂಲ ಇಲಾಖೆಯಡಿ ಕೈಗೆತ್ತಿಕೊಳ್ಳಲಾಗುತ್ತಿರುವ ಎತ್ತಿನಹೊಳೆ ಯೋಜನೆಯೂ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾಯ್ದೆಯ ನಿಯಮಾವಳಿಗಳಲ್ಲಿ ಸೂಚಿಸಿರುವ ಮಾರ್ಗದರ್ಶಿ ಸೂತ್ರಗಳನ್ವಯ ಟೆಂಡರ್ ಮುಖಾಂತರ ಕೈಗೆತ್ತಿಕೊಳ್ಳಲಾಗುತ್ತಿದೆ. [ಎತ್ತಿನಹೊಳೆ ಯೋಜನೆಗೆ ತಡೆಯಾಜ್ಞೆ]
ಕಾಮಗಾರಿಗಳಿಗೆ ಆಹ್ವಾನಿಸಲಾಗುವ ಟೆಂಡರ್ಗಳಲ್ಲಿ ಅರ್ಹ ಮತ್ತು ಸಮರ್ಥ ಗುತ್ತಿಗೆದಾರರು ಮಾತ್ರ ಭಾಗವಹಿಸಬೇಕೆಂಬ ಸುದುದ್ದೇಶದಿಂದ ನಿಯಮಾವಳಿಗಳನ್ನು ಮಾನದಂಡವಾಗಿಟ್ಟುಕೊಂಡು ಆಯಾ ಕಾಮಗಾರಿಗಳ ತಾಂತ್ರಿಕ ವಿಶಿಷ್ಟತೆ, ಸ್ಥಳೀಯ ಅಗತ್ಯಗಳು ಹಾಗೂ ಇತರೆ ಪ್ರಮುಖ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಹಾಗೂ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಲಾಗುತ್ತಿದೆ. [ಎತ್ತಿನಹೊಳೆ ವಿರೋಧಿಸಿ ಬೃಹತ್ ಪ್ರತಿಭಟನೆ]
ಈ ಹಿನ್ನಲೆಯಲ್ಲಿ ವಿಧಿಸಲಾಗುವ ಷರತ್ತು ಮತ್ತು ನಿಬಂಧನೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವ ಎಲ್ಲಾ ಗುತ್ತಿಗೆದಾರರಿಗೆ ಸಮಾನಾಂತರವಾಗಿ ಅನ್ವಯಿಸುವುದರಿಂದ ಯಾವುದೇ ಸ್ವಜನ ಪಕ್ಷಪಾತಕ್ಕೆ ಅವಕಾಶವಿರುವುದಿಲ್ಲ. ಹೀಗೆ ಆಹ್ವಾನಿಸಲಾಗುವ ಟೆಂಡರ್ಗಳು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತವೆ. ಅರ್ಹ ಮತ್ತು ಆಸಕ್ತ ಗುತ್ತಿಗೆದಾರರು ರಾಜ್ಯದ, ರಾಷ್ಟ್ರದ ಅಥವಾ ಜಗತ್ತಿನ ಯಾವುದೇ ಮೂಲೆಯಿಂದ ಆನ್ಲೈನ್ ಮುಖಾಂತರ ಇ-ಟೆಂಡರಿಂಗ್ ಪ್ರಕ್ರಿಯೆಯಲ್ಲಿ ಭಾಗಹಿಸಲು ಅವಕಾಶವಿರುತ್ತದೆ.
ಈ ಹಿನ್ನೆಲೆಯಲ್ಲಿ ಸರ್ಕಾರವು ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳ ಟೆಂಡರ್ಗಳನ್ನು ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಹಾಗೂ ನಿಯಮಾನುಸಾರ ಆಹ್ವಾನಿಸಿ, ಪ್ರಕ್ರಿಯೆ ಜರುಗಿಸಿ, ಗುತ್ತಿಗೆ ವಹಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್. ರುದ್ರಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.