ಸಿದ್ದರಾಮಯ್ಯನವರೇ ನಿಮ್ಮನ್ನು ಪರ್ಮನೆಂಟಾಗಿ ಜೈಲಿಗೆ ಕಳಿಸ್ತೀನಿ, ಬಿಎಸ್ವೈ
ನಾನು ಜೈಲಿಗೆ ಹೋಗಿ ಬಂದವನೆಂದು ಸಿದ್ದರಾಮಯ್ಯ ಲೇವಡಿ ಮಾಡುತ್ತಿದ್ದಾರೆ. ಅವರ ಸಾಲು ಸಾಲು ಹಗರಣಕ್ಕೆ ಸಂಬಂಧ ಪಟ್ಟಂತೆ ಎಲ್ಲಾ ದಾಖಲೆಗಳು ನನ್ನಲ್ಲಿವೆ. ಅವರನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸುತ್ತೇನೆ, ಯಡಿಯೂರಪ್ಪ.
ಗುಂಡ್ಲುಪೇಟೆ, ಮಾ 22: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಉಪಚುನಾವಣೆಯ ಹೊಸ್ತಿಲಲ್ಲಿರುವ ಗುಂಡ್ಲುಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಹರಿಹಾಯ್ದಿದ್ದಾರೆ.
ಹೋದಲೆಲ್ಲಾ ಸಿದ್ದರಾಮಯ್ಯ ನನ್ನ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ಸಾಲು ಸಾಲು ಹಗರಣಕ್ಕೆ ಸಂಬಂಧ ಪಟ್ಟಂತೆ ಎಲ್ಲಾ ದಾಖಲೆಗಳು ನನ್ನಲ್ಲಿವೆ. ನಿಮ್ಮನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸುತ್ತೇನೆಂದು ಯಡಿಯೂರಪ್ಪ ಹೇಳಿದ್ದಾರೆ.
ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಜೊತೆ ಬುಧವಾರ (ಮಾ 22) ಬೇಗೂರು ಪಂಚಾಯತಿ ವ್ಯಾಪ್ತಿಯ ಚಿಕ್ಕಾಟೆ, ರಾಘವಾಪರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಡಿಯೂರಪ್ಪ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು. ಆಯಕಟ್ಟಿನ ಎಲ್ಲಾ ಹುದ್ದೆಗಳನ್ನು ಭ್ರಷ್ಟ ಅಧಿಕಾರಿಗಳಿಗೆ ನೀಡಿ, ತಾನೊಬ್ಬ ಭ್ರಷ್ಟ ಸಿಎಂ ಎನ್ನುವುದನ್ನು ಸಿದ್ದರಾಮಯ್ಯ ನಿರೂಪಿಸಿದ್ದಾರೆಂದು ಯಡಿಯೂರಪ್ಪ ಹೇಳಿದ್ದಾರೆ.
ಇದಕ್ಕೂ ಮೊದಲು ಮೈಸೂರಿನಲ್ಲಿ ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂದು ದೂರುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ, ಇದುವರೆಗೆ ಬಿಡುಗಡೆ ಮಾಡಿದ ಹಣವನ್ನು ಹೇಗೆ ಸದ್ವಿನಿಯೋಗ ಮಾಡಿಕೊಂಡಿದೆ ಎನ್ನುವುದರ ಬಗ್ಗೆ ವಿವರ ನೀಡಲಿ ಎಂದು ಬಿಎಸ್ವೈ ತಿರುಗೇಟು ನೀಡಿದ್ದಾರೆ. ಸಿದ್ದು ವಿರುದ್ದ ಬಿಎಸ್ವೈ ವಾಕ್ ಪ್ರಹಾರ, ಮುಂದೆ ಓದಿ..
ಪಕ್ಷದ ಅಭ್ಯರ್ಥಿ ಪರ ಬಿಎಸ್ವೈ ಮತಯಾಚನೆ
ಗು೦ಡ್ಲುಪೇಟೆ ಉಪಚುನಾವಣಾ ಪ್ರಯುಕ್ತ ಕ್ಷೇತ್ರದಾದ್ಯ೦ತ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ ಯಡಿಯೂರಪ್ಪ, ಪಕ್ಷದ ಅಭ್ಯರ್ಥಿ ನಿರ೦ಜನ್ ಕುಮಾರ್ ಅವರ ಪರವಾಗಿ ಮತಯಾಚಿಸಿದರು. ಬಿಜೆಪಿಗೆ ಮತನೀಡುವ ಮೂಲಕ ಇಲ್ಲಿನ ಜನತೆ ಮು೦ದಿನ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆಯಲಿದ್ದಾರೆ ಎ೦ದು ಯಡಿಯೂರಪ್ಪ ಹೇಳಿದರು.
ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಾಯಿಸುತ್ತದೆ
ಈ ಉಪಚುನಾವಣೆಯ ಫಲಿತಾ೦ಶ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಬಹುದಾಗಿದ್ದು, ಕಾ೦ಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರಗಳಿ೦ದ ರೋಸಿಹೋಗಿರುವ ಕ್ಷೇತ್ರದ ಜನತೆ ಬಿಜೆಪಿಗೆ ಮತನೀಡುವ ಮೂಲಕ ಮು೦ದಿನ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆಯಲಿದ್ದಾರೆ - ಯಡಿಯೂರಪ್ಪ
ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆ
ಸಿದ್ದರಾಮಯ್ಯ ನನ್ನನ್ನು ಜೈಲಿಗೆ ಹೋಗಿ ಬಂದವರು ಎಂದು ಅವಮಾನಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ದುರಾಡಳಿತದ ಬಹು ದೊಡ್ಡ ಪಟ್ಟಿ ನನ್ನಲ್ಲಿದೆ, ಜೊತೆಗೆ ಅದಕ್ಕೆ ಪೂರಕವಾದ ದಾಖಲೆಗಳೂ ನಮ್ಮಲ್ಲಿವೆ. ನಿಮ್ಮನ್ನು ಪರ್ಮನೆಂಟಾಗಿ ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸುತ್ತೇನೆ - ಯಡಿಯೂರಪ್ಪ.
ಕೇಂದ್ರ ನೀಡಿದ ದುಡ್ಡಿನ ಲೆಕ್ಕ ಕೊಡಿ
ಕೇಂದ್ರ ಸರ್ಕಾರ ನೀಡಿರುವ ಹಣವನ್ನು ರಾಜ್ಯ ಸರ್ಕಾರ ಯಾವ ಉದ್ದೇಶಕ್ಕೆ ಬಳಸಿಕೊಂಡಿದೆ ಎನ್ನುವುದು ಸಿದ್ದರಾಮಯ್ಯ ಸ್ಪಷ್ಟ ಪಡಿಸಬೇಕು. ಕೇಂದ್ರದಿಂದ ಬರುವ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಿಎಂ ವಿರುದ್ದ ಯಡಿಯೂರಪ್ಪ ಆರೋಪ.
ನಿಮ್ಮ ಜಾತಕ ನನ್ನ ಬಳಿಯಿದೆ ಎಂದು ಬಿಎಸ್ವೈ
ನಿಮ್ಮ ಜಾತಕ ನನ್ನ ಬಳಿ ಇದೆ ಮುಖ್ಯಮಂತ್ರಿಗಳೇ, ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣೆ ಗೆಲ್ಲುತ್ತೇನೆ ಎಂದು ನೀವು ಭಾವಿಸಬೇಡಿ. ಕೇಂದ್ರದಲ್ಲಿ ನಮ್ಮ ಸರಕಾರವಿದೆ - ಯಡಿಯೂರಪ್ಪ ಎಚ್ಚರ.