ಯಡಿಯೂರಪ್ಪ ಅವರದು ಕೇರಂ ಆಟದ ತಂತ್ರ: ಸುರೇಶ್ ಕುಮಾರ್ ಸಂದರ್ಶನ
ಬೆಂಗಳೂರು, ಆಗಸ್ಟ್ 17: "ಒಬ್ಬ ಕೇರಂ ಆಟಗಾರನಿಗೆ ಕಾಯಿ ಪೋಚ್ ನೊಳಗೆ ಹಾಕುವುದಕ್ಕೆ ಎಷ್ಟು ಜೋರಾಗಿ ಹೊಡೆಯಬೇಕು ಅನ್ನೋದು ಗೊತ್ತಿರಬೇಕು. ಆಗಷ್ಟೇ ಗೆಲುವು ಸಾಧ್ಯ" ಎಂದು ರಾಜ್ಯ ಬಿಜೆಪಿ ವಕ್ತಾರರೂ ಹಾಗೂ ಮಾಜಿ ಸಚಿವರಾದ ಸುರೇಶ್ ಕುಮಾರ್ ಹೇಳಿದರು.
ಅವರು ಮಾತನಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪನವರ ಬಗ್ಗೆ. ಒನ್ಇಂಡಿಯಾ ಕನ್ನಡಕ್ಕೆ ಅವರು ನೀಡಿದ ಸಂದರ್ಶನದಲ್ಲಿ ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಹೇಳಿದ್ದಾರೆ. ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದು ಹೋದ ಮೇಲೆ ಮಾಧ್ಯಮಗಳಲ್ಲಿ ವರದಿ ಆದ ವಿಚಾರಗಳಿಗೆ ಕೂಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈಗಿನ ಸ್ಥಿತೀಲಿ 80 ಸ್ಥಾನ ಗೆಲ್ಲಬಹುದು, ಅಮಿತ್ ಶಾ ಫುಲ್ 'ಕ್ಲಾಸ್'
ಒಟ್ಟಾರೆ ವಿಧಾನಸಭಾ ಚುನಾವಣೆಯನ್ನು ಕಣ್ಣೆದುರು ಇರಿಸಿಕೊಂಡ ಸಂದರ್ಭದಲ್ಲಿ ಅವರು ನೀಡಿದ ಈ ಸಂದರ್ಶನ ಹಲವು ಕಾರಣಗಳಿಗೆ ಮಹತ್ವದ್ದು. ಬಿಜೆಪಿಯಲ್ಲಿ ಇದೇನು ದಿಢೀರ್ ಅಂತ ಚಟುವಟಿಕೆ ನಿಂತುಹೋಗಿದೆ? ಯಡಿಯೂರಪ್ಪನವರು ಏಕಾಏಕಿ ಗಪ್ ಚುಪ್ ಆಗಿಬಿಟ್ಟರಲ್ಲಾ ಏಕೆ, ರಾಜ್ಯ ವಿಧಾನಸಭೆ ಚುನಾವಣೆಗೆ ಎಲ್ಲ ತಯಾರಿ ಆಗಿ ಹೋಗಿದೆಯಂತೆ ಹೌದಾ?
ಶಾ ಏಟಿಗೆ ಎಚ್ಚೆತ್ತ ರಾಜ್ಯ ಬಿಜೆಪಿ ನಾಯಕರು ಶುಕ್ರವಾರದಿಂದ ಬೀದಿಗೆ
ಇಂಥ ಪ್ರಶ್ನೆಗಳಿಗೆ ಸುರೇಶ್ ಕುಮಾರ್ ಅವರು ನೀಡಿದ ಉತ್ತರವೇನು ಅಂತ ತಿಳಿದುಕೊಳ್ಳಬೇಕಾ? ಹಾಗಿದ್ದರೆ ಮುಂದೆ ಓದಿ.
ಪ್ರಶ್ನೆ: ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿಗೆ ಅಮಿತ್ ಶಾ ಅವರು ಅಸಮಾಧಾನ ವ್ಯಕ್ತಪಡಿಸಿದರಂತೆ ಹೌದಾ?
ಸುರೇಶ್ ಕುಮಾರ್: ಅಮಿತ್ ಶಾ ಅವರು ಬಿಜೆಪಿಯ ನಾನಾ ವಿಭಾಗದ ಮುಖಂಡರು, ಶಾಸಕರ ಜತೆಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು. ನಾನು ಅದರಲ್ಲಿ ಶಾಸಕರ ಸಭೆಯಲ್ಲಿ ಪಾಲ್ಗೊಂಡಿದ್ದೆ. ಅವರು ಅಸಮಾಧಾನ ಅಂತ ಹೇಳಿದ್ದು ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಕಾರ್ಯವೈಖರಿ ಬಗ್ಗೆ. ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಯಿಂದ ಇದ್ದರಷ್ಟೇ ಸಾಲದು. ಬೀದಿಗೆ ಇಳಿದು ಹೋರಾಟ ಮಾಡಬೇಕು ಅಂತ ಸೂಚಿಸಿದ್ದು ಹೌದು.
ದಕ್ಷಿಣ ಕನ್ನಡದಲ್ಲಿ ಅಂಥ ಅನಾಹುತ ಆಗಿದೆ. ಆದರೆ ಸಮರ್ಥವಾದ ಹೋರಾಟ ಸಂಘಟಿಸಿಲ್ಲ. ಅದೇ ಕೇರಳದಲ್ಲಿ ಆದ ವಿಚಾರವನ್ನು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಲಾಗಿದೆ ಎಂದರು.
ಪ್ರಶ್ನೆ: ಸರಕಾರಗಳು ಯೋಜನೆಗಳ ಮೂಲಕ ಜನರನ್ನು ದುಡಿಮೆಯಿಂದ ವಿಮುಖ ಮಾಡುತ್ತಿವೆಯಾ?
ಸುರೇಶ್ ಕುಮಾರ್: ಹೌದು, ಜನರಿಗೆ ಮೀನು ಹಿಡಿಯುವುದನ್ನು ಹೇಳಿಕೊಡಬೇಕೇ ವಿನಾ ಸರಕಾರವೇ ಮೀನನ್ನು ಕೊಡಬಾರದು. ಸ್ಪರ್ಧಾ ಮನೋಭಾವ ಬೆಳೆಸಬೇಕು. ಇಂದಿರಾ ಕ್ಯಾಂಟೀನ್ ನಂಥ ಯೋಜನೆಗಳಿಂದ ಹೊರಗಿನಿಂದ ಬಂದಂಥವರಿಗೆ ಅನುಕೂಲವಾಗುತ್ತದೆ. ಇವತ್ತು ಹೋಟೆಲ್ ಗಳ ದರ ತುಂಬಾ ದುಬಾರಿಯಾಗಿದೆ.
ಆದರೆ, ಅದೇ ಹೋಟೆಲ್ ಗಳವರನ್ನು ಕರೆದು ಸಭೆ ಮಾಡಿ, ಕಡಿಮೆ ದರಕ್ಕೆ ಹೋಟೆಲ್ ನವರೇ ಆಹಾರ ಪದಾರ್ಥ ಮಾರುವ ವ್ಯವಸ್ಥೆ ಮಾಡಬಹುದಿತ್ತು. ಈ ಹಿಂದೆ ನಾನು ಮೈಸೂರು ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿದ್ದಾಗ ದಸರೆ ಸಂದರ್ಭದಲ್ಲಿ ಹೋಟೆಲ್ ನವರ ಸಭೆ ಕರೆದು, ಕಡಿಮೆ ಮೊತ್ತದಲ್ಲಿ ಆಹಾರ ಪದಾರ್ಥ ಒದಗಿಸುವ ವ್ಯವಸ್ಥೆ ಮಾಡಿಸಿದ್ದೆ.
ಪ್ರಶ್ನೆ: ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆ ನೀವೇನಂತೀರಿ?
ಸುರೇಶ್ ಕುಮಾರ್: ಇಷ್ಟು ಕಾಲ ಕೇಳದ ಬೇಡಿಕೆ ದಿಢೀರನೇ ಹುಟ್ಟಿಕೊಂಡಿದ್ದು ಹೇಗೆ? ಇದು ಪ್ಯೂರ್ಲಿ ರಾಜಕೀಯದಾಟ. ಇದರ ಮುಂಚೂಣಿಯಲ್ಲಿರುವವರು ಯಾರು ನೋಡಿ, ಎಂ.ಬಿ.ಪಾಟೀಲರು. ಆ ಸಮುದಾಯದಲ್ಲಿ ಒಡಕು ಮೂಡಿಸಬೇಕಿದೆ. ಆ ಮೂಲಕ ಅನುಕೂಲ ಯಾರಿಗೆ ಅನ್ನೋದು ತುಂಬ ಸುಲಭವಾಗಿ ಗೊತ್ತಾಗುವ ವಿಚಾರ.
ಪ್ರಶ್ನೆ: ಇಂಥ ವಿಚಾರಗಳ ಬಗ್ಗೆ ಬಿಜೆಪಿ ಏಕೆ ಪ್ರತಿಕ್ರಿಯಿಸುತ್ತಿಲ್ಲ?
ಸುರೇಶ್ ಕುಮಾರ್: ಪ್ರತ್ಯೇಕ ಧರ್ಮ, ಕರ್ನಾಟಕ ಧ್ವಜ..ಇವೆಲ್ಲ ಭಾವನಾತ್ಮಕ ವಿಚಾರಗಳು. ತುಂಬ ಹುಷಾರಾಗಿ ನಿರ್ವಹಿಸಬೇಕು. ಧಾರ್ಮಿಕ ವಿಚಾರವಾದ್ದರಿಂದ ಆ ಸಮುದಾಯದ ಧಾರ್ಮಿಕ ಮುಖಂಡರೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.
ವೀರೇಂದ್ರ ಪಾಟೀಲರನ್ನು ಪಕ್ಷದಿಂದ ತೆಗೆದುಹಾಕುವ ಮೂಲಕ ಯಾವ ಸಮುದಾಯವನ್ನು ಕಾಂಗ್ರೆಸ್ ಕಳೆದುಕೊಂಡಿತೋ ಪ್ರತ್ಯೇಕ ಧರ್ಮದ ವಿಚಾರದ ಮೂಲಕ ಮತ್ತೆ ಸೆಳೆಯಲು ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ.
ಪ್ರಶ್ನೆ: ಇದೇನು ಯಡಿಯೂರಪ್ಪನವರು ದಿಢೀರ್ ಅಂತ ಮೌನವಾಗಿಬಿಟ್ಟರಲ್ಲಾ? ಸಿದ್ದರಾಮಯ್ಯ ಅವರ ರಾಜಕೀಯ ಪೆಟ್ಟುಗಳಿಂದ ಕಂಗಾಲಾಗಿದ್ದಾರಾ?
ಸುರೇಶ್ ಕುಮಾರ್: ನಿಮಗೆ ಕೇರಂ ಆಟ ಗೊತ್ತಾ? ಅದರಲ್ಲಿ ಕಾಯಿಯನ್ನು ಪೋಚ್ ನೊಳಗೆ ಹಾಕಬೇಕು ಅಂದರೆ ಹೇಗೆಂದರೆ ಹಾಗೆ ಆಡಿದರೆ ಆಗಲ್ಲ. ಎಷ್ಟು ಜೋರಾಗಿ ಸ್ಟ್ರೈಕರ್ ನಿಂದ ಹೊಡೆದರೆ ಕಾಯಿ ಪೋಚ್ ಸೇರುತ್ತದೆ ಎಂಬುದು ಗೊತ್ತಿರಬೇಕು. ಇದೊಂದು ತಂತ್ರಗಾರಿಕೆ. ಯಾವಾಗ ಆಕ್ರಮಣಕಾರಿ ಧೋರಣೆ, ಯಾವಾಗ ಹೇಗೆ ನಡೆದುಕೊಳ್ಳಬೇಕು ಎಂಬುದರ ಆಧಾರದಲ್ಲಿ ಅನುಸರಿಸುತ್ತಿರುವ ತಂತ್ರಗಾರಿಕೆ.
ಪ್ರಶ್ನೆ: ಒಟ್ಟಾರೆ ಬಿಜೆಪಿಯಲ್ಲೇ ಚಟುವಟಿಕೆ ಇಲ್ಲವಲ್ಲಾ?
ಸುರೇಶ್ ಕುಮಾರ್: ಇಪ್ಪತ್ತೈದು ದಿನ ಪಕ್ಷ ಸಂಘಟನೆಯ ವಿಸ್ತಾರಕ್ ಕಾರ್ಯಕ್ರಮದಲ್ಲಿ ತೊಡಗಿದ್ದಿವಿ. ಆ ನಂತರ ನಾನು ಇಪ್ಪತ್ತು ದಿನ ಮೈಸೂರಿನಲ್ಲಿದ್ದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಪ್ರವಾಸದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಿವಿ. ಇವೆಲ್ಲ ಕಾರ್ಯಕ್ರಮದಲ್ಲಿ ಬಿಜೆಪಿಯ ನಾಯಕರು, ಮುಖಂಡರು, ಕಾರ್ಯಕರ್ತರು ತೊಡಗಿಕೊಂಡಿದ್ದರು. ಆದ್ದರಿಂದ ಇತರೆ ಚಟುವಟಿಕೆ ಕಂಡುಬಂದಿಲ್ಲ.
ಪ್ರಶ್ನೆ: ವಿಧಾನಸಭೆ ಚುನಾವಣೆಗೆ ಬಿಜೆಪಿಯಲ್ಲಿ ಎಲ್ಲ ತಯಾರಿ ಮುಗಿದುಹೋಗಿದೆ ಅಂತ ಮಾತಿದೆ. ನಿಜವಾ?
ಸುರೇಶ್ ಕುಮಾರ್: ಇಲ್ಲ, ಇದೆಲ್ಲ ಸುಳ್ಳು. ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದರು ಅನ್ನುವಂಥ ಮಾತಿದು. ಅಂಥ ಯಾವ ತಯಾರಿಯೂ ಆಗಿಲ್ಲ. ನೂರೈವತ್ತು ಸ್ಥಾನಗಳನ್ನು ಗೆಲ್ಲಬೇಕು ಅನ್ನೋದು ನಮ್ಮ ಗುರಿ. ಅದಕ್ಕೆ ತಯಾರಿ ನಡೆದಿದೆ. ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ, ಅಷ್ಟೇ.