ಚಿಕ್ಕಮಗಳೂರಲ್ಲಿ ದಲಿತರ ಮನೆಯಲ್ಲಿ ಅಕ್ಕಿರೊಟ್ಟಿ ಮೆದ್ದ ಬಿಎಸ್ವೈ
ಚಿಕ್ಕಮಗಳೂರಿಗೆ ಕಾಲಿಟ್ಟ ಬಿಎಸ್ ವೈ ಜನಸಂಪರ್ಕ ಅಭಿಯಾನ. ಚಿಕ್ಕಮಗಳೂರಿಗೆ ಆಗಮಿಸಿದ ಬಿಎಸ್ ವೈಗೆ ಹೃದಯಸ್ಪರ್ಶಿ ಸ್ವಾಗತ. ದಲಿತರ ಮನೆಯಲ್ಲಿ ಉಪಹಾರ ಸ್ವೀಕರಿಸಿದ ಬಿಎಸ್ ವೈ.
ಚಿಕ್ಕಮಗಳೂರು, ಜೂನ್ 19: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಜನಸಂಪರ್ಕಜೂನ್ 19ರಂದು ಅಭಿಯಾನ ಚಿಕ್ಕಮಗಳೂರನ್ನು ಪ್ರವೇಶಿಸಿತು. ಈ ಅಭಿಯಾನದಲ್ಲಿ ಯಡಿಯೂರಪ್ಪ ಅವರು ಕಾಲಿಟ್ಟಿರುವ 22ನೇ ಜಿಲ್ಲೆ ಇದಾಗಿದೆ.
ಮೂಡಿಗೆರೆಯ ಮರ್ಲೆ ಎಂಬಲ್ಲಿ ದಲಿತರ ಕಾಲೋನಿಗೆ ಭೇಟಿ ನೀಡಿದ ಯಡಿಯೂರಪ್ಪ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಮ್ಮ ಕಾರ್ಯಕ್ರಮ ಆರಂಭಿಸಿದರು. ನಂತರ ಅಲ್ಲಿನ ದಲಿತರ ಮನೆಯಲ್ಲಿ ಅಕ್ಕಿರೊಟ್ಟಿ ಮತ್ತಿತರ ಉಪಹಾರ ಸೇವಿಸಿದರು.
ಆನಂತರ, ತಮಿಳ್ ಕಾಲೋನಿಗೆ ಭೇಟಿ ನೀಡಿದ ಯಡಿಯೂರಪ್ಪನವರಿಗೆ ಅಲ್ಲಿ ಭರ್ಜರಿ ಸ್ವಾಗತ ದೊರೆಯಿತು. ಅಲ್ಲಿನ ನಿವಾಸಿಗಳು ಆರತಿ ಎತ್ತುವ ಮೂಲಕ ಯಡಿಯೂರಪ್ಪ ಅವರನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಎಸ್ ವೈ ಅವರು, ಅಲ್ಲಿನ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರ ಸಂಕಷ್ಟಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಮುಂತಾದವರು ಉಪಸ್ಥಿತರಿದ್ದರು.
ಶಿವಮೊಗ್ಗದಲ್ಲೂ ಯಶಸ್ವಿ ಅಭಿಯಾನ: ಭಾನುವಾರ (ಜೂನ್ 18ರಂದು) ಬಿಎಸ್ ವೈ ಅವರ ಶಿವಮೊಗ್ಗ ಜಿಲ್ಲೆಯ ಜನಸಂಪರ್ಕ ಅಭಿಯಾನವೂ ಯಶಸ್ವಿಯಾಗಿ ನೆರವೇರಿತ್ತು.
ವಿನೋಬ ನಗರದ ಹುಡ್ಕೋ ಕಾಲೋನಿಯ ಹಿಂದುಳಿದ ವರ್ಗಗಳ ನಿವಾಸಿಗಳ ಮನೆಗಳಲ್ಲಿ ಯಡಿಯೂರಪ್ಪ ಅವರು ಭೋಜನ ಸ್ವೀಕರಿಸಿದರು. ಆನಂತರ, ಎನ್.ಇ.ಎಸ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.