ಸಿದ್ದರಾಮಯ್ಯಗೆ 65 ಕೋಟಿ ಕಿಕ್ ಬ್ಯಾಕ್ : ಬಿಎಸ್ವೈ ಮತ್ತೊಂದು ಬಾಂಬ್
ಯಡಿಯೂರಪ್ಪನವರ ಆರೋಪಗಳು ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.ಮೈಸೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರು, ಫೆಬ್ರವರಿ 12: ಯಡಿಯೂರಪ್ಪನವರ ಆರೋಪಗಳು ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸ್ಟೀಲ್ ಫ್ಲೈ ಓವರ್ ನಲ್ಲಿ 150 ಕೋಟಿ ಡೀಲ್ ನಡೆದಿದೆ ಎಂಬ ಯಡಿಯೂರಪ್ಪ ಆರೋಪಕ್ಕೆ ಸಿದ್ಧರಾಮಯ್ಯ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. [ಸ್ಟೀಲ್ ಫ್ಲೈ ಓವರ್ ನಲ್ಲಿ 150 ಕೋಟಿ ಡೀಲ್-ಯಡಿಯೂರಪ್ಪ ಬಾಂಬ್]
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಇಂದು (ಫೆ. 12) ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿದ್ದರು. ಈ ಸಂದರ್ಭ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ರೀತಿ ಕಾಂಗ್ರೆಸಿನ ಹಲವು ನಾಯಕರೂ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪನವರ ಬಳಿ ದಾಖಲೆಗಳಿದ್ದರೆ ಬಹಿರಂಗ ಪಡಿಸಲಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸವಾಲೆಸೆದಿದ್ದಾರೆ. [ಐಟಿ ದಾಳಿಯಲ್ಲಿ ಶಾಸಕ ನಾಗರಾಜ್ ಮನೆಯಲ್ಲಿ ಸಿಕ್ಕಿದೆಷ್ಟು ಗೊತ್ತೆ?]
ಮಹಾನ್ ಭಂಡ
ಯಡಿಯೂರಪ್ಪ ಆರೋಪಕ್ಕೆ ಕಿಡಿಕಿಡಿಯಾದ ಸಿದ್ಧರಾಮಯ್ಯ, 'ಯಡಿಯೂರಪ್ಪ ಮಹಾನ್ ಭಂಡ. ಅವರ ವಿರುದ್ದವೇ 15 ಕೇಸುಗಳಿವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅವನ್ನೆಲ್ಲಾ ವಜಾ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲವಾಗಿದ್ದರೆ ಇಷ್ಟೊತ್ತಿಗೆತ್ತಿಗೆ ಯಡಿಯೂರಪ್ಪ ಮತ್ತೆ ಜೈಲಿನಲ್ಲಿ ಇರಬೇಕಾಗಿತ್ತು. ಅವರಿಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ,' ಎಂದರು.
ದಾಖಲೆ ಬೇಕು; ಆಣೆ ಬೇಕಾಗಿಲ್ಲ
ನನಗೆ ಯಾವುದೇ ಆಣೆ ಪ್ರಮಾಣದಲ್ಲಿ ನಂಬಿಕೆ ಇಲ್ಲ. ನ್ಯಾಯಾಲಯದಲ್ಲಿ ದಾಖಲೆ ಕೇಳುತ್ತಾರೆಯೇ ಹೊರತು ಪ್ರಮಾಣ ಮಾಡಿಸಿಕೊಂಡು ಕಳುಹಿಸುವುದಿಲ್ಲ. ಯಡಿಯೂರಪ್ಪ ವಿರುದ್ದ ಕಾನೂನು ಹೋರಾಟದ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಈ ಸಂದರ್ಭ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮತ್ತಿತರ ಕಾಂಗ್ರೆಸ್ ಮುಖಂಡರು ಸಿಎಂ ಜೊತೆಗಿದ್ದರು.
ದಾಖಲೆ ನೀಡಲಿ
ಯಡಿಯೂರಪ್ಪನವರು ಸಿದ್ದರಾಮಯ್ಯ ಮೇಲೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, "ಯಡಿಯೂರಪ್ಪನವರು ದಾಖಲೆ ಇದ್ದರೆ ನೀಡಬೇಕು. ಅದು ಬಿಟ್ಟು ಸುಮ್ಮನೆ ಏನೋ ಹೇಳುವುದು ಸರಿಯಲ್ಲ. ಆರೋಪ ಮಾಡುವುದು ಸುಲಭ. ದಾಖಲೆ ಇದ್ದರೆ ಅದನ್ನು ಅವರು ಸಂಬಂಧಪಟ್ಟ ಲೋಕಾಯುಕ್ತಕ್ಕಾಗಲಿ, ಇ.ಡಿ.ಗಾಗಲೀ, ಆದಾಯ ತೆರಿಗೆಗಾಗಲೀ ನೀಡಬೇಕು. ಅದನ್ನು ಬಿಟ್ಟು ಬರೀ ಆರೋಪ ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ," ಎಂದು ತಿಳಿಸಿದರು.
ಯಡಿಯೂರಪ್ಪ ಹೇಳಿದ್ದೇನು?
ಇಂದು ಬೆಂಗಳೂರಿನ ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಸ್ಟೀಲ್ ಫ್ಲೈ ಓವರಿನಲ್ಲಿ ಒಟ್ಟು 150 ಕೋಟಿ ಡೀಲ್ ನಡೆದಿದೆ. ಇದರಲ್ಲಿ 65 ಕೋಟಿ ಸಿದ್ದರಾಮಯ್ಯನವರ ಕೈ ತಲುಪಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಹಿಂದೂಗಳ ಭಾವನೆಗೆ ಧಕ್ಕೆ
ತುಮಕೂರಿನಲ್ಲಿ ಮಾತನಾಡಿರುವ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪ್ ಸಿಂಹ, "ರಾಜ್ಯದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಕರಣಗಳು ಹೆಚ್ಚುತ್ತಿವೆ. ಶಿವಮೊಗ್ಗ, ಶಿರಾ ಹಾಗೂ ತಿಪಟೂರಿನಲ್ಲಿ ನಡೆದ ಘಟನೆಗಳೇ ಇದಕ್ಕೆ ಸಾಕ್ಷಿ. ಅಲ್ಪಸಂಖ್ಯಾತ ಸಮುದಾಯದ ಯುವಕರು ಹಿಂದು ಮಹಿಳೆಯರನ್ನು ತುಚ್ಛವಾಗಿ ಬೈದಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಇಂತಹ ಘಟನೆ ಮರು ಕಳಿಸಿದರೆ ಕೈ ಕಟ್ಟಿ ಕೂರುವುದಿಲ್ಲ. ಉಗ್ರ ಹೋರಾಟಕ್ಕೆ ಮಾಡಬೇಕಾಗುತ್ತದೆ," ಎಂದು ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.