ಅನಂತ್-ಯಡಿಯೂರಪ್ಪ ಸಂಭಾಷಣೆಯೇ ತಿರುಚಿದ್ದಂತೆ, ಕೇಸ್ ದಾಖಲಿಸಿದ ಬಿಜೆಪಿ
ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ನಡುವಿನ ಸಂಭಾಷಣೆಯ ಸಿಡಿ ನಕಲಿ ಅಂತ ಬಿಜೆಪಿ ದೂರು ನೀಡಿದೆ. ವೀಡಿಯೋವನ್ನು ತಿರುಚಲಾಗಿದೆ ಎಂದು ಹೇಳಿ ಕಾಂಗ್ರೆಸಿನ ಮೂವರು ಸಚಿವರು ಮತ್ತು ಓರ್ವ ವಿಧಾನ ಪರಿಷತ್ ಸದಸ್ಯರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿದೆ.
ಬೆಂಗಳೂರು, ಫೆಬ್ರವರಿ 19: ರಾಜ್ಯದಲ್ಲಿ ವಿವಾದದ ಅಲೆ ಎಬ್ಬಿಸಿದ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ನಡುವಿನ ಸಂಭಾಷಣೆಯ ಸಿಡಿ ನಕಲಿ ಅಂತ ಬಿಜೆಪಿ ದೂರು ನೀಡಿದೆ. ವೀಡಿಯೋವನ್ನು ತಿರುಚಲಾಗಿದೆ ಎಂದು ಹೇಳಿರುವ ಬಿಜೆಪಿ ನಾಯಕರು ಮೂವರು ಸಚಿವರು ಮತ್ತು ಓರ್ವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿದೆ.
ಬಿಜೆಪಿ ವಕ್ತಾರ ಅಶ್ವಥ್ಥ ನಾರಾಯಣ, ಪರಿಷತ್ ಸದಸ್ಯ ವಿ ಸೋಮಣ್ಣ ಮತ್ತು ಬೆಂಗಳೂರು ವಿಜೆಪಿ ನಾಯಕ ಸುಬ್ಬಣ್ಣ, ಕಾಂಗ್ರೆಸ್ ಸಚಿವರಾದ ಬಸವರಾಜ ರಾಯರೆಡ್ಡಿ, ಎಂ. ಬಿ ಪಾಟೀಲ್, ಕೆ. ರಮೇಶ್ ಕುಮಾರ್ ಹಾಗೂ ಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ವಿರುದ್ಧ ದೂರು ನೀಡಿದ್ದಾರೆ.[ಮಲ್ಲೇಶ್ವರಂ ಠಾಣೆ ಮೆಟ್ಟಿಲೇರಿದ ಯಡಿಯೂರಪ್ಪ -ಅನಂತ್ ಸಂಭಾಷಣೆ]
ಕಳೆದ ಸೋಮವಾರ (ಫೆ. 13) ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿದ್ದರು. ಭಾನುವಾರದ ಬಿಜೆಪಿ ಕಾರ್ಯಕಾರಣಿಯಲ್ಲಿ ಉಭಯ ನಾಯಕರ ನಡುವೆ ನಡೆದ ಸಂಭಾಷಣೆ ಇದಾಗಿತ್ತು. ಇದರಲ್ಲಿ ಬಿಜೆಪಿ ನಾಯಕರು ಹೈಕಮಾಂಡಿಗೆ ನೀಡಿದ ಕಪ್ಪದ ವಿಚಾರ ಪ್ರಸ್ತಾಪಿಸಿದ್ದ ದೃಶ್ಯಾವಳಿಗಳಿದ್ದವು.
ಸಾರ್ವಜನಿಕರನ್ನು ಹಾದಿ ತಪ್ಪಿಸಲು ಮತ್ತು ಇಬ್ಬರು ನಾಯಕರ ಜನಪ್ರಿಯತೆಗೆ ಮಸಿ ಬಳೆಯುವ ಉದ್ದೇಶದಿಂದ ಈ ಸಿಡಿ ಬಿಡುಗಡೆ ಮಾಡಲಾಗಿದೆ. ಎಲೆಕ್ಟ್ರಾನಿಕ್ ದಾಖಲೆಯನ್ನು ತಿರುಚಿದ ಪ್ರಕರಣದಲ್ಲಿ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.[ಎಸಿಬಿ ಅಂಗಳ ತಲುಪಿದ ಅನಂತ್ ಕುಮಾರ್, ಯಡಿಯೂರಪ್ಪ ಗುಪ್ತ ಮಾತುಕತೆ]
ಈ ಹಿಂದೆ ಇದೇ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಐವನ್ ಡಿ ಸೋಜ, ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.