ಯಡಿಯೂರಪ್ಪ ಮುತ್ಸದ್ಧಿತನ ಮೆರೆದಿದ್ದಾರೆ - ಸೊಗಡು ಶಿವಣ್ಣ
ನೊಟೀಸ್ ಹಿಂಪಡೆದ ನಂತರ ಪ್ರತಿಕ್ರಿಯೆ ನೀಡಿರುವ ಸೊಗಡು ಶಿವಣ್ಣ, “ಯಡಿಯೂರಪ್ಪ ನೊಟೀಸ್ ಹಿಂದಕ್ಕೆ ಪಡೆಯುವ ಮೂಲಕ ಮುತ್ಸದ್ಧಿತನ ಮೆರೆದಿದ್ದಾರೆ. ಆದರೆ ನಮ್ಮ ಬೇಡಿಕೆ ಇನ್ನೂ ಇಡೇರಿಲ್ಲ,” ಎಂದು ಹೇಳಿದ್ದಾರೆ.
ತುಮಕೂರು, ಏಪ್ರಿಲ್ 23: ಹಲವು ಸುತ್ತಿನ ಜಂಗೀ ಕುಸ್ತಿಯ ನಂತರ ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಅತೃಪ್ತ ಬಿಜೆಪಿ ನಾಯಕರಿಗೆ ನೀಡಲಾಗಿದ್ದ ನೊಟೀಸ್ ಹಿಂತೆಗೆದುಕೊಳ್ಳಲಾಗಿದೆ.
ಬಿಜೆಪಿ ಶಿಸ್ತು ಸಮಿತಿ ಪಕ್ಷ ವಿರೋಧಿ ಚಟುವಟಿಕೆಗೆ ಪ್ರೇರೇಪಣೆ ನೀಡುತ್ತಿದ್ದೀರಿ ಎಂದು ಹೇಳಿ 2016ರ ಅಕ್ಟೋಬರಿನಲ್ಲಿ ಸೊಗಡು ಶಿವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಚಿವ ರವೀಂದ್ರನಾಥ್, ಡಾ.ಶಿವಯೋಗಿಸ್ವಾಮಿ, ಬಿಜೆಪಿ ಮಾಜಿ ರಾಜ್ಯ ಕಾರ್ಯದರ್ಶಿ ಎಂ.ಬಿ.ನಂದೀಶ್ ಮೊದಲಾದವರಿಗೆ ನೊಟೀಸ್ ಜಾರಿ ಮಾಡಿತ್ತು.['ಹೈಕಮಾಂಡ್ ಸಲಹೆ ಪಾಲಿಸದ ಬಿಎಸ್ ವೈ, ಮೂಲ ಕಾರ್ಯಕರ್ತರಿಗೆ ಅನ್ಯಾಯ']
ನೊಟೀಸ್ ಹಿಂಪಡೆದ ನಂತರ ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಸೊಗಡು ಶಿವಣ್ಣ, "ಯಡಿಯೂರಪ್ಪ ನೊಟೀಸ್ ಹಿಂದಕ್ಕೆ ಪಡೆಯುವ ಮೂಲಕ ಮುತ್ಸದ್ಧಿತನ ಮೆರೆದಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಆದರೆ ನಮ್ಮ ಬೇಡಿಕೆ ಇನ್ನೂ ಇಡೇರಿಲ್ಲ," ಎಂದು ಹೇಳಿದ್ದಾರೆ.
ಈ ಹಿಂದೆ ಅತೃಪ್ತ ಬಿಜೆಪಿಯ ನಾಯಕರು ಏಪ್ರಿಲ್ 27 ರಂದು ಬೆಂಗಳೂರಿನಲ್ಲಿ ಸಭೆ ಸೇರುವ ಯೋಜನೆ ಹಾಕಿಕೊಂಡಿದ್ದರು. ಆ ನಂತರ ತಮ್ಮ ದೂರುಗಳನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ಹೇಳಿಕೊಳ್ಳಲು ನಿರ್ಧರಿಸಿದ್ದರು. ಇದರ ಸೂಚನೆ ಸಿಗುತ್ತಿದ್ದಂತೆ ಯಡಿಯೂರಪ್ಪ ಅವರೆಲ್ಲರಿಗೂ ನೀಡಿದ್ದ ನೊಟೀಸ್ ಹಿಂದಕ್ಕೆ ಪಡೆದಿದ್ದಾರೆ.[ಸೊಗಡು ಶಿವಣ್ಣ ಮನೆಯಲ್ಲಿ ಈಶ್ವರಪ್ಪ, ಅತೃಪ್ತರು ಬುಸುಬುಸು!]
ಆದರೆ ಅತೃಪ್ತರು ಮುಂದಿಟ್ಟಿದ್ದ ಬೇಡಿಕೆಯನ್ನು ಯಡಿಯೂರಪ್ಪ ಇಡೇರಿಸಿಲ್ಲ. ಮುಖ್ಯವಾಗಿ ಯಡಿಯೂರಪ್ಪ ತುಮಕೂರು ಬಿಜೆಪಿ ಜಿಲ್ಲಾ ಅಧ್ಯಕ್ಷರನ್ನಾಗಿ ಜ್ಯೋತಿ ಗಣೇಶ್ ನೇಮಕ ಮಾಡಿದ್ದರು. ಆದರೆ ಜ್ಯೋತಿ ಗಣೇಶ್ ತೆಗೆಯಬೇಕು. ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಬೇಕು ಎಂಬುದು ಸೊಗಡು ಶಿವಣ್ಣ ಮೊದಲಾದವರ ಬೇಡಿಕೆಯಾಗಿದೆ. ಆದರೆ ಇದನ್ನಿನ್ನೂ ಯಡಿಯರಪ್ಪ ಇಡೇರಿಸಲ್ಲ.
ಈ ಹಿಂದೆ ಫೆಬ್ರವರಿ 11, 12ರ ಮೊದಲು ಎಲ್ಲಾ ಅತೃಪ್ತರ ಸಮಸ್ಯೆಯನ್ನೂ ಬಗೆಹರಿಸುವಂತೆ ಯಡಿಯೂರಪ್ಪನವರಿಗೆ ಅಮಿತ್ ಶಾ ಸೂಚನೆ ನೀಡಿದ್ದರು. ಆದರೆ ದೆಹಲಿಗೆ ಹೋಗಿ ಬಂದಿದ್ದ ಯಡಿಯೂರಪ್ಪ ಸಮಸ್ಯೆ ಬಗೆ ಹರಿಸಿರಲಿಲ್ಲ.
ಕೊನೆಗೆ ಸೊಗಡು ಶಿವಣ್ಣ ಮನೆಗೆ ಕೆ.ಎಸ್ ಈಶ್ವರಪ್ಪ ಭೇಟಿ ನೀಡಿ ಮುಂದಿನ ಕಾರ್ಯಯೋಜನೆ ಬಗ್ಗೆ ಮಾತುಕತೆಯನ್ನೂ ನಡೆಸಿದ್ದರು. ಈ ಸಂದರ್ಭ ಮಾತನಾಡಿದ್ದ ಶಿವಣ್ಣ, ದೆಹಲಿಯಲ್ಲಿ ಆದ ಮಾತುಕತೆಯಂತೆ ಸಮಿತಿ ಮಾಡಲಾಗಿತ್ತು. ನಮ್ಮ ಸಮಸ್ಯೆಗಳನ್ನು ಕೇಳಿ ಪರಿಹರಿಸಬೇಕಿತ್ತು. ಆಗ-ಈಗ ಅಂತ ಹೇಳಿದ್ದು ಬಿಟ್ಟರೆ ಈ ವಿಚಾರದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ," ಎಂದು ಹೇಳಿದ್ದರು.
ಇದೀಗ ಅತೃಪ್ತರು ಬೆಂಗಳೂರಿನಲ್ಲಿ ಸಭೆ ಸೇರಲು ಹೊರಡುತ್ತಿದ್ದಂತೆ ಅನಿವಾರ್ಯವಾಗಿ ಅವರಿಗೆಲ್ಲಾ ನೀಡಿದ್ದ ನೊಟೀಸ್ ಹಿಂತೆಗೆದುಕೊಳ್ಳಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅತೃಪ್ತರ ಬೇಡಿಕೆ ಇಡೇರಿಸುತ್ತಾರೋ ಕಾದು ನೋಡಬೇಕು.