ಸಿಎಂ ಸಿದ್ದರಾಮಯ್ಯ ಅಂಜುಬುರುಕ, ಖರ್ಗೆ ಕಂಡರೆ ಅವರಿಗೆ ಗಡಗಡ
ಯಾದಗಿರಿ, ಜೂ 24: ಸಚಿವ ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಯಾದಗಿರಿಯ ಹಿರಿಯ ಕಾಂಗ್ರೆಸ್ ಶಾಸಕ ಎ ಬಿ ಮಾಲಕರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಖರ್ಗೆ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನನಗೆ ಸಚಿವ ಸ್ಥಾನ ತಪ್ಪಿಸಿದ್ದು, ಅವರೊಬ್ಬ ಅಂಜುಬುರುಕ, ಮಲ್ಲಿಕಾರ್ಜುನ ಖರ್ಗೆಯವರನ್ನು ಕಂಡರೆ ಗಡಗಡ ನಡುಗುತ್ತಾರೆಂದು ಮಾಲಕರೆಡ್ಡಿ, ಸಿದ್ದು ವಿರುದ್ದ ಕಿಡಿಕಾರಿದ್ದಾರೆ. (ಭಿನ್ನಮತೀಯರ ಸಂಭವಾಮಿ ಯುಗೇ ಯುಗೇ)
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ದವೂ ವಾಕ್ ಪ್ರಹಾರ ನಡೆಸಿದ ಮಾಲಕರೆಡ್ಡಿ, ಖರ್ಗೆ ತಾವು ರಾಜಕೀಯದಲ್ಲಿ ಬೆಳೆದು ಬಂದ ದಾರಿಯನ್ನು ಮರೆತಿದ್ದಾರೆ.
1972 ರಲ್ಲಿ ಖರ್ಗೆಯವರನ್ನು ರಾಜಕೀಯಕ್ಕೆ ತಂದವರು ನಾವು ಮತ್ತು ಧರಂಸಿಂಗ್. ಈಗ ಪುತ್ರ ವ್ಯಾಮೋಹದಿಂದ ತನ್ನ ಬೆಂಬಲಿಗರಿಗೆ ಖರ್ಗೆ ಮೋಸ ಮಾಡಿದ್ದಾರೆಂದು ಮಾಲಕರೆಡ್ಡಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಶುಕ್ರವಾರ (ಜೂ 24) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಾಲಕರೆಡ್ಡಿ, ಖರ್ಗೆಯವರಿಗೆ ತಮ್ಮ ಕುಟುಂಬ ಮೇಲೆ ಬಂದರೆ ಸಾಕು. ಬೇರೆಯವರಿಗೆ ಏನಾದರೂ ಚಿಂತೆಯಿಲ್ಲ.
ಈ ಭಾಗದ ಪ್ರಭಾವಿ ನಾಯಕರಾಗಿದ್ದರೂ, ಹೈಕಮಾಂಡ್ ನಲ್ಲಿ ಉತ್ತಮ ಹಿಡಿತವಿದ್ದರೂ ಹೈದರಾಬಾದ್ ಕರ್ನಾಟಕದ ಅಭಿವೃದ್ದಿಯ ಬಗ್ಗೆ ಖರ್ಗೆಯವರಿಗೆ ಚಿಂತೆಯಿಲ್ಲ ಎಂದು ಮಾಲಕರೆಡ್ಡಿ ಆರೋಪಿಸಿದ್ದಾರೆ. (ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆಯಲ್ಲಿ ಸಿದ್ದು ಮೇಲುಗೈ)
ಕೋಟ್ಯಾಧಿಪತಿಗಳಾಗಿದ್ದವರು ಮತ್ತೆ ಮತ್ತೆ ಕೋಟ್ಯಾಧಿಪತಿಗಳು ಆಗಬೇಕು, ಮಿಕ್ಕವರು ಗುಲಾಮರಾದರೂ ಖರ್ಗೆಯವರಿಗೆ ಚಿಂತೆಯಿಲ್ಲ. ಖರ್ಗೆಗೆ ಪುತ್ರ ವ್ಯಾಮೋಹ, ಸಿಎಂಗೆ ಖರ್ಗೆ ಭಯ ಎಂದು ಮಾಲಕರೆಡ್ಡಿ ಲೇವಡಿ ಮಾಡಿದ್ದಾರೆ.