ಮಡಿಕೇರಿ ಗಲಭೆಗೆ ಹೊರರಾಜ್ಯದಿಂದ ಜನರು ಬಂದಿದ್ದರು : ಪರಂ
ಬೆಂಗಳೂರು, ನವೆಂಬರ್ 28 : 'ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ನಡೆದ ಗಲಭೆಗೆ ಕೇರಳ ಮತ್ತು ಇತರ ಕಡೆಗಳಿಂದ ಜನರು ಆಗಮಿಸಿದ್ದರು' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ವಿಧಾನಪರಿಷತ್ತಿಗೆ ಲಿಖಿತ ಉತ್ತರ ನೀಡಿದ್ದಾರೆ. ಆದರೆ, ವಿಎಚ್ಪಿ ಕಾರ್ಯಕರ್ತ ಕುಟ್ಟಪ್ಪ ಸಾವು ಹೇಗೆ ಆಯಿತು? ಎಂಬುದು ಸ್ಪಷ್ಟವಾಗಿಲ್ಲ.
ಚಳಿಗಾಲದ ಅಧಿವೇಶನದ ಕೊನೆಯ ದಿನದ ಕಲಾಪವಾದ ಶುಕ್ರವಾರ ಪರಮೇಶ್ವರ ಅವರು ಮಡಿಕೇರಿ ಗಲಭೆಯ ಕುರಿತು ಲಿಖಿತ ಉತ್ತರ ನೀಡಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು ಕೋಲಾಹಲ ಎಬ್ಬಿಸಿದ ಹೊತ್ತಿನಲ್ಲೇ ಅವರು ಈ ಉತ್ತರ ನೀಡಿದ್ದಾರೆ. [ಕುಟ್ಟಪ್ಪ ಸಾವು: ಆಕಸ್ಮಿಕವೋ, ಪೂರ್ವ ನಿಯೋಜಿತವೋ?]
'ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕೇರಳ ಮತ್ತು ಇತರ ಕಡೆಗಳಿಂದ 5 ರಿಂದ 6 ಸಾವಿರ ಜನರು ಆಗಮಿಸಿದ್ದರು. ಇವರಲ್ಲಿ ಎಸ್ಡಿಪಿಐ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಟಿಪ್ಪು ಸುಲ್ತಾನ್ ಅಭಿಮಾನಿಗಳ ಸಂಘಕ್ಕೆ ಸೇರಿದವರು ಇದ್ದರು' ಎಂದು ಪರಮೇಶ್ವರ ಅವರು ಉತ್ತರದಲ್ಲಿ ತಿಳಿಸಿದ್ದಾರೆ. [ಕುಟ್ಟಪ್ಪ ಕುಟುಂಬಕ್ಕೆ 5 ಲಕ್ಷ ಪರಿಹಾರ]
ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ಗಲಭೆ ನಡೆದಿತ್ತು. ವಿಶ್ವಹಿಂದೂ ಪರಿಷತ್ ಮುಖಂಡ ಕುಟ್ಟಪ್ಪ ಸೇರಿದಂತೆ ಮೂವರು ಗಲಭೆಯಲ್ಲಿ ಮೃತಪಟ್ಟಿದ್ದರು, ಹಲವು ಜನರು ಗಾಯಗೊಂಡಿದ್ದರು. ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ನೇತೃತ್ವದಲ್ಲಿ ಗಲಭೆಯ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಪರಮೇಶ್ವರ ಕೊಟ್ಟ ಉತ್ತರವೇನು? ಚಿತ್ರಗಳಲ್ಲಿ ನೋಡಿ......
ಮಡಿಕೇರಿ ಗಲಭೆ : ಗೃಹ ಸಚಿವರು ಕೊಟ್ಟ ಉತ್ತರ
ಚಳಿಗಾಲದ ಅಧಿವೇಶನದ ಕೊನೆಯ ದಿನದ ಕಲಾಪವಾದ ಶುಕ್ರವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ವಿಧಾನಪರಿಷತ್ತಿನಲ್ಲಿ ಮಡಿಕೇರಿಯಲ್ಲಿ ನವೆಂಬರ್ 10ರಂದು ನಡೆದ ಗಲಭೆಯ ಕುರಿತು ಲಿಖಿತ ಉತ್ತರ ನೀಡಿದ್ದಾರೆ. ಗಲಭೆ, ಕುಟ್ಟಪ್ಪ ಅವರ ಸಾವಿನ ಕುರಿತು ವಿವರಣೆ ನೀಡಿದ್ದಾರೆ.
'ಬೇರೆ ರಾಜ್ಯದಿಂದ ಜನರು ಬಂದಿದ್ದರು'
'ನವೆಂಬರ್ 10ರಂದು ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕೇರಳ ಮತ್ತು ಇತರ ರಾಜ್ಯಗಳಿಂದ ಸುಮಾರು 5 ರಿಂದ 6 ಸಾವಿರ ಜನರು ಆಗಮಿಸಿದ್ದರು. ಇವರಲ್ಲಿ ಎಸ್ಡಿಪಿಐ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಟಿಪ್ಪು ಸುಲ್ತಾನ್ ಅಭಿಮಾನಿಗಳ ಸಂಘಕ್ಕೆ ಸೇರಿದವರು ಇದ್ದರು' ಎಂದು ಪರಮೇಶ್ವರ ಅವರು ಉತ್ತರ ನೀಡಿದ್ದಾರೆ.
ಗಲಭೆ ಹೇಗೆ ಆರಂಭವಾಯಿತು?
'ಎಸ್ಡಿಪಿಐ, ಪಿಎಫ್ಐ, ಟಿಪ್ಪು ಅಭಿಮಾನಿಗಳ ಸಂಘದವರು ಕಾವೇರಿ ಕಲಾಕ್ಷೇತ್ರದ ಬಳಿ ಇದ್ದರು. ಈ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿದ್ದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿ ಮಾತಿನ ಚಕಮಕಿ ನಡೆದು, ಕಲ್ಲು ತೂರಾಟ ಆರಂಭವಾಯಿತು'.
ಕಲ್ಲುತೂರಾಟದಿಂದ ಕುಟ್ಟಪ್ಪ ಗಾಯಗೊಂಡರು
'ಮಡಿಕೇರಿ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ಟಿಪ್ಪು ಅಭಿಮಾನಿಗಳು ಜಿಲ್ಲಾ ಆಸ್ಪತ್ರೆ ಹತ್ತಿರ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ವಿಎಚ್ಪಿ ಮುಖಂಡ ಕುಟ್ಟಪ್ಪ ಆಸ್ಪತ್ರೆಯ ಆವರಣ ಗೋಡೆ ಬಳಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು'.
ಕುಟ್ಟಪ್ಪ ಸಾವಿನ ಬಗ್ಗೆ ಸ್ಪಷ್ಟತೆ ಇಲ್ಲ
ಮಡಿಕೇರಿ ಗಲಭೆ ಸಂದರ್ಭದಲ್ಲಿ ಕುಟ್ಟಪ್ಪ ಕೌಂಪೌಂಡ್ ಮೇಲಿಂದ ಬಿದ್ದು ಮೃತಪಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಹೇಳಿದ್ದರು. ಆದರೆ, ಗೃಹ ಸಚಿವರು ನೀಡಿದ ಉತ್ತರದಲ್ಲಿ ಅವರ ಸಾವಿಗೆ ಕಾರಣವೇನು? ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.