ಬ್ರಿಟಿಷರ ಕಾಲದಲ್ಲಿ ಕೆಂಪೇಗೌಡ್ರು ಇದ್ದಿದ್ದರೆ ಟಿಪ್ಪು ಆಗುತ್ತಿದ್ದರು, ಎಚ್ಡಿಕೆ
ಮೈಸೂರು, ನ 14: ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ವಿಮಾನ ನಿಲ್ದಾಣದ ಹೆಸರಿಡಬೇಕು ಎನ್ನುವ ಕೆಲವು ಸಾಹಿತಿಗಳು, ಮೊದಲು ಇತಿಹಾಸವನ್ನು ಸರಿಯಾಗಿ ಅರಿತುಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿಂದು (ನ 14) ಕೆಂಪೇಗೌಡರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಎಚ್ಡಿಕೆ, ಕೆಂಪೇಗೌಡರ ಕಾಲದಲ್ಲಿ ಒಂದು ವೇಳೆ ಬ್ರಿಟಿಷರು ರಾಜ್ಯಕ್ಕೆ ಕಾಲಿಟ್ಟಿದ್ದರೆ ಕೆಂಪೇಗೌಡರು, ಟಿಪ್ಪು ಸುಲ್ತಾನ್ ಆಗುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಮೈಸೂರಿನ ಮಹಾರಾಜ ಮೈದಾನದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿಗಳು ಮೊದಲು ಜಾತಿ ಒಡೆಯುವುದನ್ನು ನಿಲ್ಲಿಸಬೇಕೆಂದು ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದಾರೆ. (ಟಿಪ್ಪು ಜಯಂತಿ ವಿವಾದದ ಒಳ-ಹೊರಗು)
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ ಪೀಠಾಧಿಪತಿಗಳು, ದೇವೇಗೌಡ, ಕುಮಾರಸ್ವಾಮಿ, ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಬಿಜೆಪಿಯವರು ಜಾತಿ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ. ಹೋರಾಟ, ಪ್ರತಿಭಟನೆ ರಾಜ್ಯದ ಅಭಿವೃದ್ದಿಗೆ ಪೂರಕವಾಗಿರ ಬೇಕೆಂದು ಮನವಿ ಮಾಡಿದ್ದಾರೆ.
ಜಯಂತಿಯಿಂದ ಸಮುದಾಯ ಉದ್ದಾರ ಆಗುತ್ತಾ, ಕುಮಾರಸ್ವಾಮಿ.. ಮುಂದ ಓದಿ..
ಎಚ್ ಡಿ ದೇವೇಗೌಡ
ದೂರಾಲೋಚನೆಯ ಕೆಂಪೇಗೌಡರ ಬಗೆಗಿನ ಗೊಂದಲ ನಿವಾರಣೆಯಾಗಿದ್ದಕ್ಕಾಗಿ ಸಂತೋಷವಾಗುತ್ತಿದೆ. ಕೆಂಪೇಗೌಡರ ಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಿದರಿಗೆ ನನ್ನ ಅಭಿನಂದನೆಗಳು. ಸಮುದಾಯದ ಇಂತಹ ಕಾರ್ಯಕ್ರಮಗಳು ರಾಜ್ಯದೆಲ್ಲಡೆ ನಡೆಯುತ್ತಿರ ಬೇಕೆಂದು ದೇವೇಗೌಡ ಮನವಿ ಮಾಡಿದ್ದಾರೆ.
ಜಾತಿ ಒಡೆಯುವುದನ್ನು ನಿಲ್ಲಿಸಲಿ
ಒಕ್ಕಲಿಗ, ಲಿಂಗಾಯಿತ, ದಲಿತ ಅದರಲ್ಲಿ ಒಳಜಾತಿ ಹೀಗೆ ಮುಖ್ಯಮಂತ್ರಿಗಳು ಜಾತಿ ಒಡೆಯುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿಗಳಿಂದ ಈ ರೀತಿಯ ಪ್ರಮಾದ ನಡೆಯುತ್ತಿರುವುದು ಇದು ಎರಡನೇ ಬಾರಿ, ಇದು ಅಭಿವೃದ್ದಿಗೆ ಪೂರಕವಲ್ಲ - ದೇವೇಗೌಡ.
ಕುಮಾರಸ್ವಾಮಿ
ಕೆಂಪೇಗೌಡ್ರ ಇತಿಹಾಸ 15ನೇ ಮತ್ತು ಟಿಪ್ಪು ಇತಿಹಾಸ 17ನೇ ಶತಮಾನದ್ದು. ಸಾಹಿತಿಗಳು ಮೊದಲು ಚರಿತ್ರೆ ಓದಿಕೊಂಡು ಭಾಷಣ ಮಾಡಲು ಬರಬೇಕು. ಕೆಂಪೇಗೌಡರ ದೂರದೃಷ್ಠಿಯಿಂದ ಬೆಂಗಳೂರು ಇಂದು ಜಗತ್ಪ್ರಸಿದ್ದವಾಗಲು ಸಾಧ್ಯವಾಯಿತು - ಕುಮಾರಸ್ವಾಮಿ.
ಜಯಂತಿಯಿಂದ ಸಮುದಾಯ ಉದ್ದಾರ ಆಗುತ್ತಾ?
ರಾಜ್ಯದ ಬೊಕ್ಕಸಕ್ಕೆ ಬರುತ್ತಿರುವ ಹಣದಲ್ಲಿ ಶೇ. 60 ಪಾಲು ಬೆಂಗಳೂರಿನದ್ದು, ಬೆಂಗಳೂರು ನಿರ್ಮಾತೃ ಕೆಂಪೇಗೌಡರು. ಯಾವುದಾದರೂ ಜಯಂತಿ ಆಚರಿಸಿದರೆ ಅದರಿಂದ ಆ ಸಮುದಾಯ ಉದ್ದಾರವಾಗುತ್ತದೆ ಎನ್ನುವುದು ಬರೀ ಭ್ರಮೆ. ಹಾಗಿದ್ದಲ್ಲಿ ವರ್ಷದ 365ದಿನಾನೂ ಜಯಂತಿ ಆಚರಿಸಿಕೊಂಡು ಇರಬೇಕಾಗುತ್ತದೆ - ಕುಮಾರಸ್ವಾಮಿ.
ಪ್ರಶಸ್ತಿ ಹಿಂದಿರುಗಿಸುವುದು ತಪ್ಪು
ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿ ವಾಪಸ್ ನೀಡುತ್ತಿರುವುದು ಸರಿಯಲ್ಲ. ದೇವನೂರು ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವ ಇದೆ. ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಈ ಬಗ್ಗೆ ದೇವನೂರು ಯೋಚಿಸಬೇಕಾಗಿತ್ತು. ಈಗ ಪ್ರಶಸ್ತಿ ವಾಪಸ್ ನೀಡುತ್ತಿರುವುದು ಸರಿಯಲ್ಲ. ಸಾಹಿತಿಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅವಲೋಕಿಸಿ ಪ್ರಶಸ್ತಿ ನೀಡಲಾಗುತ್ತದೆ, ವಾಪಸ್ ಮಾಡಿದರೆ ಅದರಿಂದ ಪ್ರಶಸ್ತಿಗೆ ಅಗೌರವ ತೋರಿಸಿದಂತಾಗುತ್ತದೆ ಎಂದು ಸಾಹಿತಿಗಳಲ್ಲಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.