ಸಿಂದಗಿ: ನಡು ಬೀದಿಯಲ್ಲೇ ಸೀರೆ ಬಿಚ್ಚಿ ಮಹಿಳೆ ಮೇಲೆ ಹಲ್ಲೆ
ವಿಜಯಪುರ, ಫೆಬ್ರವರಿ. 12 : ಕೊಲೆ ಆರೋಪಿ ಪರ ವಾದಿಸಿದ್ದಕ್ಕೆ ನಡು ಬೀದಿಯಲ್ಲಿಯೇ ಮಹಿಳಾ ಸಂಘದ ಕಾರ್ಯಕರ್ತೆ ಮೇಲೆ ಅಮಾನೀಯವಾಗಿ ಹಲ್ಲೆ ಮಾಡಿರುವ ಘಟನೆ ಭಾನುವಾರ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ನಡೆದಿದೆ.
ಬಂದಾಳದ ನಿವಾಸಿ ಮೃತ ಶ್ರೀಕಾಂತ್ ಕೊಲೆ ಆರೋಪವನ್ನು ಪೋಷಕರು ರೇಣುಕಾ ಎನ್ನುವ ಯುವತಿ ಮೇಲೆ ಹೊರಿಸಿದ್ದರು. ಇದನ್ನು ಪ್ರಶ್ನಿಸಿದ ಮಹಿಳಾ ಕಾರ್ಯಕರ್ತೆ ಸುಜಾತ ಅವರು ಆರೋಪಿ ರೇಣುಕಾ ಪರ ವಾದ ಮಾಡಿದ್ದರು.
ಇದರಿಂದ ರೊಚ್ಚಿಗೆದ್ದ ಶ್ರೀಕಾಂತ್ ಪೋಷಕಕರು ಸುಜಾತ ಅವರನ್ನು ನಡು ರಸ್ತೆಯಲ್ಲಿಯೇ ಅರೆಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿದ್ದಾರೆ.
ಕೆಲ ದಿನಗಳಿಂದ ಕಾಣೆಯಾಗಿದ್ದ ಶ್ರೀಕಾಂತ್ ನ ಮೃತ ದೇಹ ಬೂದಿವಾಳದ ಕಾಲುವೆಯಲ್ಲಿ ಪತ್ತೆಯಾಗಿತ್ತು. ಈ ಕೊಲೆ ಆರೋಪವನ್ನು ಶ್ರೀಕಾಂತನ ಪೋಷಕರು ರೇಣುಕಾ ಎನ್ನುವರ ಮೇಲೆ ಹೊರಿಸಿದ್ದರು.
ಈಶಾನ್ಯ ರಾಜ್ಯ ಸಾರಿಗೆ ಸಂಸ್ಥೆಯ ಸಿಂದಗಿ ಘಟಕದ ಚಾಲಕ ಮತ್ತು ನಿರ್ವಾಹಕ, ಬಂದಾಳ ಗ್ರಾಮದ ಶ್ರೀಕಾಂತನ ಶವ ಶನಿವಾರ ಬೂದಿಹಾಳ ಗ್ರಾಮದ ಬಳಿಯ ಕಾಲುವೆಯಲ್ಲಿ ಪತ್ತೆಯಾಗಿತ್ತು.
ಶ್ರೀಕಾಂತ ಸಿಂದಗಿ ಪಟ್ಟಣದಲ್ಲಿ ರೇಣುಕಾ ಎಂಬಾಕೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಈಚೆಗೆ ರೇಣುಕಾ ಮತ್ತೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಶ್ರೀಕಾಂತ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಶ್ರೀಕಾಂತನ ಶವ ಕಾಲುವೆಯಲ್ಲಿ ಪತ್ತೆಯಾಗುತ್ತಿದ್ದಂತೆ ರೇಣುಕಾ ವಿರುದ್ಧ ಅನುಮಾನ ವ್ಯಕ್ತಪಡಿಸಿ ಕೊಲೆ ಶಂಕೆಯ ದೂರು ದಾಖಲಿಸಿದ್ದರು. ಪೊಲೀಸರು ರೇಣುಕಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಈ ಅಮಾನವೀಯ ಹಲ್ಲೆಯನ್ನು ಮಹಿಳಾ ಸಂಘಟನೆಗಳ ತೀವ್ರ ಖಂಡಿಸಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿವೆ.