ದಲಿತ ಮುಖ್ಯಮಂತ್ರಿ ಕೂಗಿನ ಹಿಂದೆ ನಾನಿರಲಿಲ್ಲ: ಪರಂ ಸ್ಪಷ್ಟನೆ
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕನಸಿನ ಮಾತು. ರಾಜ್ಯದಲ್ಲಿ ಕಾಂಗ್ರೆಸ್ ಬೇರುಗಳು ಗಟ್ಟಿಯಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು, ಜೂನ್ 5: ಕೆಲ ತಿಂಗಳುಗಳ ಹಿಂದೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಎದ್ದಿದ್ದ ದಲಿತ ಮುಖ್ಯಮಂತ್ರಿ ಕೂಗಿನ ಹಿಂದೆ ತಾವಿರಲಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
''ಕೆಲ ತಿಂಗಳುಗಳ ಹಿಂದೆ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಕೂಗು ಕಾಂಗ್ರೆಸ್ ಪಾಳಯದಲ್ಲಿ ಎದ್ದಿತ್ತು. ಅದಕ್ಕೆ ನಾನೇ ಪರೋಕ್ಷ ಕಾರಣ ಎಂದೂ ಹೇಳಲಾಯಿತು. ನಾನೇ ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ದಲಿತ ಮುಖ್ಯಮಂತ್ರಿ ಕೂಗು ಎಬ್ಬಿಸಿರುವುದಾಗಿ ಕೆಲವರು ಆಡಿಕೊಂಡರು. ಆದರೆ, ವಾಸ್ತವದಲ್ಲಿ ಹಾಗಾಗಿಲ್ಲ. ಕಾಂಗ್ರೆಸ್ ನಲ್ಲಿ ಕೇವಲ ನಾನೊಬ್ಬನೇ ದಲಿತ ನಾಯಕನಲ್ಲ. ಮಲ್ಲಿಕಾರ್ಜುನ ಖರ್ಗೆಯವೂ ದಲಿತ ನಾಯಕರೇ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ತಮ್ಮ ವಾಗ್ಝರಿಯನ್ನು ಬಿಜೆಪಿ ಕಡೆಗೆ ತಿರುಗಿಸಿದ ಅವರು, ''ಕಾಂಗ್ರೆಸ್ ಮುಕ್ತ ಭಾರತ'ವನ್ನು ಕಟ್ಟುವುದಾಗಿ ಬೊಬ್ಬೊ ಹೊಡೆಯುತ್ತಿರುವ ಬಿಜೆಪಿ ಪಕ್ಷದ ಕೈಯ್ಯಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ'' ಎಂದು ಲೇವಡಿ ಮಾಡಿದರು.
''ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಕೆಲವಾರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರಬಹುದು. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷವು ನಿರ್ನಮವಾಗುತ್ತದೆ ಎಂದರ್ಥವಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿಯೇ ಇದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕನಸಿನ ಮಾತು'' ಎಂದರು.