ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಮೀರಬಹುದು
ಬೆಂಗಳೂರು, ಸೆ. 13: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕರ್ನಾಟಕ ಸರ್ಕಾರ ಮೀರಬಹುದು.
ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹಲವಾರು ನಾಯಕರು ಇದೇ ಮಾತನ್ನು ಹೇಳಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟಿದ್ದು ಸಾಕು, ಇನ್ಮುಂದೆ ನೀರು ಬಿಡುವುದು ಬೇಡ ಎಂದಿದ್ದಾರೆ.[ಉದ್ದೇಶಿತ ಮೋಡ ಬಿತ್ತನೆ ಕಾರ್ಯ ಕೈಬಿಟ್ಟಿದ್ದೇಕೆ?]
ಕಾನೂನು ತಜ್ಞರ ಸಲಹೆ: ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲ ಬಿವಿ ಆಚಾರ್ಯ ಕೂಡಾ ಸುಪ್ರೀಂ ಆದೇಶವನ್ನು ಉಲ್ಲಂಘಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ. [Live updates : ಬೆಂಗಳೂರಲ್ಲಿ ಕಾವೇರಿ ಕಿಚ್ಚು]
ಮಂಗಳವಾರ 11.30ರ ಸುಮಾರಿಗೆ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಉನ್ನತ ಮಟ್ಟದ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಮಾರ್ಗರೇಟ್ ಆಳ್ವಾ, ಆಸ್ಕರ್ ಫರ್ನಾಂಡೀಸ್, ವೀರಪ್ಪ ಮೊಯ್ಲಿ ಮುಂತಾದವರು ಭಾಗವಹಿಸಲಿದ್ದಾರೆ.
ತಮಿಳುನಾಡಿಗೆ ಸೆಪ್ಟೆಂಬರ್ 20ರ ತನಕ 12,000 ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಸೋಮವಾರದಂದು ನಡೆದ ಹಿಂಸಾಚಾರದಿಂದಾಗಿ ಬೆಂಗಳೂರಿನಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ. ಅನೇಕ ಕನ್ನಡ ಪರ ಸಂಘಟನೆ ಮುಖಂಡರು ಕೂಡಾ ಸುಪ್ರೀಂಕೋರ್ಟ್ ಆದೇಶವನ್ನು ಮೀರುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.