ಸಿದ್ದರಾಮಯ್ಯ ಎಲೆಕ್ಷನ್ ಲೆಕ್ಕಾಚಾರದಲ್ಲಿ ಇಬ್ರಾಹಿಂ ಸಚಿವ ಆಗ್ತಾರಾ?
ಮೈಸೂರು: ಕಾಂಗ್ರೆಸ್ ಹೈಕಮಾಂಡ್ ನ ಪ್ರಭಾವದಲ್ಲಿ ಈಗಾಗಲೇ ವಿಧಾನಪರಿಷತ್ ಸದಸ್ಯರಾಗಲಿರುವ ಸಿ.ಎಂ.ಇಬ್ರಾಹಿಂ ಮುಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಸ್ಥಾನ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಧಾನಸಭೆಯಿಂದ ವಿಧಾನಪರಿಷತ್ ಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇದುದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಇಬ್ರಾಹಿಂ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ಚುನಾವಣಾ ಹೊಸ್ತಿಲಲ್ಲಿ ಸಿದ್ದು ವಿರುದ್ದ ಡಿಕೆ ಶಿವಕುಮಾರ್ ಅಪಸ್ವರ!
ಈ ಬೆನ್ನಲ್ಲೇ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಂಡು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ಮತಗಳನ್ನು ಒಟ್ಟು ಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇನ್ನೊಂದು ಮೂಲಗಳ ಪ್ರಕಾರ, ಇಬ್ರಾಹಿಂ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ಕಾರಣಕ್ಕೆ ಈಗಾಗಲೇ ವಿಸ್ತರಣೆ ಮಾಡಬೇಕಾಗಿದ್ದ ಸಚಿವ ಸಂಪುಟವನ್ನು ತಡೆ ಹಿಡಿಯಲಾಗಿದೆ. ಇಬ್ರಾಹಿಂ ಅಲ್ಪ ಸಂಖ್ಯಾತ ಸಮುದಾಯದಲ್ಲಿ ಪ್ರಭಾವಿ ನಾಯಕರಾಗಿರುವುದರಿಂದ ಅವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ ಸೆಳೆಯಲು ಮುಂದಾಗಿದೆ. ಇದಕ್ಕೆ ಹೈಕಮಾಂಡ್ ನ ಅಭಯವೂ ಇದೆ.
ಅಸೆಂಬ್ಲಿ ಚುನಾವಣೆ: ಬೆಂಗಳೂರು ನಗರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು?
ಹಾಗೆ ನೋಡಿದರೆ ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಆತ್ಮೀಯರಾಗಿದ್ದು, ಇಬ್ರಾಹಿಂಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಆದರೆ ಕೆಲವು ಸಮಯಗಳ ಹಿಂದೆ ಇಬ್ಬರ ಮಧ್ಯೆ ಸಂಬಂಧ ಎಣ್ಣೆ- ಸೀಗೆಕಾಯಿ ಹಾಗೆ ಆಗಿತ್ತು. ಸಿಎಂ ಸಿದ್ದರಾವಯ್ಯ ಅವರ ವಿರುದ್ಧವೇ ಇಬ್ರಾಹಿಂ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಜೆಡಿಎಸ್ ಲಾಭ ಪಡೆಯಲು ಮುಂದಾಗಿತ್ತು
ಇಬ್ರಾಹಿಂ ಮತ್ತು ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು ಲಾಭ ಪಡೆಯಲು ಮುಂದಾಗಿದ್ದರು. ಇಬ್ರಾಹಿಂ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದ್ದರು. ಆ ಮೂಲಕ ಜೆಡಿಎಸ್ ನಿಂದ ಹೊರ ಹೋಗಿರುವ ಅಲ್ಪಸಂಖ್ಯಾತ ನಾಯಕ ಜಮೀರ್ ಅಹಮ್ಮದ್ ಗೆ ಪರ್ಯಾಯವಾಗಿ ಮುಸ್ಲಿಂ ನಾಯಕರೊಬ್ಬರನ್ನು ಪಕ್ಷದಲ್ಲಿ ಪ್ರತಿಷ್ಠಾಪನೆ ಮಾಡುವುದು ಗೌಡರ ಇರಾದೆಯಾಗಿತ್ತು.
ಕಾಂಗ್ರೆಸ್ ಹೈಕಮಾಂಡ್ ನ ಹುಕುಂ
ಈ ವಿಚಾರ ಕಾಂಗ್ರೆಸ್ ಹೈಕಮಾಂಡ್ ತಲುಪುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಫರ್ಮಾನು ಹೊರಡಿಸಿ, ಇಬ್ರಾಹಿಂ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ, ಆ ಬಳಿಕ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಸೂಚಿಸಲಾಗಿದೆ ಎಂಬ ಮಾತುಗಳುಇದೀಗ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಈಗಾಗಲೇ ಮುಸ್ಲಿಂ ಸಮುದಾಯಕ್ಕೆ ಪ್ರಾಶಸ್ತ್ಯ ಸಿಕ್ಕಿದೆ
ಆದರೆ, ಈಗಾಗಲೇ ಮುಸ್ಲಿಂ ಸಮುದಾಯದಿಂದ ರೋಷನ್ ಬೇಗ್, ತನ್ವೀರ್ ಸೇಠ್ ಸಚಿವರಾಗಿದ್ದಾರೆ. ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡುವುದು ಬೇಡ ಎಂಬ ಆಕ್ಷೇಪಗಳು ಕಾಂಗ್ರೆಸ್ ನಲ್ಲಿ ಇದೆ. ಆದರೆ ವಿಧಾನಸಭೆ ಚುನಾವಣೆಗೆ ಇನ್ನು ಉಳಿದಿರುವುದು ಕೇವಲ ಐದು ತಿಂಗಳು ಮಾತ್ರ. ಹೀಗಾಗಿ ಇಬ್ರಾಹಿಂ ಸಚಿವರಾಗುವುದಕ್ಕೆ ಶಾಸಕರು ಅಡ್ಡಿಪಡಿಸಬೇಡಿ, ಅವರಿಂದ ಮುಂದಿನ ಚುನಾವಣೆಗೆ ಲಾಭವಾಗಲಿದೆ ಎಂದು ಸಿಎಂ ಸಮಾಧಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹಬ್ಬದ ನಂತರ ಸಂಪುಟ ವಿಸ್ತರಣೆ
ರಾಜ್ಯಕ್ಕೆ ವಿಧಾನಸಭೆ ಚುನಾವಣೆ ಕೆಲ ತಿಂಗಳೇ ಇದ್ದರೂ ಸಚಿವ ಸಂಪುಟ ವಿಸ್ತರಣೆಯ ಮಾತನಾಡುತ್ತಾ ಬಂದಿದ್ದಾರೆ ಸಿದ್ದರಾಮಯ್ಯ. ಗೌರಿ ಗಣೇಶ ಹಬ್ಬ ಕಳೆಯುತ್ತಿದ್ದಂತೆಯೇ ಸಂಪುಟ ವಿಸ್ತರಣೆ ಮಾಡುವುದು ಅನಿವಾರ್ಯವಾಗಲಿದೆ.