ಐಐಟಿ ಸ್ಥಾಪನೆ ಫೈಟ್, ರಾಯಚೂರಿಗೆ ಬೇಕೆಂದ್ರು ಖರ್ಗೆ
ಬೆಂಗಳೂರು, ಮೇ 22 : ಕರ್ನಾಟಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ರಾಯಚೂರಿನಲ್ಲಿ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿದೆ. ಈ ನಡುವೆ ಹಾಸನ ಮತ್ತು ಧಾರವಾಡ ಜಿಲ್ಲೆಗಳ ಹೆಸರುಗಳು ಕೇಳಿಬರುತ್ತಿದ್ದು, ಐಐಟಿ ಸ್ಥಾಪನೆ ಫೈಟ್ ಮುಂದುವರೆದಿದೆ.
'ಐಐಟಿ ಸ್ಥಾಪನೆಗೆ 400 ಎಕರೆ ಭೂಮಿಯನ್ನು ರಾಯಚೂರಿನಲ್ಲಿ ಕಾಯ್ದಿರಿಸಲಾಗಿದೆ. ರಾಜ್ಯ ಸರ್ಕಾರ ಮೂರು ಜಿಲ್ಲೆಗಳ ಹೆಸರು ಸೂಚಿಸುವ ಬದಲು ಕೇಂದ್ರಕ್ಕೆ ರಾಯಚೂರು ಹೆಸರನ್ನು ಮಾತ್ರ ಕಳುಹಿಸಬೇಕಿತ್ತು' ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. [ಕರ್ನಾಟಕದಲ್ಲಿ ಐಐಟಿ, ಮೂರು ಜಿಲ್ಲೆಗಳ ಆಯ್ಕೆ]
'ಕರ್ನಾಟಕ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ರಾಯಚೂರು, ಮೈಸೂರು ಹಾಗೂ ಧಾರವಾಡ ಜಿಲ್ಲೆಗಳ ಹೆಸರಿದೆ. ಆದರೆ, ರಾಯಚೂರಲ್ಲಿ ಐಐಟಿ ಸ್ಥಾಪನೆಯಾಗುವುದು ಈ ಭಾಗದ ಹಕ್ಕಾಗಿದೆ. ರಾಯಚೂರಿಗೆ ಐಐಟಿ ತರಲು ಸಕಲ ರೀತಿಯಲ್ಲಿ ಪ್ರಯತ್ನ ನಡೆಸಲಾಗುತ್ತದೆ' ಎಂದು ಖರ್ಗೆ ತಿಳಿಸಿದರು. [ಐಐಟಿ ಮೈಸೂರಿಗೆ ಬರಲಿ, ಪ್ರಧಾನಿಗೆ ಪತ್ರ]
ಅತ್ತ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಇತ್ತ ಹಾಸನದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿತ್ತು. ಆದರೆ, ಪ್ರಸ್ತಾವನೆಯಲ್ಲಿ ಹಾಸನದ ಹೆಸರು ಸೇರಿಸಿಲ್ಲ ಎಂದು ಜೆಡಿಎಸ್ ನಾಯಕ ರೇವಣ್ಣ ಆರೋಪಿಸಿದ್ದಾರೆ. ಏನಿದು ಫೈಟ್ ಇಲ್ಲಿದೆ ಮಾಹಿತಿ
ರಾಯಚೂರಿಗೆ ಐಐಟಿ ಬೇಕು ಅಂದ್ರು ಖರ್ಗೆ
'ಐಐಟಿ ಸ್ಥಾಪನೆಗೆ 400 ಎಕರೆ ಭೂಮಿಯನ್ನು ರಾಯಚೂರಿನಲ್ಲಿ ಕಾಯ್ದಿರಿಸಲಾಗಿದೆ. ರಾಜ್ಯ ಸರ್ಕಾರ ಮೂರು ಜಿಲ್ಲೆಗಳ ಹೆಸರು ಸೂಚಿಸುವ ಬದಲು ಕೇಂದ್ರಕ್ಕೆ ರಾಯಚೂರು ಹೆಸರನ್ನು ಮಾತ್ರ ಕಳುಹಿಸಬೇಕಿತ್ತು' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ರಾಯಚೂರಲ್ಲಿಯೇ ಐಐಟಿ ಸ್ಥಾಪನೆ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಹಾಸನದ ಹೆಸರು ಸೇರಿಸಿಲ್ಲ
ಹಾಸನ ಜಿಲ್ಲೆಯಲ್ಲಿ ಐಐಟಿ ಸ್ಥಾಪನೆಗಾಗಿ 1,300 ಎಕರೆ ಭೂಮಿಯನ್ನು ಮೀಸಲಾಗಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವೇಗೌಡರು ಭೇಟಿ ಮಾಡಿ ಮನವಿ ಮಾಡಿದಾಗ, ಐಐಟಿ ಸ್ಥಾಪನೆಗೆ ಅನುಮತಿ ಸಿಕ್ಕಿತ್ತು. ಆದರೆ, ಕರ್ನಾಟಕ ಸರ್ಕಾರ ಹಾಸನದ ಹೆಸರು ಶಿಫಾರಸು ಮಾಡಿಲ್ಲ. ಆದ್ದರಿಂದ ಗೊಂದಲ ಉಂಟಾಗಿದೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಗಲಿ
ಐಐಟಿ ಸ್ಥಾಪನೆಗೆ ರಾಜ್ಯ ಸರ್ಕಾರ ಮೂರು ಜಿಲ್ಲೆಗಳ ಹೆಸರು ಸೂಚಿಸಿದೆ. ಕೇಂದ್ರ ಯಾವುದನ್ನು ಆಯ್ಕೆ ಮಾಡುತ್ತದೆ ನೋಡೋಣ. ಆದರೆ, ತಾವು ಧಾರವಾಡದ ಸಂಸದರಾಗಿರುವ ಕಾರಣ ಅಲ್ಲಿಯೇ ಐಐಟಿ ಸ್ಥಾಪನೆಯಾಗಬೇಕೆಂಬ ಒಲವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸರ್ಕಾರದ ಶಿಫಾರಸು ಏನು?
ಕೆಲವು ದಿನಗಳ ಹಿಂದೆ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ರಾಯಚೂರು, ಧಾರವಾಡ, ಮೈಸೂರು ಜಿಲ್ಲೆಗಳಲ್ಲಿ ಐಐಟಿ ಸ್ಥಾಪನೆ ಮಾಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿಯಾಗಿ ಸರ್ಕಾರದ ಪ್ರಸ್ತಾವನೆಯನ್ನು ಅವರಿಗೆ ಸಲ್ಲಿಕೆ ಮಾಡಲಾಗಿದೆ.
ರಾಯಚೂರು ಬಗ್ಗೆ ಹೆಚ್ಚಿನ ಆಸಕ್ತಿ
ರಾಯಚೂರಿನಲ್ಲಿ ಐಐಟಿ ಸ್ಥಾಪನೆಗೆ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅತ್ತ ಎರಡು ನಿಯೋಗಗಳುಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿಯಾಗಿ ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿವೆ. ರಾಯಚೂರಿಗೆ ಐಐಟಿ ಬರುತ್ತದೆಯೇ? ಕಾದು ನೋಡಬೇಕು.