ಕಳ್ಳನ ಹೆಂಡತಿಯ ಪ್ರಾಮಾಣಿಕತೆ. ಅಪರಾಧ ವರದಿಯಲ್ಲಿ ಒಂದು ನೀತಿ ಕತೆ
ಉಡುಪಿ,ಫೆಬ್ರವರಿ,22: ನಮ್ಮ ದೇಶದ ಮಹಿಳೆಯರು ಸಂಸ್ಕೃತಿ, ತಾಳ್ಮೆ, ಸಹನೆಗೆ ಮಾತ್ರ ಹೆಸರಾದವರಲ್ಲ. ಪ್ರಾಮಾಣಿಕತೆಯ ಪ್ರತಿಬಿಂಬವೂ ಹೌದು ಎಂಬುದಕ್ಕೆ ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ನಡೆದ ಕಳ್ಳತನದ ಘಟನೆಯೇ ಸಾಕ್ಷಿಯಾಗಿದೆ.
ಕೊಲ್ಲೂರು ಮೂಕಾಂಬಿಕ ದೇವಾಲಯದಲ್ಲಿ ಕೆಲಸಮಾಡುತ್ತಿರುವ ಸಿಬ್ಬಂದಿಯೋರ್ವ ತಾಯಿ ಕೊಲ್ಲೂರು ಮೂಕಾಂಬಿಕೆಯ ಚಿನ್ನಾಭರಣ ಕದ್ದು ಮನೆಯಲ್ಲಿ ಇಟ್ಟಿದ್ದಾನೆ. ಈ ವಿಷಯ ತಿಳಿದ ಆತನ ಪತ್ನಿಯೇ ಕದ್ದ ಚಿನ್ನಾಭರಣವನ್ನು ದೇವಾಲಯಕ್ಕೆ ಹಿಂದಿರುಗಿಸಿದ ಘಟನೆ ಸೋಮವಾರ ನಡೆದಿದೆ.[ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮೈಸೂರಿನ ಆಟೋ ಚಾಲಕ!]
ಏನಿದು ಘಟನೆ:
ಕರಾವಳಿ ಭಾಗದ ಪ್ರಸಿದ್ಧ ದೇವಸ್ಥಾನ ಕೊಲ್ಲೂರು ಮೂಕಾಂಬಿಕಾ ದೇವಿಯ ಸರ ಕದ್ದ ಸಿಬ್ಬಂದಿಯೇ ಶಿವರಾಮ್. ಈತ ದೇವಾಲಯದ ಸೇವಾ ಕೌಂಟರ್ ನಲ್ಲಿ ರಶೀದಿ ಬರೆಯುವ ಕೆಲಸ ಮಾಡುತ್ತಿದ್ದನು.
ಇವನು ಸೇವಾ ಕೌಂಟರ್ ನಲ್ಲಿ ಇಟ್ಟಿದ್ದ, ಭಕ್ತರು ಕಾಣಿಕೆಯಾಗಿ ನೀಡಿದ ಲಕ್ಷಾಂತರ ಮೌಲ್ಯದ ಸರವನ್ನು ಕಳ್ಳತನ ಮಾಡಿ ಮನೆಯಲ್ಲಿ ಇರಿಸಿ ಕಳೆದ ಒಂದು ವಾರದಿಂದ ದೇವಸ್ಥಾನದ ಚಿನ್ನಾಭರಣವಿದ್ದ ಬೀರುವಿನ ಕೀಲಿಕೈ ಜತೆ ಪರಾರಿಯಾಗಿದ್ದಾನೆ.[ಕೊಲ್ಲೂರು ದೇವಳದಲ್ಲಿ ಟಿಪ್ಪು ಹೆಸರಿನಲ್ಲಿ ನಿತ್ಯಪೂಜೆ]
ವಿಷಯ ತಿಳಿದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಮುಕಾಂಬಿಕೆ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಹಾಗೂ ದೇವಸ್ಥಾನದ ಮೇಲುಸ್ತುವಾರಿ ಅಧಿಕಾರಿಯಾದ ಉಮಾ ಅವರು ಕೊಲ್ಲೂರು ಠಾಣೆಯಲ್ಲಿ ಸಿಬ್ಬಂದಿ ಶಿವರಾಮ್ ವಿರುದ್ಧ ಕೊಲ್ಲೂರು ಠಾಣೆಯಲ್ಲಿ ಲಿಖಿತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವಿಚಾರ ತಿಳಿದ ಶಿವರಾಮ್ ಪತ್ನಿ ಸುಮಾರು ನಾಲ್ಕು ಲಕ್ಷ ಮೌಲ್ಯದ ಚಿನ್ನದ ಸರವನ್ನು ದೇವಸ್ಥಾನಕ್ಕೆ ತಂದು ಒಪ್ಪಿಸಿ ತಮ್ಮ ಒಳ್ಳೆತನ ಮೆರೆದಿದ್ದಾರೆ. ಆದರೆ ಪತಿ ಶಿವರಾಮ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಹುಡುಕಾಟದಲ್ಲಿ ತೊಡಗಿದ್ದಾರೆ.[ಚಿನ್ನ ಹೇಳು ಹೇಗಿರುವೆ? ದರ ಏರಿಕೆ ಹಾದಿಯಲ್ಲಿರುವೆ]
ಆಡಳಿತಾಧಿಕಾರಿಗಳ ಬೇಜವಾಬ್ದಾರಿಯಿಂದ ಚಿನ್ನಾಭರಣ ಕಳುವಾಗಿದೆ ಎಂದು ಆಡಳಿತಾಧಿಕಾರಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಳವಾದ ಚಿನ್ನಾಭರಣ ಪುನಃ ತಾಯಿ ಪಾದಕ್ಕೆ ಸೇರಿರುವುದರಿಂದ ಭಕ್ತಾಧಿಗಳು ನಿಟ್ಟುಸಿರು ಬಿಟ್ಟಿದ್ದು ಎಲ್ಲವೂ ತಾಯಿ ಮಹಿಮೆ ಎಂದು ಕೊಂಡಾಡುತ್ತಿದ್ದಾರೆ.