ಬೆಂಗಳೂರು ಲೈಂಗಿಕ ದೌರ್ಜನ್ಯದ ಬಗ್ಗೆ ಮಾತೆ ಮಹಾದೇವಿ ಪ್ರ'ವಚನ'
ಬಾಗಲಕೋಟೆ, ಜನವರಿ 7: ಪ್ರಚೋದನೆ ನೀಡುವಂಥ ಬಟ್ಟೆ ಹಾಕಿಕೊಳ್ಳುವುದರಿಂದ ಗಂಡಸರಿಗೆ ಅತ್ಯಾಚಾರಕ್ಕೆ ಉತ್ತೇಜನ ಕೊಟ್ಟಂತಾಗುತ್ತದೆ ಎಂದು ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿರುವ ಅವರು, ರಾತ್ರಿ ಹನ್ನೆರಡು ಗಂಟೆಗೆ ಹೆಣ್ಣುಮಕ್ಕಳಿಗೆ ಏನು ಕೆಲಸ ಇರುತ್ತೆ ಎಂದು ಪ್ರಶ್ನಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಇರುವುದು ತಪ್ಪಲ್ಲ, ಆದರೆ ಸ್ವೇಚ್ಛಾಚಾರ ತಪ್ಪು. ಗಂಡಸರಿಗೆ ಸಂಸ್ಕಾರವನ್ನೂ ಹೆಣ್ಣುಮಕ್ಕಳಿಗೆ ಸಂಸ್ಕೃತಿಯ ಪಾಠವನ್ನು ಹೇಳಬೇಕು. ಇಬ್ಬರೂ ಸೇರಿದರೆ ಮಾತ್ರ ತಪ್ಪಾಗುತ್ತದೆ. ಮೊದಲಿಗೆ ಮಾಧ್ಯಮಗಳ ಮೇಲೆ ಹಿಡಿತ ತರಬೇಕು. ಸಿನಿಮಾಗಳಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಬಾರದು ಎಂದು ಅವರು ಹೇಳಿದರು.[ಯುವತಿಯ ಟಿ ಶರ್ಟ್ ಹಿಡಿದು ಎಳೆದಾಡಿದ ಕಾಮುಕರು]
ಹೊಸ ವರ್ಷಾಚರಣೆ ನಮ್ಮ ಸಂಸ್ಕೃತಿಯಲ್ಲ. ಯುಗಾದಿ ನಮ್ಮ ಪಾಲಿಗೆ ಹೊಸ ವರ್ಷ. ಅಂಥ ಆಚರಣೆ ಮಾಡಿ, ಅಪ ವೇಳೆಯಲ್ಲಿ ರಸ್ತೆಗೆ ಇಳಿಯುವುದು ತಪ್ಪು. ಈ ಹಿಂದೆ ಹೆಣ್ಣುಮಕ್ಕಳು ರಾತ್ರಿ ವೇಳೆ ಒಡವೆ ಹಾಕಿಕೊಂಡು ಓಡಾಡಿದರೂ ಏನೂ ಅಗುತ್ತಿರಲಿಲ್ಲ. ಆದರೆ ಈಗ ಈ ರೀತಿ ಅತ್ಯಾಚಾರ ಆಗುತ್ತಿದೆ ಅಂದರೆ ಸ್ವೇಚ್ಛಾಚಾರದ ವರ್ತನೆಯೇ ಕಾರಣ ಎಂದು ಮಾತೆ ಮಹಾದೇವಿ ಅಭಿಪ್ರಾಯ ಪಟ್ಟಿದ್ದಾರೆ.