'ಎಷ್ಟೋ ದಿನದ ಮೇಲೆ ಬಿಜೆಪಿಯವರು ನಿದ್ರೆಯಿಂದ ಎದ್ದಿದ್ದಾರೆ'
ಬೆಂಗಳೂರು, ಅ.18 : 'ಬಿಜೆಪಿಯವರು ಎಷ್ಟೋ ದಿನದ ಮೇಲೆ ನಿದ್ರೆಯಿಂದ ಎದ್ದು ನನ್ನ ರಾಜೀನಾಮೆ ಕೇಳುತ್ತಿದ್ದಾರೆ ಪಾಪ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು. ಬಿಜೆಪಿ ಇಂದು ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿತ್ತು.
ಡಿಕೆಶಿ, ಜಾರಕಿಹೊಳಿ ರಾಜೀನಾಮೆಗಾಗಿ ಶುಕ್ರವಾರದಿಂದ ಬಿಜೆಪಿ ಹೋರಾಟ
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, 'ಬಿಜೆಪಿ ಹೋರಾಟ ಮಾಡುವುದು ಬಹಳ ಖುಷಿ. ನಾನು ಯಾವುದರಲ್ಲಿ ಭ್ರಷ್ಟಾಚಾರ ಮಾಡಿದ್ದೇನೆ? ಎಂಬುದನ್ನು ಅವರು ಹೇಳಲಿ. ಅವರ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಲಿ' ಎಂದು ಸವಾಲು ಹಾಕಿದರು.
'ಅಮಿತ್ ಶಾ ಮತ್ತು ಯಡಿಯೂರಪ್ಪ ಅವರು ಐಟಿ ಅಧಿಕಾರಿಗಳಲ್ಲ. ನನ್ನ ಮೇಲೆ ಐಟಿ ದಾಳಿ ನಡೆದಿರಬಹುದು. ಕಾನೂನು ಚೌಕಟ್ಟಿನಲ್ಲಿ ಅದರ ವಿಚಾರಣೆ ನಡೆಯುತ್ತಿದೆ. ಬಿಜೆಪಿಯವರು ನನ್ನ ಭ್ರಷ್ಟಾಚಾರ ಸಾಬೀತು ಮಾಡಿದರೆ ರಾಜೀನಾಮೆ ಕೇಳುವ ಹಕ್ಕಿದೆ' ಎಂದರು.
'ಸಚಿವ ರಮೇಶ್ ಜಾರಕಿಹೊಳಿ, ಪರಿಷತ್ ಸದಸ್ಯ ಗೋವಿಂದರಾಜು ಮುಂತಾದವರ ಮನೆ ಮೇಲೆಯೂ ಐಟಿ ದಾಳಿ ನಡೆದಿದೆ. ಆದರೆ, ಬಿಜೆಪಿ ನನ್ನ ವಿರುದ್ಧ ಮಾತ್ರ ಪ್ರತಿಭಟನೆ ಮಾಡುವ ಮೂಲಕ ರಾಜಕೀಯ ದ್ವೇಷ ಸಾಧನೆ ಮಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ದಾಖಲೆಗಳನ್ನು ಜನರು ತಂದು ಕೊಡುತ್ತಿದ್ದಾರೆ' ಎಂದು ತಿಳಿಸಿದರು.
ಕರ್ನಾಟಕ ಬಿಜೆಪಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿತ್ತು. ಆದರೆ, ರೇಸ್ಕೋರ್ಸ್ ರಸ್ತೆಯಲ್ಲಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಒಂದು ವಾರಗಳ ಕಾಲ ರಾಜ್ಯಾದ್ಯಂತ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.