ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?
ಬೆಂಗಳೂರು, ಜುಲೈ, 28: ಕಳಸಾ ಬಂಡೂರಿ ಮಹಾದಾಯಿಗೆ ಸಂಬಂಧಿಸಿ ನ್ಯಾಯಾಧೀಕರಣ ನೀಡಿರುವ ಮಧ್ಯಂತರ ತೀರ್ಪು ರಾಜ್ಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮೇಲ್ನೋಟಕ್ಕೆ ಯಾರಾದರೂ ಹೇಳಿಬಿಡಬಹುದು.
ಗೋವಾ ಮತ್ತು ಮಹಾರಾಷ್ಟ್ರ ಲಾಬಿ ಮಾಡಿವೆ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ, ರಾಜ್ಯ ಸರ್ಕಾರ ಹೋರಾಟಕ್ಕೆ ಬೆಂಬಲ ನೀಡುವಲ್ಲಿ ವಿಫಲವಾಗಿದೆ ಎಂಬ ಆರೋಪಗಳನ್ನು ಮಾಡಬಹುದು. ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಮಾಡುತ್ತಿದೆ. ರಾಜ್ಯದ ಸಂಸದರು ಹಕ್ಕು ಮಂಡಿಸುತ್ತಿಲ್ಲ ಎಂಬ ಎಲ್ಲ ಕಾರಣಗಳನ್ನು ನೀಡಬಹುದು.[ಸಾಮಾನ್ಯ ನಾಗರಿಕನಿಗೆ ಸಂಕಷ್ಟ ತಂದಿಟ್ಟ ಬಂದ್ಗಳು]
ಆದರೆ ಕರ್ನಾಟಕ ರಾಜ್ಯ ವಾದ ಮಾಡುವಲ್ಲಿ ಎಲ್ಲಿ ಎಡವಿತು? ನಿಜಕ್ಕೂ ನ್ಯಾಯಾಧೀಕರಣಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಯಿತೆ? ನೀಡಿದ ತೀರ್ಪಿನಲ್ಲಿ ಯಾವ ಅಂಶಗಳಿವೆ ಎಂಬುದನ್ನು ಮೊದಲು ಲೆಕ್ಕ ಹಾಕಿಕೊಳ್ಳಬೇಕು...
ನೈಸರ್ಗಿಕ ಅಸಮತೋಲನ
ಕರ್ನಾಟಕ ಕೇಳಿದ 7 ಟಿಎಂಸಿ ನೀರಿನ ಏತ ನೀರಾವರಿಗೆ ಅವಕಾಶ ನೀಡಿದರೆ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಾಣ ಮಾಡದೆ 7 ಟಿಎ೦ಸಿ ನೀರನ್ನು ಎತ್ತಲು ಸಾಧ್ಯವೇ ಇಲ್ಲ. ಅಣೆಕಟ್ಟನ್ನು ನಾವು ತಾತ್ಕಾಲಿಕ ಕಾಮಗಾರಿ ಎ೦ದು ಪರಿಗಣಿಸುವುದು ಹೇಗೆ?
ಶಾಶ್ವತ ಕಾಮಗಾರಿ ಅಲ್ಲವೇ?
ಮಹದಾಯಿ ಮತ್ತು ಮಲಪ್ರಭಾ ನದಿಗಳ ನಡುವೆ ನೀರನ್ನು ಒ೦ದೆಡೆಯಿ೦ದ ಮತ್ತೊ೦ದೆಡೆ ತಿರುಗಿಸಲು ಶಾಶ್ವತ ಕಾಮಗಾರಿ ಅತ್ಯಗತ್ಯ. ಹೀಗಾಗಿ ಶಾಶ್ವತ ಕಾಮಗಾರಿ ಬೇಕಾಗಿಲ್ಲ ಎ೦ದು ಕರ್ನಾಟಕ ವಾದ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ.
ಕೇಂದ್ರದ ಒಪ್ಪಿಗೆ ಇಲ್ಲ
1974ರ ಪರಿಸರ ಮಾಲಿನ್ಯ ತಡೆ ಮತ್ತು ನಿಯ೦ತ್ರಣ ಕಾಯ್ದೆ, 1986ರ ಪರಿಸರ ರಕ್ಷಣಾ ಕಾಯ್ದೆ, ವನ್ಯಜೀವಿ ಸ೦ರಕ್ಷಣೆ ಮತ್ತು ಜೀವ ವೈವಿಧ್ಯಗಳ ರಕ್ಷಣಾ ಕಾಯ್ದೆಗಳ ಪ್ರಕಾರ ಬೃಹತ್ ಯೋಜನೆ ಹಮ್ಮಿಕೊಳ್ಳುವಾಗ ಒಪ್ಪಿಗೆ ಪಡೆದುಕೊಳ್ಳಬೇಕು. ಆದರೆ ಕರ್ನಾಟಕ ಎಲ್ಲಿಯೂ ಅನುಮತಿ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರ ಮತ್ತು ಯೋಜನಾ ಆಯೋಗಕ್ಕೂ ಮಾಹಿತಿ ಸಲ್ಲಿಕೆ ಮಾಡಿಲ್ಲ.
ಜಲಚಕ್ರಕ್ಕೆ ಹಾನಿ
ನದಿ ಮೂಲಕ ಸಮುದ್ರ ಸೇರುವ ನೀರು ಆವಿಯಾಗಿ ಮಳೆ ತರಿಸುತ್ತದೆ. ಇಂಥ ಯೋಜನೆಗಳು ಜಲಚಕ್ರಕ್ಕೆ ಹಾನಿ ಮಾಡುವುದಿಲ್ಲವೇ?
ಹೆಚ್ಚುವರಿ ನೀರು ಎಲ್ಲಿದೆ?
ನೀರನ್ನು ಎತ್ತಲು ಗುರುತಿಸಲಾಗಿರುವ ಮಹದಾಯಿಯ ಉದ್ದೇಶಿತ 3 ಕಣಿವೆ ಪ್ರದೇಶಗಳಲ್ಲಿ ಹೆಚ್ಚುವರಿ ನೀರಿನ ಲಭ್ಯತೆ ಇದೆ ಎ೦ಬುದಕ್ಕೆ ಅಗತ್ಯ ದಾಖಲೆಯನ್ನು ಕರ್ನಾಟಕ ಒದಗಿಸಿಲ್ಲ. ನೀರಿಲ್ಲ ಎಂದ ಮೇಲೆ ಬಳಕೆ ಮಾಡಿಕೊಳ್ಳುವುದು ಹೇಗೆ?
ಪರಿಣಾಮ ತಿಳಿಸಿಲ್ಲ
ಒಂದು ವೇಳೆ ಯೋಜನೆಗೆ ಅನುಮತಿ ನೀಡಿದರೆ ಅದು ಅನುಷ್ಠಾನವಾದರೆ ಪರಿಣಾಮ ಎದುರಿಸುವ ಜನರಿಗೆ ಯಾವ ವ್ಯವಸ್ಥೆ ಮಾಡುತ್ತೇವೆ. ನಾಶವಾಗುವ ಪರಿಸರಕ್ಕೆ ಉತ್ತರ ಏನು ಎಂಬುದನ್ನು ಕರ್ನಾಟಕ ಹೇಳಿಲ್ಲ.
ನೀರಿನ ಹರಿವಿನ ಲೆಕ್ಕಾಚಾರ
ಕರ್ನಾಟಕ ಹೇಳಿದ ನೀರಿನ ಹರಿವಿನ ಲೆಕ್ಕಾಚಾರ ತಾಳೆಯಾಗುತ್ತಿಲ್ಲ. ನಿರ್ದಿಷ್ಟ ತಿ೦ಗಳಲ್ಲಿ ನೀರಿನ ಕೊರತೆ ಉ೦ಟಾದರಷ್ಟೇ ಮಹದಾಯಿಯಿ೦ದ ನೀರನ್ನು ಎತ್ತಲಾಗುವುದು ಎ೦ದು ಕರ್ನಾಟಕ ಹೇಳಿದೆ. ಆದರೆ ಯಾವ ತಿಂಗಳು, ಎಲ್ಲಿಂದ ದಿನಾಂಕ ಆರಂಭ ಎಂಬುದನ್ನು ತಿಳಿಸಿಲ್ಲ.
ನದಿಗಳ ಸಂರಚನೆ
ನೀರು ಬಳಕೆಗೆ ಅವಕಾಶ ನೀಡಲು ಕೇಳಿರುವ ಕರ್ನಾಟಕ ಮೊದಲು ನದಿಗಳ ಸಂರಚನೆಯನ್ನು ಅಧ್ಯಯನ ಮಾಡಿಕೊಳ್ಳಬೇಕಿದೆ. ಏತ ನೀರಾವರಿ ಅಥವಾ ಅಣೆಕಟ್ಟು ಹೆದರಲ್ಲಿ ಜೀವ ವೈವಿಧ್ಯಕ್ಕೆ ಭಂಗ ತಂದರೆ ಅದು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತದೆ.