ಎಲ್ಲ ಪ್ರತಿಭಟನೆಗಳನ್ನು ಸರ್ಕಾರ ಹತ್ತಿಕ್ಕುತ್ತಿರುವುದೇಕೆ?
ಬೆಂಗಳೂರು, ಜುಲೈ, 25: ರಾಜ್ಯ ಸರ್ಕಾರಕ್ಕೂ ಪ್ರತಿಭಟನೆಗಳಿಗೂ ಪ್ರತಿಭಟನೆಗಳಿಗೂ ಅವಿವಾಭಾವ ಸಂಬಂಧ ಎಂಬಂತೆ ಆಗಿ ಹೋಗಿದೆ. ಇದೀಗ ಸಾರಿಗೆ ಸಿಬ್ಬಂದಿ ಇಟ್ಟ ವೇತನ ಹೆಚ್ಚಳ ಮಾತುಕತೆಯೂ ಮುರಿದುಬಿದ್ದಿದ್ದು ನಾಳೆ ಅಂದರೆ ಮಂಗಳವಾರ ಸಹ ನಾಗರಿಕರು ಪರದಾಡುವುದರಲ್ಲಿ ಅನುಮಾನ ಇಲ್ಲ.
ರೈತರ ಪ್ರತಿಭಟನೆ, ವೈದ್ಯರ ಪ್ರತಿಭಟನೆ, ಎಸ್ಮಾ ಜಾರಿಯಿಂದ ಮುರಿದು ಬಿದ್ದ ಪೊಲೀಸರ ಪ್ರತಿಭಟನೆ, ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ, ಕಾರ್ಮಿಕರ ಪ್ರತಿಭಟನೆ, 108 ಸಿಬ್ಬಂದಿ ಪ್ರತಿಭಟನೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ.[ಸಾರಿಗೆ ಮುಷ್ಕರದ ಸಕಲ ಚಿತ್ರಗಳು]
ಆದರೆ ಸರ್ಕಾರ ಇಲ್ಲಿಯವರೆಗೆ ಯಾವ ಪ್ರತಿಭಟನೆಯನ್ನು ಗಂಭೀರವಾಗಿ ತೆಗೆದುಕೊಂಡಂತೆಯೇ ಕಂಡಿಲ್ಲ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎಂಬ ತರಹದ ವರ್ತನೆ ಮಾಡುತ್ತಿರುವ ಸರ್ಕಾರ ಆ ಕ್ಷಣಕ್ಕೆ ತಾತ್ಕಾಲಿಕ ಪರಿಹಾರ ನೀಡಿ ಪ್ರತಿಭಟನೆಗಳನ್ನು ಹತ್ತಿಕ್ಕುತ್ತಲೇ ಬಂದಿದೆ. ಇತ್ತ ನಾಗರಿಕರು ಪ್ರತಿ ಸಾರಿ ಪ್ರತಿಭಟನೆ ಬಂದ್ ಎದುರಾಗಲೂ ಪರದಾಡುತ್ತಲೇ ಇದ್ದಾರೆ.
ಪೊಲೀಸರ ಪ್ರತಿಭಟನೆ
ಕಳೆದ ತಿಂಗಳು ಅಂದರೆ ಜೂನ್ 4 ರಂದು ಸುಮಾರು 50 ಸಾವಿರ ಪೊಲೀಸರು ಏಕಕಾಲಕ್ಕೆ ರಜೆ ಹಾಕಿ ರಾಜ್ಯ ಸರ್ಕಾರಕ್ಕೆ ಶಾಕ್ ನೀಡಲು ಮುಂದಾಗಿದ್ದರು. ಆದರೆ ಎಸ್ಮಾ ಜಾರಿ ಮಾಡಿದ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಿತ್ತು.
ಶಶಿಧರ್ ವೇಣುಗೋಪಾಲ್ ಬಂಧನ
ಪ್ರತಿಭಟನೆ ಬಿಸಿ ತಾಗಬಹುದು ಎಂದು ತಕ್ಷಣ ಎಚ್ಚೆತ್ತುಕೊಂಡ ಸರ್ಕಾರ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಮಧ್ಯರಾತ್ರಿ ಬಂಧಿಸಿ ಪ್ರತಿಭಟನೆ ನಡೆಸಲು ಮುಂದಾದವರ ಶಕ್ತಿ ಕುಂದುಂವಂತೆ ಮಾಡಿತ್ತು.
ಅತಿಥಿ ಉಪನ್ಯಾಸಕರ ಗೋಳು
ಜನವರಿ ಗಳಲ್ಲಿ ರಾಜ್ಯಸ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಬೀದಿಗೆ ಇಳಿದಿದ್ದರು. ವೇತನ ಹೆಚ್ಚಳ ಮತ್ತು ಕೆಲಸ ಕಾಯಂ ಮಾಡಲು ಆಗ್ರಹಿಸಿತ್ತು. ಸರ್ಕಾರ ಈ ಸಂದರ್ಭದಲ್ಲೂ ಜಾಣ ಕುರುಡು ಪ್ರದರ್ಶನ ಮಾಡಿತ್ತು.
ಪಿಯು ಮೌಲ್ಯಮಾಪನ ಬಹಿಷ್ಕಾರ
ಪಿಯು ಉಪನ್ಯಾಸಕರ ಬೇಡಿಕೆ ಈಡೇರಿಸುವಲ್ಲಿರಾಜ್ಯ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿಮೌಲ್ಯಮಾಪನ ಬಹಿಷ್ಕರಿಸಿ, ಅನಿರ್ಧಿಷ್ಟಾವಧಿ ಸತ್ಯಾಗ್ರಹ ಕೈಗೊಳ್ಳಲು ಪದವಿ ಪೂರ್ವ ಉಪನ್ಯಾಸಕರು ನಿರ್ಧರಿಸಿ ಧರಣಿ ಆರಂಭಿಸಿದ್ದರು. ಅಂತಿಮವಾಗಿ ಸರ್ಕಾರಕ್ಕೆ ಮೌಲ್ಯಮಾಪನಕ್ಕೆ ಹಾಜರಾದರೂ ಇನ್ನುವರೆಗೆ ಅವರ ಬೇಡಿಕೆ ಈಡೇರಿಕೆಗೆ ಸರ್ಕಾರ ಮುಂದಾಗಿಲ್ಲ.
ರೈತರ ಹೋರಾಟಕ್ಕೆ ಬೆಲೆ ಎಲ್ಲಿ
ಕಳಸಾ ಬಂಡೂರಿ, ಕಬ್ಬಿನ ಬಾಕಿ, ಸಾಲ ಮನ್ನಾ ಸೇರಿದಂತೆ ಅನ್ನದಾತನ ಬೇಡಿಕೆಗಳ ಬಗ್ಗೆ ಸರ್ಕಾರ ಮತ್ತು ರಾಜಕಾರಣಿಗಳು ಕಂಡು ಕಾಣದಂತೆ ಇದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ಜನರ ಸಮಸ್ಯೆಗಳು ಇವರಿಗೆ ನೆನಪಾಗುತ್ತದೆ.
ಇದೀಗ ಕೆಎಸ್ ಆರ್ ಟಿಸಿ
ಬಸ್ ಮುಷ್ಕರ ಆರಂಭವಾಗಿ ಒಂದು ದಿನ ಕಳೆದಿದ್ದರೂ ಸರ್ಕಾರ ಮಾತ್ರ ಸಭೆಗಳನ್ನು ಮಾಡುವುದರಲ್ಲಿಯೆ ನಿರತವಾಗಿದೆ. ವೇತನ ಹೆಚ್ಚಳದ ಬಗೆಗಿನ ಗೊಂದಲ ಮುಂದುವರಿದಿದ್ದು ನಾಳೆಯೂ ಜನರು ತೊಂದರೆ ಅನುಭವಿಸಿ ಸರ್ಕಾರಕ್ಕೆ ಹಿಡಿಶಾಪ ಹಾಕಿದರೆ ತಪ್ಪೇನು ಇಲ್ಲ.