ಪರಂ ನಿರ್ಗಮನ ಖಾತ್ರಿ, ಮೇ10ರ ನಂತರ ಕೆಪಿಸಿಸಿಗೆ ಹೊಸ ಸಾರಥಿ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ? ಎಂಬ ಪ್ರಶ್ನೆಗೆ ಇನ್ನು 10-15 ದಿನಗಳಲ್ಲಿ ಉತ್ತರ ಸಿಗಲಿದೆ. ಹಾಲಿ ಅಧ್ಯಕ್ಷ ಜಿ ಪರಮೇಶ್ವರ ಅವರ ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿದೆ ಎಂದ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಮೇ 04: ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ? ಎಂಬ ಪ್ರಶ್ನೆಗೆ ಇನ್ನು 10-15 ದಿನಗಳಲ್ಲಿ ಉತ್ತರ ಸಿಗಲಿದೆ. ಹಾಲಿ ಅಧ್ಯಕ್ಷ ಜಿ ಪರಮೇಶ್ವರ ಅವರ ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿದೆ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಸುಮಾರು ಆರೂವರೆ ವರ್ಷಗಳ ಅವಧಿಯಿಂದ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಲು ಹೈಕಮಾಂಡ್ ಸಮ್ಮತಿ ಸೂಚಿಸಿದೆ. ಮೇ 10ರ ನಂತರ ಹೊಸ ಅಧ್ಯಕ್ಷರ ನೇಮಕಾತಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.[ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಹೆಸರು ಸೇರ್ಪಡೆ?]
ಈ ನಡುವೆ 'ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಲಾಬಿ ನಡೆಸಲು ದೆಹಲಿಗೆ ತೆರಳಿಲ್'ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಗುರುವಾರದಂದು ಮತ್ತೊಮ್ಮೆ ಹೇಳಿದ್ದಾರೆ.
ಆದರೆ, ಅಮೆರಿಕದಿಂದ ನೇರವಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಮಾತನಾಡಿಸಿಕೊಂಡು ಬೆಂಗಳೂರಿಗೆ ಬಂದಿರುವ ಇಂಧನ ಸಚಿವರು ಸದ್ಯಕ್ಕೆ ರೇಸಿನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ.
ಪರಮೇಶ್ವರ್ ಬದಲಾವಣೆ ಖಚಿತ
ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ಕಳೆದ ಮೂರು ತಿಂಗಳಿನಿಂದ ಲಾಬಿ ನಡೆಯುತ್ತಿದೆ. ಲಿಂಗಾಯತ, ಒಕ್ಕಲಿಗ, ದಲಿತ ಮುಖಂಡರು ಈ ಹುದ್ದೆ ಮೇಲೆ ಕಣ್ಣಿಟ್ಟು ಲಾಬಿ ನಡೆಸುತ್ತಿದ್ದರು. ಹಾಲಿ ಅಧ್ಯಕ್ಷ ಪರಮೇಶ್ವರ್ ಅವರು ಕೂಡ ಮತ್ತೊಂದು ಅವಧಿಗೆ ಮುಂದುವರಿಸುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡಾ ಒಲವು ತೋರಿದ್ದರು. ಆದರೆ, ಈಗ ಪರಮೇಶ್ವರ್ ಅವರು ಇನ್ನೊಂದು ಅವಧಿಗೆ ಮುಂದುವರೆಯುವುದಿಲ್ಲ ಎಂದು ಖರ್ಗೆ ಅವರು ಸ್ಪಷ್ಟಪಡಿಸಿದ್ದಾರೆ.
ಕೆಸಿ ವೇಣುಗೋಪಾಲ್ ನೇಮಕ
ರಾಜ್ಯ ಉಸ್ತುವಾರಿಯಾಗಿದ್ದ ದಿಗ್ವಿಜಯ್ಸಿಂಗ್ ಅವರನ್ನು ಬದಲಾಯಿಸಿ ಹೊಸದಾಗಿ ಉಸ್ತುವಾರಿಯಾಗಿ ಕೆ.ಸಿ.ವೇಣುಗೋಪಾಲ್ ಹಾಗೂ ನಾಲ್ಕು ಜನರ ಉಸ್ತುವಾರಿ ತಂಡವನ್ನು ನೇಮಿಸಿದ ನಂತರ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮೇ 8ಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ತಂಡ ಬೆಂಗಳೂರಿಗೆ ಬರಲಿದೆ. ಮೇ 10ರೊಳಗೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತಂತೆ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಡಿಕೆಶಿ ರೇಸಿನಲ್ಲಿ ಮುಂದೆ
ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಅಪ್ಪಾಜಿ ನಾಡಗೌಡ ಸೇರಿದಂತೆ ಹಲವು ಮುಖಂಡರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು. ಈ ಪೈಕಿ ಎಂಬಿ ಪಾಟೀಲ್ ಅವರು ನಾನು ರೇಸಿನಲ್ಲಿಲ್ಲ ಎಂದಿದ್ದಾರೆ, ಎಸ್ ಆರ್ ಪಾಟೀಲ್ ಅವರು ವಯಸ್ಸಿನ ಕಾರಣ ಹಿಂದೆ ಸರಿಯುವ ಸಾಧ್ಯತೆಯಿದೆ. ಕೊನೆಗೆ ಮುನಿಯಪ್ಪ ಹಾಗೂ ಶಿವಕುಮಾರ್ ನಡುವೆ ಪೈಪೋಟಿ ಬರಲಿದ್ದು, ಡಿಕೆಶಿ ಅವರು ಅಧ್ಯಕ್ಷ ಸ್ಥಾನಕ್ಕೇರುವ ಲಕ್ಷಣಗಳಿವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ
ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧ. ಖಾಸಗಿ ಪ್ರವಾಸದ ಹಿನ್ನೆಲೆಯಲ್ಲಿ ಅಮೆರಿಕಾಕ್ಕೆ ತೆರಳಿದ್ದೆ. ದೆಹಲಿಗೆ ಹೋದಾಗ ಪಕ್ಷದ ಕಚೇರಿಗೆ ತೆರಳಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದೇನೆ ಹಾಗೂ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಉಪ ಚುನಾವಣೆ ಗೆಲುವಿನ ನಂತರ ಮುಂಬರುವ ಚುನಾವಣೆಗೆ ಸಿದ್ದರಾಮಯ್ಯ ಹಾಗೂ ಹೊಸ ಕೆಪಿಸಿಸಿ ಅಧ್ಯಕ್ಷರು ಪಕ್ಷವನ್ನು ಮುನ್ನಡೆಸಬೇಕಾಗುತ್ತದೆ. ಹೀಗಾಗಿ ಡಿಕೆ ಶಿವಕುಮಾರ್ ಗೆ ಪಟ್ಟ ಸಿಗುವ ಸಾಧ್ಯತೆಯಿದೆ