ನಿಮ್ಮ ತಂದೆಯನ್ನು ಕೊಂದ ದೇಶ ಯಾವುದಮ್ಮಾ? ಕೌರ್ ಗೆ ಪ್ರತಾಪ್ ಪ್ರಶ್ನೆ
ಎಬಿವಿಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಸಿದ್ದ ದೆಹಲಿಯ ವಿದ್ಯಾರ್ಥಿನಿಗೆ ಮೈಸೂರು-ಕೊಡಗು ಸಂಸದರ ಪ್ರಶ್ನೆ.
ಬೆಂಗಳೂರು, ಫೆಬ್ರವರಿ 28: ''ಯಾವುದೇ ಯುದ್ಧ ನಡೆದರೂ, ಅದರಲ್ಲಿ ಕನಿಷ್ಠವೆಂದರೂ ಎರಡು ದೇಶಗಳು ಭಾಗವಹಿಸಲೇಬೇಕು. ಹಾಗಿರುವಾಗ, ಭಾರತ ದೇಶ ತನ್ನ ವಿರುದ್ಧ ತಾನೇ ತಿರುಗಿ ಯುದ್ಧ ಘೋಷಿಸಲು ಸಾಧ್ಯವಿಲ್ಲ. ಈಗ ಹೇಳು... ನಿಮ್ಮ ತಂದೆಯನ್ನು ಕೊಂದ ದೇಶ ಯಾವುದು?''
- ಇದು ಮೈಸೂರು, ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿಪಿವಿ) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಆರಂಭಿಸಿ, ದೊಡ್ಡ ಚರ್ಚೆಗೆ, ವಿವಾದಕ್ಕೆ ನಾಂದಿ ಹಾಡಿರುವ ದೆಹಲಿಯ ಲೇಡಿ ಶ್ರೀ ರಾಮ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಗೆ ಕೇಳಿರುವ ಪ್ರಶ್ನೆ.[ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ವಿವಾದ]
ಹಾಗೊಂದು ಪ್ರಶ್ನೆ ಕೇಳಲು ಸಿಂಹ ಅವರಿಗೆ ಕಾರಣವಿಲ್ಲದಿರಲಿಲ್ಲ. ಈ ಗುರ್ಮೆಹರ್ ಕೌರ್ ಮತ್ಯಾರೂ ಅಲ್ಲ. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ಮಂಗಲ್ ದೀಪ್ ಸಿಂಗ್ ಮಗಳು. ಇಂಥ ಹುಡುಗಿ ಹೀಗೆ, ಇದ್ದಕ್ಕಿದ್ದಂತೆ ಎಬಿವಿಪಿ ವಿರುದ್ಧ ಕಿಡಿ ಕಾರಿದ್ದಳು. ಎಬಿವಿಪಿ ವಿರುದ್ಧ ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಆರಂಭಿಸಿದ್ದ ಕೌರ್, ತಮಗೆ ಎಬಿವಿಪಿಯ ಭಯವಿಲ್ಲ ಎಂದಿದ್ದರು. ಅಲ್ಲದೆ, ನಮ್ಮ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ಧ ಎಂದು ತಿಳಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಇದು ಭಾರೀ ವಿವಾದವನ್ನೆಬ್ಬಿಸಿ ಫೇಸ್ ಬುಕ್ ನಲ್ಲಿ ಆಕೆಯನ್ನು ದೇಶದ್ರೋಹಿಗೆ ಹೋಲಿಸಿದರು. ಹೀಗೆ, ಫೇಸ್ ಬುಕ್ ನಲ್ಲಿ ಯಾರೋ ಭೂಗತ ದೊರೆ ದಾವೂದ್ ಇಬ್ರಾಹೀಂ ಗೆ ಕೌರ್ ಅವರನ್ನು ಹೋಲಿಸಿ ಹಾಕಿದ್ದ ಪೋಸ್ಟ್ ಅನ್ನು ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು ಅವರ ವಿರುದ್ಧ ವಿವಾದಕ್ಕೆ ಕಾರಣವಾಯಿತು.[ಕೌರ್ ಗೆ ಬೆದರಿಕೆ ಹಾಕಿದವರನ್ನು ಬಂಧಿಸಲು ದೆಹಲಿ ಪೊಲೀಸರಿಗೆ ಸೂಚನೆ]
ಆದರೆ, ಇದಕ್ಕೆ ಆನಂತರ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಮಾಧ್ಯಮಗಳ ವಿರುದ್ಧ ಹರಿಹಾಯ್ದ ಅವರು, ತಮ್ಮ ಟ್ವೀಟ್ ಸಮರ್ಥನೆಗೆ ನಿಂತುಕೊಂಡರು. ಆದರೆ, ಇದರ ಜತೆಯಲ್ಲೇ ಕೌರ್ ಅವರ ನಡೆಯನ್ನೂ ಪ್ರಶ್ನಿಸಿರುವ ಅವರು, ಕೌರ್ ಅವರ ತಂದೆ ಹುತಾತ್ಮರಾದ ಕಾರ್ಗಿಲ್ ಯುದ್ಧ ಯಾರ ತಕರಾರಿನಿಂದಾಯಿತು ಎಂಬುದನ್ನು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.