ವರ್ಣರಂಜಿತ ರಾಜಕಾರಣಿ ಎಸ್ ಎಂ ಕೃಷ್ಣ ನೇಪಥ್ಯಕ್ಕೆ ಸರಿದರೆ?
ಗುಂಡ್ಲುಪೇಟೆ ಮತ್ತು ನಂಜನಗೂಡು ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ನಂತರ ಮಾಜಿ ಸಿಎಂ ಎಸ್ ಎಂ ಕೃಷ್ಣ ನೇಪಥ್ಯಕ್ಕೆ ಸರಿದರೇ? ಉಪಚುನಾವಣೆ ಫಲಿತಾಂಶದ ದಿನದ ನಂತರ ಅಂದರೆ ಮೂರುವರೆ ತಿಂಗಳಿನಿಂದ ಎಸ್ ಎಂ ಕೃಷ್ಣ ಸಂಪೂರ್ಣ ಮೌನವಹಿಸಿದರೇ?
ಫೆಬ್ರವರಿ 2011ರಲ್ಲಿ ವಾಷಿಂಗ್ಟನ್ ನಲ್ಲಿ ನಡೆದ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ನಮ್ಮ ದೇಶದ ಲಿಖಿತ ಭಾಷಣ ಓದುವ ಬದಲು, ಪೋರ್ಚುಗಲ್ ದೇಶದ ಭಾಷಣವನ್ನು ವಿದೇಶಾಂಗ ಖಾತೆಯ ಸಚಿವರಾಗಿದ್ದ ಎಸ್ ಎಂ ಕೃಷ್ಣ ಓದಿ ಎಡವಟ್ಟು ಮಾಡಿಕೊಂಡಾಗಲೇ, ಕಾಂಗ್ರೆಸ್ ಅವರನ್ನು ದೂರ ಇಡಲಾರಂಭಿಸಿತು.
ಆ ಘಟನೆ ನಡೆದಾದ ಮೇಲೂ ಸುಮಾರು ಹದಿನೆಂಟು ತಿಂಗಳು ವಿದೇಶಾಂಗ ಸಚಿವರಾಗಿ ಎಸ್ ಎಂ ಕೃಷ್ಣ ಮುಂದುವರಿದರಾದರೂ, ಅಕ್ಟೋಬರ್ 2012ರಲ್ಲಿ ವಿದೇಶಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರು ವಿಮಾನ ಹತ್ತಿದ ಎಸ್ ಎಂ ಕೃಷ್ಣ ಕಾಂಗ್ರೆಸ್ಸಿನಲ್ಲಿ ಸಂಪೂರ್ಣ ಮೂಲೆಗುಂಪಾಗಿದ್ದು ಇತಿಹಾಸ.
ಕೃಷ್ಣ ಸೇರಿದ್ದೇ ಸೇರಿದ್ದು, ಬಿಜೆಪಿ ಲೆಕ್ಕಾಚಾರವೂ ಬದಲು
ಅಲ್ಲಿಂದ ಸುಮಾರು ನಾಲ್ಕುವರೆ ವರ್ಷ ವನವಾಸದಂತಿದ್ದ ರಾಜ್ಯದ ವರ್ಣರಂಜಿತ ರಾಜಕಾರಣಿ ಎಸ್ ಎಂ ಕೃಷ್ಣ ಅವರ ರಾಜಕೀಯ ಬದುಕು, ಮಾರ್ಚ್ 22, 2017ರಲ್ಲಿ ಬಿಜೆಪಿ ಸೇರುವ ಮೂಲಕ ಹೊಸ ಪುಟಕ್ಕೆ ತಿರುವಿಕೊಂಡಿತು.
ಮೋದಿಯವರ ಆದರ್ಶಕ್ಕೆ ಮರುಳಾಗಿದ್ದೇನೆಂದು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದ ಎಸ್ ಎಂ ಕೃಷ್ಣ ಅವರನ್ನು ಬೆಂಗಳೂರಿಗೆ ಬಂದಾಗ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಬರಮಾಡಿಕೊಂಡ ರೀತಿ ಮುತ್ಸದ್ದಿ ರಾಜಕಾರಣಿಗೆ ಸಲ್ಲಬೇಕಾಗಿದ್ದ ಗೌರವವೇ..
ಎಸ್ಎಂ ಕೃಷ್ಣ ಬಿಜೆಪಿ ಸೇರಿದರೆ ಆಗುವ ಲಾಭನಷ್ಟಗಳೇನು
ಉಪರಾಷ್ಟ್ರಪತಿ ಹುದ್ದೆಯ ಮೇಲೆ ಕಣ್ಣಿಟ್ಟು ಎಸ್ ಎಂ ಕೃಷ್ಣ ಬಿಜೆಪಿ ಸೇರುತ್ತಿದ್ದಾರೆಂದು ಆ ವೇಳೆ ಊರೆಲ್ಲಾ ಹಬ್ಬಿದ್ದ ಗುಲ್ಲಿಗೆ 'ಬುಲ್ಶಿಟ್' ಎಂದು ಕೃಷ್ಣ ಪ್ರತಿಕ್ರಿಯಿಸಿದ್ದು, ಇದಾದ ಬೆನ್ನಲ್ಲೇ ಕೃಷ್ಣ ಅವರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಅಮಿತ್ ಶಾ ಹೇಳಿದ್ದೂ ಆಗಿತ್ತು. ಮುಂದೆ ಓದಿ..
ಸಿದ್ದರಾಮಯ್ಯನವರ ಕಾರ್ಯವೈಖರಿ ಟೀಕಿಸಿದ್ದ ಕೃಷ್ಣ
ಬಿಜೆಪಿ ಸೇರಿದ ಮೊದಲಲ್ಲಿ ಸಕ್ರಿಯವಾಗಿದ್ದ ಎಸ್ ಎಂ ಕೃಷ್ಣ , ಕಾಂಗ್ರೆಸ್ಸಿನ ಕೇಂದ್ರ, ರಾಜ್ಯ ಮುಖಂಡರು ಮತ್ತು ಸಿದ್ದರಾಮಯ್ಯನವರ ಕಾರ್ಯವೈಖರಿಯನ್ನು ಟೀಕಿಸಿ ಸುದ್ದಿಯಲ್ಲಿದ್ದರು. ಕಾಂಗ್ರೆಸ್ಸಿನ ಕೆಲವು ಮುಖಂಡರು ಕೃಷ್ಣ, ಕಾಂಗ್ರೆಸ್ ತೊರೆದಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು.
ಬಿಜೆಪಿ ಪರವಾಗಿ ಕೃಷ್ಣ ರೋಡ್ ಶೋ, ಪ್ರಚಾರ
ಎಸ್ ಎಂ ಕೃಷ್ಣ, ಬಿಜೆಪಿ ಸೇರಿದ ಕೆಲವೇ ದಿನಗಳಲ್ಲಿ ಉಪಚುನಾವಣೆ ಎದುರಾಯಿತು. ಗುಂಡ್ಲುಪೇಟೆ ಮತ್ತು ನಂಜನಗೂಡು ಅಸೆಂಬ್ಲಿ ಕ್ಷೇತ್ರದಲ್ಲಿ ಜಯಗಳಿಸುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ನಿರ್ಣಾಯಕವಾಗಿತ್ತು. ಬಿಜೆಪಿ ಪರವಾಗಿ ಕೃಷ್ಣ ರೋಡ್ ಶೋ, ಪ್ರಚಾರ ಮಾಡಿದ್ದರು. ನಲವತ್ತು ವರ್ಷಗಳ ಕಾಂಗ್ರೆಸ್ ಜೊತೆಗಿನ ತಮ್ಮ ಸಾಂಗತ್ಯವನ್ನು ಕಳಚಿಕೊಂಡು ಹೊಸ ಹುಮ್ಮಸ್ಸಿನೊಂದಿಗೆ ಬಿಜೆಪಿ ಸೇರಿದ್ದ 84 ವರ್ಷದ ಹಿರಿಯ ರಾಜಕಾರಣಿ ಕೃಷ್ಣ, ಇಷ್ಟು ವರ್ಷ ತಮ್ಮ ವಿರುದ್ಧವೇ ತೋಳೇರಿಸಿ ಸೆಣಸಿದ್ದ ಪಕ್ಷದ ಪರವಾಗಿ ನಿಂತಿರುವ ಅಭ್ಯರ್ಥಿಗಳಿಗಾಗಿ ಮತ ಯಾಚಿಸಿದರು.
ಎರಡೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ ಬಿಜೆಪಿ
ಆದರೆ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಿತು, ನಂಜನಗೂಡಿನಲ್ಲಿ ಸಿದ್ದರಾಮಯ್ಯ ವಿರುದ್ದ ತೊಡೆತಟ್ಟಿದ್ದ ಶ್ರೀನಿವಾಸ ಪ್ರಸಾದ್ ಸೋತರೆ ಮತ್ತು ಗುಂಡ್ಲುಪೇಟೆಯಲ್ಲಿ ಗೀತಾ ಮಹಾದೇವಪ್ರಸಾದ್ ಜಯಗಳಿಸಿದರು. ಅಲ್ಲಿಂದ ಕೃಷ್ಣ ವಿರುದ್ದ ಕಾಂಗ್ರೆಸ್ಸಿಗರ ಟೀಕೆ ಟಿಪ್ಪಣಿ ಹೆಚ್ಚಾಗಲಾರಂಭಿಸಿತು.
ಯಡಿಯೂರಪ್ಪ ಜೊತೆ ಎಸ್ ಎಂ ಕೃಷ್ಣಗೂ ಹಿನ್ನಡೆ ತಂದ ಫಲಿತಾಂಶ
ಉಪಚುನಾವಣೆಯ ಸೋಲು ಯಡಿಯೂರಪ್ಪ ಜೊತೆ ಎಸ್ ಎಂ ಕೃಷ್ಣಗೂ ಹಿನ್ನಡೆಯಾಯಿತು. ನಮ್ಮ ಪಕ್ಷದ ಹಿರಿಯ ಮುಖಂಡರಾಗಿದ್ದ ಎಸ್ ಎಂ ಕೃಷ್ಣ ಅವರು ಬಿಜೆಪಿಗೆ ಸೇರಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯಕ್ಕೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಹಾಗಾಗಿ ಪಕ್ಷದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಕಾಂಗ್ರೆಸ್ಸಿಗರು ವ್ಯಂಗ್ಯವಾಡಿದರು.
ಅಪಾರ ರಾಜಕೀಯ ಅನುಭವದ ಲಾಭ ಪಡೆಯಲು ಬಿಜೆಪಿ ಪ್ಲಾನ್
ಹಳೇ ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಎಸ್ ಎಂ ಕೃಷ್ಣ ಅವರ ವರ್ಚಸ್ಸು ಮತ್ತು ಅಪಾರ ರಾಜಕೀಯ ಅನುಭವದ ಲಾಭ ಪಡೆಯಲು ಬಿಜೆಪಿ ಪ್ಲಾನ್ ಹಾಕಿತ್ತು. ಮಿಷನ್ 150 ಅನ್ನುತ್ತಿದ್ದ ಬಿಜೆಪಿ ಮುಖಂಡರು ಕೃಷ್ಣ ಬಿಜೆಪಿ ಸೇರುತ್ತಿದ್ದಂತೇ ಮಿಷನ್ 175 ಹೇಳಲಾರಂಭಿಸಿದರು. ಆದರೆ, ಉಪಚುನಾವಣೆಯ ಸೋಲು ಎಲ್ಲಾ ಲೆಕ್ಕವನ್ನು ಉಲ್ಟಾಪಲ್ಟಾ ಮಾಡಿತು.
ಮಾಜಿ ಸಿಎಂ ಕೃಷ್ಣ ನೇಪಥ್ಯಕ್ಕೆ ಸರಿದಂತೆ ಕಾಣುತ್ತಿದೆ
ಉಪಚುನಾವಣೆ ಫಲಿತಾಂಶದ ದಿನದ ನಂತರ ಅಂದರೆ ಮೂರುವರೆ ತಿಂಗಳಿನಿಂದ ಎಸ್ ಎಂ ಕೃಷ್ಣ, ಬಿಜೆಪಿಯ ಯಾವ ಸಮಾವೇಶದಲ್ಲೂ ಭಾಗವಹಿಸುತ್ತಿಲ್ಲ, ಪಕ್ಷದ ಪರವಾಗಿ ಯಾವ ಹೇಳಿಕೆಯನ್ನೂ ನೀಡುತ್ತಿಲ್ಲ. ಒಂದರ್ಥದಲ್ಲಿ ಕೃಷ್ಣ ನೇಪಥ್ಯಕ್ಕೆ ಸರಿದಂತೆ ಕಾಣುತ್ತಿದೆ. ಅವರ ಪಟ್ಟ ಶಿಷ್ಯ ಡಿಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ದಾಳಿಯಾದಾಗಲೂ ಅವರು ಯಾವುದೇ ಹೇಳಿಕೆ ನೀಡಿಲ್ಲ.
ಕಾಂಗ್ರೆಸ್ಸಿಗರನ್ನೂ ಕೃಷ್ಣ ದೂರುತ್ತಿಲ್ಲ, ಕೃಷ್ಣ ಕೂಡಾ ಅವರನ್ನು ದೂರುತ್ತಿಲ್ಲ
ಇತ್ತ ಕಾಂಗ್ರೆಸ್ಸಿಗರನ್ನೂ ಕೃಷ್ಣ ದೂರುತ್ತಿಲ್ಲ, ಕಾಂಗ್ರೆಸ್ಸಿಗರು ಎಸ್ ಎಂ ಕೃಷ್ಣ ಅವರನ್ನು ದೂರುತ್ತಿಲ್ಲ. ಒಂದು ಲೆಕ್ಕದಲ್ಲಿ ತಾನಾಯಿತು ತನ್ನದಾಯಿತು ಎನ್ನುವಂತಿರುವ ಎಸ್ ಎಂ ಕೃಷ್ಣ ಅವರ ಆರೋಗ್ಯ ಸರಿಯಾಗಿದೆ ಎಂದು ಆಶಿಸೋಣ. ರಾಜ್ಯ ಕಂಡ ಪ್ರಭಾವಿ ಮುಖಂಡರೊಬ್ಬರು ಯಾವುದೇ ಪಕ್ಷದಲ್ಲಿರಲಿ ಆದರೆ ಸಕ್ರಿಯವಾಗಿರಲಿ ಎನ್ನುವುದೇ ಎಲ್ಲರ ಆಶಯ.