ಆಷಾಢ ಮಾಸ ’ಅಮಂಗಳ’ ಎನ್ನುವ ನಂಬಿಕೆಯಾಕೆ?
ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ನಾಲ್ಕನೇ ಮಾಸವೇ 'ಆಷಾಢ'. ದಕ್ಷಿಣಾಯಣದ ಪರ್ವ ಕಾಲದಲ್ಲಿ ಜೇಷ್ಠ ಮಾಸದ ಅಮವಾಸ್ಯೆಯ ಮರುದಿನ ಅಂದರೆ ಪಾಡ್ಯ ತಿಥಿಯಿಂದ ಆಷಾಢ ಮಾಸ ಆರಂಭವಾಗುತ್ತದೆ. ಈ ಮಾಸದಲ್ಲಿ ಯಾರೂ ಶುಭ ಕೆಲಸ ಮಾಡಲು ಮುಂದಾಗುವುದಿಲ್ಲ.
ನಮ್ಮ ದಿನಚರಿ, ಸಂಪ್ರದಾಯ, ಪರಿಸರದ ಜೊತೆ ಹೊಂದಿಕೊಂಡಂತೆ ಶುಭ ಕೆಲಸವಲ್ಲದೇ ಈ ಮಾಸದಲ್ಲಿ ಗಂಡ ಹೆಂಡತಿಯರು ಜೊತೆಗಿರಬಾರದು, ಅತ್ತೆ ಸೊಸೆ ಜೊತೆಗಿದ್ದರೆ ಕುಟುಂಬಕ್ಕೆ ಕೆಡುಕು ತಪ್ಪಿದ್ದಲ್ಲ ಎನ್ನುವ ನಂಬಿಕೆಯನ್ನು ಪಾಲಿಸಿಕೊಂಡು ಬರುವ ಜನರ ನಡುವೆ ನಾವು ಬದುಕುತ್ತಿದ್ದೇವೆ. (ಆಷಾಢದಲ್ಲಿ ಪತಿಪತ್ನಿ ಜೊತೆಗಿರಬಾರದು)
ಪ್ರಾಚೀನ ಕಾಲದಿಂದಲೂ ಆಷಾಢ ಅಮಂಗಳ ಎನ್ನುವ ನಂಬಿಕೆಯಿದೆ. ಈ ಮಾಸದಲ್ಲಿ ದೇವತೆಗಳು ಯೋಗ ನಿದ್ರೆಯಲ್ಲಿರುತ್ತಾರೆ. ಹಾಗಾಗಿ ಈ ಮಾಸದಲ್ಲಿ ಮಾಡುವ ಯಾವುದೇ ಮಂಗಳಕಾರ್ಯಕ್ಕೆ ಬಲವಿರುವುದಿಲ್ಲ ಮತ್ತು ಸಫಲವಾಗುವುದಿಲ್ಲ ಎನ್ನುವುದು ಶತಮಾನಗಳಿಂದಿರುವ ನಂಬಿಕೆ.
ಇನ್ನು ಈ ಮಾಸ ಯಾಕೆ ಅಮಂಗಳ ಎಂದು ವೈಜ್ಞಾನಿಕ ಕಾರಣವನ್ನು ಹುಡುಕಲು ಹೊರಟರೆ, ನೂರಾರು ವರ್ಷಗಳ ಹಿಂದೆ ಕಾಲಕ್ಕೆ ತಕ್ಕಂತೆ ಏನೇನು ಆಗಬೇಕಾಗಿತ್ತೋ ಅದೆಲ್ಲಾ ಆಗುತ್ತಿತ್ತು. ಸಾಮಾನ್ಯವಾಗಿ ಈ ಮಾಸದಲ್ಲಿ ಕುಂಭದ್ರೋಣ ಮಳೆಯಾಗುತ್ತಿತ್ತು. ಜನರಿಗೆ ಮನೆಯಿಂದ ಹೊರಬರಲು ಆಗುತ್ತಿರಲಿಲ್ಲ. ಮಳೆ ಮತ್ತು ಗಾಳಿಯಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿ ಹೊರಗಿನ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿತ್ತು.
ರೈತರಿಗೆ ಸಾಗುವಳಿ ಮಾಡಲು ಈ ಮಾಸ ನೆಚ್ಚಿನ ಮಾಸ, ಹೊಲಗದ್ದೆಗಳಲ್ಲಿ ಹೆಚ್ಚಿನ ಕೆಲಸವಿರುತ್ತಿರುವುದರಿಂದ ಬೇರೆ ಯಾವುದೇ ಕೆಲಸಕ್ಕೆ ಸಮಯ ಸಿಗುತ್ತಿರಲಿಲ್ಲ. ಹಾಗಾಗಿ ಆಷಾಢ ಮಾಸದಲ್ಲಿ ಶುಭ ಕಾರ್ಯಕ್ಕೆ ನಿಷೇಧ ಹೇರಲಾಗಿತ್ತು ಎಂದೂ ಹೇಳಲಾಗುತ್ತದೆ. (ಆಷಾಢ ಮಾಸ ಶುಭ ಕಾರ್ಯಕ್ಕೆ ಅಮಂಗಳವೆ)
ಇನ್ನು ಸಾಧಕರಿಗೆ ಈ ಮಾಸ ಬಹಳ ಪ್ರಶಸ್ತ. ಹಾಗಾಗಿಯೇ ಯತಿಗಳು ಈ ಮಾಸದಲ್ಲಿ ಚಾತುರ್ಮಾಸ ವ್ರತ ಆರಂಭಿಸುತ್ತಾರೆ. ಈ ಮಾಸಕ್ಕೆ ಬಹಳಷ್ಟು ಧಾರ್ಮಿಕ ವಿಶೇಷತೆಗಳಿವೆ. ಮಹಾ ಪತಿವೃತೆ ಅನಸೂಯಾ ದೇವಿ ಈ ಮಾಸದ ನಾಲ್ಕು ಸೋಮವಾರ ಶಿವವ್ರತವನ್ನು ನಡೆಸಿದ್ದಳು.
ಶಿವ ತನ್ನ ಅರ್ಧಾಂಗಿ ಪಾರ್ವತಿಗೆ 'ಅಮರತ್ವ'ದ ರಹಸ್ಯವನ್ನು ತಿಳಿಸಿರುವುದು ಇದೇ ಮಾಸದಲ್ಲಿ. ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬರಲಾರಂಭಿಸಿದ್ದು ಈ ಮಾಸದಲ್ಲೇ. ಗೌತಮ ಮಹರ್ಷಿಗಳಿಂದ ಶಾಪಗೊಳಗಾದ ದೇವೇಂದ್ರನು ಅದರ ವಿಮೋಚನೆಗೆ ಆಷಾಢ ಮಾಸದ ನಾಲ್ಕು ಸೋಮವಾರ ವ್ರತವನ್ನು ಆರಂಭಿಸಿದ್ದು ಇದೇ ಮಾಸದಲ್ಲಿ.
ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಆರಂಭಿಸಿದ್ದು, ಪ್ರಥಮ ಏಕಾದಶಿ ವ್ರತಾಚರಣೆ ಬರುವುದು ಆಷಾಢದಲ್ಲೇ ಎನ್ನುವುದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಜ್ಯೋತಿಷಿಗಳ ಪ್ರಕಾರ ಈ ಮಾಸದಲ್ಲಿ ಮಿಥುನ ಆಷಾಢದ ದಿನಮಾತ್ರ ಶುಭ ಕಾರ್ಯ ಮಾಡಲು ಅಡ್ಡಿಯಿಲ್ಲ. ಹಾಗೆಯೇ, ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ವಿಶೇಷ ಪೂಜೆ ಮಾಡಿದರೆ ಒಳ್ಳೆಯದು ಎನ್ನುತ್ತಾರೆ ಜ್ಯೋತಿಷಿಗಳು. (ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಸಕಲ ಸಿದ್ಧತೆ)
ಈ ಮಾಸದಲ್ಲಿ ಸೂರ್ಯೋದಯಕ್ಕೆ ಮುಂಚಿತವಾಗಿ ಸ್ನಾನ ಮಾಡಬೇಕು, ತರಕಾರಿ ಸೇವನೆ ನಿಷಿದ್ಧ, ಈ ಮಾಸದ ಅಮವಾಸ್ಯೆಯ ದಿನ ತೊಗಟಿ ಕಷಾಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಈ ಮಾಸವಿಡೀ ಅನಂತಪದ್ಮನಾಭ ಸ್ಮರಣೆ ಮಾಡಿದರೆ ಕಷ್ಟದಿಂದ ದೂರವಾಗಬಹುದು ಎಂದು ಜ್ಯೋತಿಷಿಗಳ ಅಭಿಪ್ರಾಯ ಪಡುತ್ತಾರೆ. (ಫೋಟೋ: ಪಿಟಿಐ)