ಈಶು-ಬಿಎಸ್ ವೈಗೆ ಪೆಟ್ಟು ಕೊಟ್ಟು ಒಟ್ಟು ಮಾಡಿದ್ದರ ಹಿಂದಿನ ಗುಟ್ಟು!
ಬೆಂಗಳೂರು, ಜನವರಿ 28: ಕರ್ನಾಟಕ ಬಿಜೆಪಿಯೊಳಗಿನ ತಿಕ್ಕಾಟವು ಸದ್ಯಕ್ಕೇನೋ 'ಶುಭಂ' ಎಂಬಂತೆ ಕಾಣುತ್ತಿದೆ. ಆದರೆ ಮುಂದಿನ ಹಾದಿ ಸುಗಮವಾಗೇನೂ ಇಲ್ಲ. ಬಿಎಸ್ ವೈ-ಈಶ್ವರಪ್ಪನವರ ಮಧ್ಯದ ಕಿತ್ತಾಟ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮನೆಯಂಗಳ ತಲುಪಿ, ಇಬ್ಬರೂ ನಾಯಕರ ಮಧ್ಯೆ ಜಗಳ ನಿಲ್ಲಿಸಿ ಎಂದು ಹೇಳಿದ್ದಾಗಿದೆ.
ರಾಜ್ಯದ ಬಿಜೆಪಿ ಮುಖಂಡರು ಹೇಳುವ ಪ್ರಕಾರ, ಇಬ್ಬರೂ ಅಹಂಕಾರ ಬದಿಗೊತ್ತಿ, ಪಕ್ಷದ ಯಶಸ್ಸಿಗೆ ಶ್ರಮಿಸಿ ಎಂದು ಬುದ್ಧಿವಾದ ಹೇಳಲಾಗಿದೆ. ಈ ಸಭೆಯ ವೇಳೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್, ಸಂತೋಷ್ ಮತ್ತು ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಸಭೆಯಲ್ಲಿ ಭಾಗವಹಿಸಿದ್ದರು.[ಅಸಮಾಧಾನದ ಹೊಗೆ : ಕರ್ನಾಟಕ ಬಿಜೆಪಿಯ ನಾಯಕರಿಗೆ 8 ಪ್ರಶ್ನೆ]
ಕರ್ನಾಟಕ ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನಕ್ಕಾಗಿ ಅಂತಿಮವಾಗಿ ಬಿಜೆಪಿಯ ರಾಷ್ಟ್ರೀಯ ನಾಯಕರೇ ಮಧ್ಯಪ್ರವೇಶಿಸ ಬೇಕಾಯಿತು. ಈಶ್ವರಪ್ಪನವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಮಾಡಿದ ಶಿಫಾರಸು, ಯಡಿಯೂರಪ್ಪನವರ ಕಾಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬರೆದಂಥ ಭಿನ್ನಮತೀಯರ ಪತ್ರವನ್ನು ಅಮಿತ್ ಶಾ ಗಮನಕ್ಕೆ ತರಲಾಯಿತು.[ಬಿಎಸ್ ವೈ- ಈಶ್ವರಪ್ಪ ಸಂಧಾನ ಸಭೆಯಲ್ಲಿ ಆರೆಸ್ಸೆಸ್ ನ ಮುಕುಂದ]
ಈಶ್ವರಪ್ಪ ನಿರೀಕ್ಷೆ ಹುಸಿ
ಇನ್ನು ಮುಂದೆ ಬ್ರಿಗೇಡ್ ನಿಂದ ದೂರವಿರುವಂತೆ ಈಶ್ವರಪ್ಪ ಅವರಿಗೆ ಹೇಳಿದ್ದರಿಂದ, ವರಿಷ್ಠರ ಮನವೊಲಿಸುವ ವಿಶ್ವಾಸದಲ್ಲಿದ್ದ ಈಶ್ವರಪ್ಪನವರ ನಿರೀಕ್ಷೆ ಹುಸಿಯಾಯಿತು. ಬ್ರಿಗೇಡ್ ಚಟುವಟಿಕೆಗಳಲ್ಲಿ ಈಶ್ವರಪ್ಪ ಭಾಗವಹಿಸದಿರಲಿ ಎಂಬ ಕಾರಣಕ್ಕೆ ಬಿಜೆಪಿಯ ಒಬಿಸಿ ಮೋರ್ಚಾದ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಯಡಿಯೂರಪ್ಪನವರಿಗೆ ಮೂಗುದಾರ
ಯಡಿಯೂರಪ್ಪನವರಿಗೂ ಮೂಗು ದಾರ ಬಿದ್ದಿದೆ. ಇನ್ನು ಮುಂದೆ ಪಕ್ಷದ ನಿರ್ಧಾರಗಳನ್ನು ಕೋರ್ ಸಮಿತಿ ತೆಗೆದುಕೊಳ್ಳಲಿದೆ. ಸತ್ ಕಾರಣಗಳಿಗಾಗಿ ಯಡಿಯೂರಪ್ಪನವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಈಶ್ವರಪ್ಪನವರಿಗೆ ಅರ್ಥ ಮಾಡಿಸಲಾಯಿತು. ಇನ್ನು ಮುಂದೆ ರಾಯಣ್ಣ ಬ್ರಿಗೇಡ್ ಸಮಾವೇಶಗಳು ನಡೆಯುವುದಿಲ್ಲ. ಆದರೆ ರಾಯಣ್ಣ ಹೆಸರಿನಲ್ಲಿ ಬಿಜೆಪಿಯಿಂದ ರಾಜ್ಯದಾದ್ಯಂತ ಸಮಾವೇಶಗಳು ನಡೆಯಲಿದೆ.
ಇಬ್ಬರ ಮುಖದಲ್ಲೂ ಸಂತಸ ಇರಲಿಲ್ಲ
ಬ್ರಿಗೇಡ್ ಒಂದು ಸಾಮಾಜಿಕ ಸಂಘಟನೆ. ಅದು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಹೊಂದಿಲ್ಲ ಎಂದಿದ್ದರು ಈಶ್ವರಪ್ಪ. ಇಬ್ಬರೂ ನಾಯಕರಿಗೆ ಶುಕ್ರವಾರ ಬಿಜೆಪಿ ವರಿಷ್ಥರು ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಸಭೆಯ ಕೊನೆಗೆ ಇಬ್ಬರ ಮುಖದಲ್ಲೂ ಸಂತಸ ಇರಲಿಲ್ಲ.
ಅನಿವಾರ್ಯವಾಗಿ ಒಟ್ಟಿಗೆ ಕೆಲಸ
ಯಡಿಯೂರಪ್ಪ ಅವರು ಅನಿವಾರ್ಯವಾಗಿ ಈಶ್ವರಪ್ಪ ಜೊತೆಗೆ ಕೆಲಸ ಮಾಡಲೇಬೇಕಿದೆ. ಅವರ ಬಳಿ ಈಗ ಒಬಿಸಿ ಮೋರ್ಚಾದ ನೇತೃತ್ವ ಇದೆ. ಇನ್ನು ತಮ್ಮ ನೆಚ್ಚಿನ ರಾಯಣ್ಣ ಬ್ರಿಗೇಡ್ ನಿಂದ ಈಶ್ವರಪ್ಪ ಕೂಡ ಅಂತರ ಕಾಯ್ದುಕೊಳ್ಳಬೇಕಿದೆ. ಐದು ರಾಜ್ಯಗಳ ಚುನಾವಣೆಯಲ್ಲಿ ತಲ್ಲೀನರಾಗಿದ್ದ ವರಿಷ್ಠರಿಗೆ ಕರ್ನಾಟಕ ಬಿಜೆಪಿ ತಿಕ್ಕಾಟ ಹೊರೆಯಾಗಿ ಪರಿಣಮಿಸಿತ್ತು ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಗಟ್ಟಿ
ದಕ್ಷಿಣ ಭಾರತದಲ್ಲಿ ತುಂಬ ಒಳ್ಳೆ ಸ್ಥಿತಿಯಲ್ಲಿ ಎಂದು ಬಿಜೆಪಿ ಇರುವುದು ಕರ್ನಾಟಕದಲ್ಲಿ ಮಾತ್ರ. ಇಲ್ಲೂ ಕೂಡ ಕಿತ್ತಾಡಿಕೊಂಡು, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಧಿಕಾರವನ್ನು ಬಿಟ್ಟುಕೊಡುವಂತೆ ಆಗಬಾರದು ಎಂಬುದು ವರಿಷ್ಠರ ಚಿಂತನೆ. ಈ ಹಿಂದಿನ ಆಂತರಿಕ ಜಗಳವು ಪಾಠ ಕಲಿಸಿದೆ ಎಂದು ಮೂಲಗಳು ತಿಳಿಸಿವೆ.