ಹಸಿರು ವಿಜಯಪುರಕ್ಕಾಗಿ ಫೆಬ್ರವರಿ 26ರಂದು ಮ್ಯಾರಥಾನ್
ವಿಜಯಪುರ, ಫೆಬ್ರವರಿ 21 : ವಾಯು ಮಾಲಿನ್ಯ ತಗ್ಗಿಸಲು, ಪರಿಸರ ಕಾಪಾಡಲು, ಹಸಿರನ್ನು ಉಳಿಸಲು ವಿಜಯಪುರ(ಬಿಜಾಪುರ)ದಲ್ಲಿ ಫೆಬ್ರವರಿ 26, ಭಾನುವಾರದಂದು 'ವೃಕ್ಷಥಾನ್ 2017' ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಾಡಾಗುತ್ತಿರುವ ನಾಡನ್ನು ಕಾಡನ್ನಾಗಿ ಮಾಡುವ ಉದ್ದೇಶದಿಂದ 'ವೃಕ್ಷಥಾನ್ 2017 - ಗೋಲ್ ಗುಂಬಜ್ ಮ್ಯಾರಥಾನ್' ಸ್ಪರ್ಧೆಯನ್ನು ವಿಜಯಪುರದ ವೃಕ್ಷ ಅಭಿಯಾನ ಪ್ರತಿಷ್ಠಾನ ಆಯೋಜಿಸಿದೆ. ಈ ಕಾರ್ಯಕ್ರಮದ ಅಂಗವಾಗಿ ಸಸಿಗಳನ್ನು ಕೂಡ ನೆಡಲಾಗುತ್ತಿದೆ.
ಸಸಿಗಳನ್ನು ಮಾತ್ರವಲ್ಲ, ಬೃಹತ್ ಗಿಡಗಳನ್ನು ನೆಡುವುದು, ಜನರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಮೂಡಿಸುವುದು ವೃಕ್ಷಥಾನ್ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಇದರ ರೂವಾರಿ ರಾಜ್ಯ ಜಲಸಂಪನ್ಮೂಲ ಸಚಿವ ಡಾ. ಎಂಬಿ ಪಾಟೀಲ.
ಇದಕ್ಕೆ ಬ್ರಾಂಡ್ ರಾಯಭಾರಿಯಾಗಿ ಖ್ಯಾತ ಕನ್ನಡ ನಟ 'ರಾಕಿಂಗ್ ಸ್ಟಾರ್' ಯಶ್ ಅವರು ಕೂಡ ನಿಯೋಜಿತರಾಗಿದ್ದಾರೆ. ಈ ಓಟಕ್ಕಾಗಿ ಈಗಾಗಲೆ 21 ಸಾವಿರಕ್ಕೂ ಹೆಚ್ಚು ಉತ್ಸಾಹಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಭಾಗಿಯಾಗಬಯಸುವವರು ಇಲ್ಲಿ ಕ್ಲಿಕ್ಕಿಸಿ ಪರಿಸರಕ್ಕಾಗಿ ಓಡಬಹುದಾಗಿದೆ.
2 ಕಿ.ಮೀ., 3 ಕಿ.ಮೀ, 5 ಕಿ.ಮೀ, 10 ಕಿ.ಮೀ ಮತ್ತು ಹಾಫ್ ಮ್ಯಾರಥಾನ್ (21 ಕಿ.ಮೀ) ಓಡುವ ಹಲವಾರು ವಿಭಾಗಗಳನ್ನು ತೆರೆಯಲಾಗಿದೆ. ಇದಲ್ಲದೆ ವಿಶೇಷ ಚೇತನರಿಗೆ ಸ್ಪೆಷಲ್ ರನ್ (100 ಮೀಟರ್) ಮತ್ತು ಸರ್ವರಿಗಾಗಿ ಹ್ಯಾಪಿ ರನ್ (400 ಮೀಟರ್) ಓಟವನ್ನು ಕೂಡ ಆಯೋಜಿಸಲಾಗಿದೆ.
ಭರ್ಜರಿ ಬಹುಮಾನ : ಹಾಫ್ ಮ್ಯಾರಥಾನ್ ನಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಗೆದ್ದ ಪುರುಷ ಮತ್ತು ಸ್ತ್ರೀಯರಿಗೆ ಕ್ರಮವಾಗಿ 1 ಲಕ್ಷ ರುಪಾಯಿ, 75 ಸಾವಿರ ರುಪಾಯಿ ಮತ್ತು 50 ಸಾವಿರ ರುಪಾಯಿಗಳನ್ನು ನೀಡಲಾಗುತ್ತಿದೆ. ಉಳಿದ ಸ್ಪರ್ಧೆಯಲ್ಲಿ ಜಯಶಾಲಿಯಾದವರಿಗೂ ಆಕರ್ಷಕ ಬಹುಮಾನಗಳಿವೆ.
ನೋಂದಾಯಿಸಿಕೊಳ್ಳಬಯಸುವವರು 500 ರುಪಾಯಿ ಮ್ಯಾರಥಾನ್ ಓಟದಲ್ಲಿ ಭಾಗವಹಿಸಬಹುದು. ಯಾವುದಕ್ಕೂ ಹೆಚ್ಚಿನ ಮಾಹಿತಿಗಾಗಿ ಈ ವೆಬ್ ತಾಣವನ್ನು ಸಂದರ್ಶಿಸಿ.