ವಿಶ್ವಕರ್ಮ ಅಧ್ಯಕ್ಷ ಕೆ ಪಿ ನಂಜುಂಡಿ ಧಿಡೀರ್ ಬಿಜೆಪಿ ಸೇರ್ಪಡೆ
ಬೆಂಗಳೂರು, ಜೂನ್ 22 : ವಿಧಾನ ಪರಿಷತ್ ಸದಸ್ಯ ಸ್ಥಾನ ಕೈತಪ್ಪಿದ್ದರಿಂದ ಅಸಮಧಾನಗೊಂಡು ಕಾಂಗ್ರೆಸ್ ಪಕ್ಷ ತೊರೆದಿದ್ದ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಹಾಗೂ ಉದ್ಯಮಿ ಕೆ ಪಿ ನಂಜುಂಡಿ ಗುರುವಾರ ಧಿಡೀರ್ ಬಿಜೆಪಿ ಸೇರ್ಪಡೆಯಾಗಿರುವುದಾಗಿ ಘೋಷಿಸಿದ್ದಾರೆ.
ವಿಶ್ವಕರ್ಮ ಸಮಾಜದ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ತೊರೆದು ಕೆ.ಪಿ ನಂಜುಂಡಿ ಬಿಜೆಪಿಗೆ ಸೇರ್ಪಡೆ?
ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡಿ ನಂಜುಂಡಿ. 'ನಾನು ಈಗಿಂದಲೇ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಯಾವುದೇ ಷರತ್ತುಗಳಿಲ್ಲದೆ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ.
ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ. ಯಡಿಯೂರಪ್ಪ ಸತ್ಯ ಹರಿಶ್ಚಂದ್ರ ಇದ್ದಹಾಗೆ. ಕೊಟ್ಟ ಮಾತನ್ನು ಈಡೇರಿಸದೇ ಉಳಿಯುವುದಿಲ್ಲ' ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಮಾತನಾಡಿ, ಈ ಕ್ಷಣದಿಂದಲೇ ನಂಜುಂಡಿ ಬಿಜೆಪಿ ಸೇರಿದ್ದಾರೆ. ಮುಂದಿನ ಚುನಾವಣೆ ಬಳಿಕ ನಂಜುಂಡಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು.
ಯಾವುದೇ ಬೇಡಿಕೆಯನ್ನು ಇಡದೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅವರ ಅಧಿಕೃತ ಬಿಜೆಪಿ ಸೇರ್ಪಡೆ ಎರಡ್ಮೂರು ದಿನಗಳಲ್ಲಿ ತಿಳಿಯಲಿದೆ ಎಂದು ಹೇಳಿದರು.