ಭೀಮಾ ತೀರದ ಬಾಗಪ್ಪ ಹರಿಜನ ಹತ್ಯೆ ಯತ್ನ, 6 ಮಂದಿ ಬಂಧನ
ವಿಜಯಪುರ, ಆಗಸ್ಟ್ 16 : ಇತ್ತೀಚೆಗೆ ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರೌಡಿ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ಭೀಮಾ ತೀರದಲ್ಲಿ ಮತ್ತೆ ನೆತ್ತರು; ಚಂದಪ್ಪ ಹರಿಜನನ ಬಂಟ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ
ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎನ್ನಲಾದ ಆಲಮೇಲ ಪಟ್ಟಣದ ಭೀಮಶ್ಯಾ ಅಲಿಯಾಸ್ ಭೀಮು ಯಲ್ಲಪ್ಪ ಹರಿಜನ (36), ಸುಪಾರಿ ಪಡೆದಿದ್ದ ಆಳಂದ ತಾಲ್ಲೂಕಿನ ತಡಕಲ್ಲ ಗ್ರಾಮದ ರಮೇಶ ಬಾಬುರಾವ ಹಡಪದ (44), ಶಿರವಾಳದ ನಾಮದೇವ ಲಕ್ಷ್ಮಣ ದೊಡಮನಿ (50), ರಜಾಕ್ ಮಮ್ಮುಲಾಲ ಅಲಿಯಾಸ್ ಮಹ್ಮದ್ ಸಾಬ್ ಕಾಂಬಳೆ, ಭಾಸಗಿ ಗ್ರಾಮದ ಪ್ರಭು ತುಕಾರಾಮ ಜಮಾದಾರ (48), ಮಲ್ಲೇಶಪ್ಪ ಭೀಮಶ್ಯಾ ಬಿಂಜಗೇರಿ (48) ಬಂಧಿತರು.
'ಸಂಚು ರೂಪಿಸಿದವರು, ಸುಪಾರಿ ಕೊಟ್ಟವರು ಮತ್ತು ಪಡೆದವರನ್ನು ಬಂಧಿಸಲಾಗಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಸೇರಿದಂತೆ ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಶೀಘ್ರವೇ ಬಂಧಿಸಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.