ವಿಧಾನಸೌಧಕ್ಕೆ ಬಂದ ಕಾರಿನಲ್ಲಿ 2.5 ಕೋಟಿ, ಸಚಿವರಿಗೆ ದಕ್ಷಿಣೆ ಕಾಸಾ?
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಎಂಟ್ರಿ ಕೊಡುತ್ತಿದ್ದ ಕಾರಿನಲ್ಲಿ ಸುಮಾರು ಎರಡುವರೆ ಕೋಟಿ ರೂಪಾಯಿಗೂ ಅಧಿಕ 'ಲಿಕ್ವಿಡ್ ಕ್ಯಾಷ್' ಪತ್ತೆಯಾದ ಘಟನೆ ಶುಕ್ರವಾರ ಮಧ್ಯಾಹ್ನ (ಅ 21) ವರದಿಯಾಗಿದೆ.
ಬೆಂಗಳೂರು, ಅ 21: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಎಂಟ್ರಿ ಕೊಡುತ್ತಿದ್ದ ಕಾರಿನಲ್ಲಿ ಸುಮಾರು ಎರಡುವರೆ ಕೋಟಿ ರೂಪಾಯಿಗೂ ಅಧಿಕ 'ಲಿಕ್ವಿಡ್ ಕ್ಯಾಷ್' ಪತ್ತೆಯಾದ ಘಟನೆ ಶುಕ್ರವಾರ ಮಧ್ಯಾಹ್ನ (ಅ 21) ವರದಿಯಾಗಿದೆ.
ಧಾರವಾಡ ಮೂಲದ ವಕೀಲರೊಬ್ಬರ ಕಾರಿನಲ್ಲಿ ಈ ಭಾರೀ ಮೊತ್ತದ ಹಣ ಪತ್ತೆಯಾಗಿದ್ದು, ಟೆಂಡರ್ ಅನುಮೋದನೆ ಗಿಟ್ಟಿಸಲು ಸಚಿವರೊಬ್ಬರಿಗೆ ಕೊಡಲು ಈ ಹಣ ಕಾರಿನಲ್ಲಿ ಇಡಲಾಗಿತ್ತು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಕೆಂಗಲ್ ಹನುಮಂತಯ್ಯ ದ್ವಾರದ ಮೂಲಕ ಕೆಎ-04-ಎಂಎಂ-9018 ನೊಂದಣಿಯ ವೋಕ್ಸ್ ವ್ಯಾಗನ್ ಕಾರು ಪ್ರವೇಶಿಸಲು ಮುಂದಾದಾಗ, ಶಕ್ತಿಕೇಂದ್ರದ ರಕ್ಷಣಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಈ ದುಡ್ಡು ಪತ್ತೆಯಾಗಿದೆ.
ಮೂರು ಬಾಕ್ಸ್ ಗಳಲ್ಲಿ ಶೇಖರಿಸಿಡಲಾಗಿದ್ದ ಹಣ, ಧಾರವಾಡದ ವಕೀಲ ಸಿದ್ದಾರ್ಥ್ ಎನ್ನುವವರ ಕಾರಿನಲ್ಲಿತ್ತು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಕಾರನ್ನು ಮತ್ತು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಡಿಸಿಪಿ ಕಚೇರಿಯಲ್ಲಿನ ಭದ್ರತಾ ವಿಭಾಗದ ಡಿಸಿಪಿ ಯೋಗೇಶ್ ಮತ್ತು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೇಲ್, ಸಿದ್ದಾರ್ಥ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಟೆಂಡರ್ ಸಂಬಂಧ ಸಚಿವರೊಬ್ಬರಿಗೆ ನೀಡಲು ಈ ಹಣ ತಂದಿರಬಹುದು ಎನ್ನುವುದು ಪೊಲೀಸರ ಶಂಕೆ.
ಕೊನೇ ಮಾತು: ದುಡ್ಡು ತರೋದು ತಂದಿದೀಯಾ, ಅದನ್ನು ಸರಿಯಾಗಿ ಮುಚ್ಕೊಂಡು ತರಬಾರದೇನಯ್ಯಾ ಎಂದು 'ಆ ಸಚಿವರೊಬ್ಬರು' ಅವರನ್ನು ಅದೆಷ್ಟು ಬೆಂಡೆತ್ತವ್ರೋ.. ಪಾಪ.. ಶಿವನೇ ಸಿದ್ಧಾರೂಢ!!