ಹಾವು ರಕ್ಷಿಸಲು ಹೋಗಿ ಅಪಘಾತ, ವೃದ್ಧ ದಂಪತಿ ಸಾವು
ಮಂಡ್ಯ, ಮೇ 30 : ಮೇಲುಕೋಟೆ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಮಧ್ಯೆ ಹೋಗುತ್ತಿದ್ದ ಹಾವನ್ನು ರಕ್ಷಿಸಲು ಮುಂದಾಗಿದ್ದರಿಂದ ಕಾರು ನಿಯಂತ್ರಣ ತಪ್ಪಿ ಲೋಕಪಾವನಿ ನದಿಗೆ ಬಿದ್ದಿದ್ದರಿಂದ ದಂಪತಿ ಸಾವನ್ನಪ್ಪಿ ಆರು ಮಂದಿ ಗಾಯಗೊಂಡ ದಾರುಣ ಘಟನೆ ಜರುಗಿದೆ.
ಬೆಂಗಳೂರಿನ ಭುವನೇಶ್ವರಿನಗರ ಬಡಾವಣೆಯ ಸೀತಾರಾಮರಾಜು(75) ಹಾಗೂ ಅವರ ಪತ್ನಿ ರತ್ನಮ್ಮ (62) ಮೃತ ದಂಪತಿ. ಇವರ ಮಗ ಶ್ರೀಧರ್ರಾಜು (45), ಪತ್ನಿ ಮಮತಾ (40), ಪುತ್ರ ರಾಹುಲ್ (15), ಕೃಷ್ಣ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಶ್ರೀಧರ್ರಾಜು ಅವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ದಾಖಲಿಸಲಾಗಿದೆ.
ಬೆಂಗಳೂರಿನ ಭುವನೇಶ್ವರಿ ನಗರ ಬಡಾವಣೆಯ ಸೀತಾರಾಮು ಮತ್ತವರ ಕುಟಂಬದವರು ಮಹೇಂದ್ರ ಎಕ್ಸ್ಯುವಿ ಕಾರಿನಲ್ಲಿ ಮೇಲುಕೋಟೆಗೆ ತೆರಳುತ್ತಿದ್ದರು. ಮಂಡ್ಯ-ಮೇಲುಕೋಟೆ ರಸ್ತೆಯಲ್ಲಿ ತೆರಳುತ್ತಿದ್ದಾಗ ಸಂಗಾಪುರ ಸಮೀಪ ಲೋಕಪಾವನಿ ನದಿ ಬಳಿ ರಸ್ತೆ ಮಧ್ಯೆ ಹಾವು ಹೋಗುತ್ತಿದ್ದನ್ನು ಕಂಡ ಚಾಲಕ ಅದನ್ನು ರಕ್ಷಿಸಲು ಕಾರನ್ನು ಪಕ್ಕಕ್ಕೆ ತಿರುಗಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಕಾಲುವೆಗೆ ಉರುಳಿಬಿದ್ದಿದೆ.
ಘಟನೆಯಿಂದಾಗಿ ಸೀತಾರಾಮರಾಜು ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ರತ್ನಮ್ಮ ಮತ್ತಿತರರನ್ನು ತಕ್ಷಣ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ರತ್ನಮ್ಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪಿಎಸ್ಐ ಬಬಿತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.