ವಾಟಾಳ್ ಬಿಟ್ಟರೆ ಕರ್ನಾಟಕ ಬಂದ್ ಕೇಳೋರೇ ಇಲ್ಲ
ಬೆಂಗಳೂರು, ಜೂನ್ 12: ತಿಂಗಳಿಗೊಂದರಂತೆ ವಾಟಾಳ್ ನಾಗರಾಜ್ ಕರೆ ನೀಡುವ ಬೆಂಗಳೂರು ಬಂದಿನಿಂದ ಜನ ರೋಸಿ ಹೋಗಿದ್ದಾರೆ. ಈ ಬಂದ್ ನಿಂದ ಏನೂ ಉಪಯೋಗ ಇಲ್ಲ ಎಂದು ಜನ ಮನಗಂಡಿದ್ದಾರೆ. ಪರಿಣಾಮ ಈ ಬಾರಿ ಬೆಂಗಳೂರಿನಲ್ಲಿ ಬಂದ್ ಅಕ್ಷರಶಃ ವಿಫಲ. ವಾಟಾಳ್ ನಾಗರಾಜ್ ಪಟಾಕಿ ಮಳೆಯ ಕಾರಣಕ್ಕೆ ಠುಸ್ ಆಗಿದೆ.
IN Pics: ವಾಟಾಳ್ 'ಕರ್ನಾಟಕ ಬಂದ್' ಪಟಾಕಿ ಮತ್ತೆ ಠುಸ್
ಇನ್ನು ಕೋಲಾರ, ಚಿಕ್ಕಬಳ್ಳಾಪುರ ಭಾಗದವರು ಮಾತ್ರ ಬೆಂಗಳೂರಿಗರ ಮೇಲೆ ಮುನಿಸಿಕೊಂಡಿದ್ದಾರೆ. ಕಾರಣ ಅವರ ಬೇಡಿಕೆಗಳಿಗೆ ಬೆಂಗಳೂರಿಗರು ಪ್ರತಿಕ್ರಿಯೆ ನೀಡುತ್ತಿಲ್ಲ. ಕಾವೇರಿ, ಬೆಂಗಳೂರಿಗರ ಬೇಡಿಕೆಗಳಿಗೆ ನಾವು ಬಂದ್ ಮಾಡಬೇಕು. ಆದರೆ ನಮ್ಮ ಬೇಡಿಕೆಗಳಿಗೆ ಬೆಂಗಳೂರಿಗರು ಬೆಂಬಲಿಸುತ್ತಿಲ್ಲ ಎಂಬುದು ಆ ಭಾಗದ ಜನರ ಕೊರಗು.
ಇನ್ನು ಸಂಪ್ರದಾಯದಂತೆ ಕರಾವಳಿ ಮತ್ತು ಮಲೆನಾಡಿನಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ. ವಿಶೇಷ ಕಾರಣಗಳನ್ನು ಬಿಟ್ಟರೆ ಈ ಜನ ಯಾವತ್ತೂ ಬಂದ್ ನಿಂದ ದೂರವೇ. ಈ ಬಾರಿಯೂ ಅದೇ ಪುನರಾವರ್ತನೆ.
ಕನ್ನಡ ಪರ ಸಂಘಟನೆಗಳಿಂದಲೂ ಭಿನ್ನ ರಾಗ
ಸಾಮಾನ್ಯವಾಗಿ ಕರ್ನಾಟಕ ಬಂದ್ ಎಂದ ತಕ್ಷಣ ಕನ್ನಡ ಪರ ಸಂಘಟನೆಗಳೆಲ್ಲಾ ಒಟ್ಟಾಗುತ್ತವೆ. ಆದರೆ ಈ ಬಾರಿ ಹಾಗಾಗಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಈ ಬಾರಿ ಬಂದಿನಿಂದ ದೂರವೇ ಉಳಿಯಿತು. ಮಾತ್ರವಲ್ಲ ನಾರಾಯಣ ಗೌಡರು ವಾಟಾಳ್ ರನ್ನು ತರಾಟೆಗೂ ತೆಗೆದುಕೊಂಡರು. "ನಾನು ಎನ್ನುವುದನ್ನು ಬಿಟ್ಟರೆ ಬಂದ್ ಯಶಸ್ವಿಯಾದೀತು. ಸರ್ವಾಧಿಕಾರಿಯಂತೆ ವರ್ತಿಸಬಾರದು," ಎಂಬ ಪದಗಳು ಅವರ ಬಾಯಿಯಿಂದ ಬಂದವು. ಹೀಗೆ ವಾಟಾಳ್ ಗೊಬ್ಬ ಎದುರಾಳಿನ ಅವರ ಪಾಳಯದಲ್ಲೇ ಹುಟ್ಟಿಕೊಂಡರು.
ಏನುಪಯೋಗ ?
ಸತತವಾಗಿ ನಮ್ಮ ರಾಜ್ಯಕ್ಕೆ ನೀರಿನ ವಿಚಾರದಲ್ಲಿ ಹಿನ್ನಡೆಯಾಗುತ್ತಿದೆ ನಿಜ. ಹಾಗಂಥ ಇಷ್ಟೊಂದು ಬಂದ್ ಗಳನ್ನು ಮಾಡಿದ ಮೇಲೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡಿದೆಯೇ? ಕೇಂದ್ರದಿಂದ ನಮಗೆ ನ್ಯಾಯ ಸಿಕ್ಕಿದೆಯೇ? ಕೇಳಿದರೆ ಇಲ್ಲ. ಹೀಗಿರುವಾಗ ಬಂದ್ ಮಾಡುವುದು ನಮ್ಮ ಕರ್ತವ್ಯ ಎನ್ನುವಂತೆ ವಾಟಾಳ್ ಪ್ರತಿ ಬಾರಿ ಬಂದ್ ಮಾಡುತ್ತಾ ಬಂದರೆ ಜನ ಯಾಕೆ ಬೆಂಬಲಿಸುತ್ತಾರೆ ಹೇಳಿ.
18 ತಿಂಗಳಲ್ಲಿ 6ಬಂದ್! ರಾಜ್ಯಕ್ಕಾದ ಲಾಭವಾದರೂ ಏನು ವಾಟಾಳರೇ?
ಮೋದಿ ಪ್ರತಿಕೃತಿ ನೇಣಿಗೇರಿಸಿದ್ದೇ ಬಂತು
ಕರ್ನಾಟಕ ಬಂದ್ ಪ್ರಯುಕ್ತ ನಗರದ ಚೆನ್ನಮ್ಮ ವೃತ್ತದಲ್ಲಿ ಕರವೇ ಪ್ರವೀಣ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಯಿತು. ಮಹಾದಾಯಿ ವಿಷಯದಲ್ಲಿ ಪ್ರಧಾನಿ ನಿರ್ಲಕ್ಷ್ಯ ತೊರಿಸಿದ್ದರೆಂದು ಆಕ್ರೋಶ ವ್ಯಕ್ತಪಡಿಸಿ, ಚೆನ್ನಮ್ಮ ವೃತ್ತದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ನೇಣಿಗೇರಿಸಲಾಯಿತು. ಆದರೆ ಇದನ್ನು ಪ್ರಧಾನಿ ಮಾತ್ರ ಗಮನಿಸಿದಂತೆ ಕಾಣುತ್ತಿಲ್ಲ. ಇದರಿಂದ ಪ್ರತಿಭಟನೆ ನಡೆಸಿ ಏನುಪಯೋಗವಾಯ್ತೋ ಗೊತ್ತಿಲ್ಲ!
ಹುಬ್ಬಳ್ಳಿಯಲ್ಲಿ ಮಧ್ಯಾಹ್ನದ ನಂತರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ನವಲಗುಂದ ಹಾಗೂ ಗದಗ ಜಿಲ್ಲೆಯ ನರಗುಂದದಲ್ಲಿ ಬಂದ್ ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಜಾರಿಗೊಂಡಿತ್ತು. ಇಲ್ಲಿ ಮಾತ್ರ ಬಂದ್ ಯಶಸ್ವಿಯಾಗಿತ್ತು.
ಮೋದಿ ಪ್ರತಿಕೃತಿ ನೇಣಿಗೇರಿಸಿ ಹುಬ್ಬಳ್ಳಿಯಲ್ಲಿ ಬಂದ್ ಆಚರಣೆ
ಬಯಲು ಸೀಮೆಗೇ ಬೇಡ ಕರ್ನಾಟಕ ಬಂದ್!
ಬಯಲು ಸೀಮೆಗಳಿಗೆ ಶಾಶ್ವತ ನೀರಾವರಿ ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ಬಂದ್ ಕರೆಯಲಾಗಿತ್ತು. ಆದರೆ ಬಂದ್ ಕರೆಗೆ ಬಯಲು ಸೀಮೆಯ ಜನರೇ ಓಡಿ ಹೋದರು.
ಕೋಲಾರ, ಹುಬ್ಬಳ್ಳಿ, ರಾಮನಗರ ಮುಂತಾದೆಡೆ ಪ್ರತಿಭಟನೆಯ ಬಿಸಿ ತಟ್ಟಿದ್ದು ಬಿಟ್ಟರೆ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಕೊಪ್ಪಳ, ದಾವಣಗೆರೆಗಳಲ್ಲಿ ಜನ ಕ್ಯಾರೇ ಅನ್ನಲಿಲ್ಲ. ಹಾಗಾಗಿ ಯಥಾ ಪ್ರಕಾರ ಇಲ್ಲಿ ಬಂದಿಗೆ ನೀರಸ ಪ್ರತಿಕ್ರಿಯೆ.
ಅಮ್ಮಾ, ತಿಂಗಳಿಗೆ ಒಂದೂವರೆ ತಿಂಗಳಿಗೆ ಬರುವ ಕರ್ನಾಟಕ ಬಂದ್ ಅಂದರೇನು?
ಎಲ್ಲೆಲ್ಲೂ ಬಿಗಿಭದ್ರತೆ
ಚಿಕ್ಕಮಗಳೂರು ನಗರದಲ್ಲಿ ವಾಣಿಜ್ಯ ವ್ಯವಹಾರ ಬಂದ್ ಆಗಿದ್ದು, ಎಂಜಿ ರಸ್ತೆ, ಐಜಿ ರಸ್ತೆ ಸೇರಿದಂತೆ ವಿವಿಧೆಡೆ ಅಂಗಡಿ ಮುಂಗಟ್ಟಗಳು ಮುಚ್ಚಿದ್ದು ಬಿಟ್ಟರೆ ಬಂದ್ ಅಷ್ಟೆನೂ ಯಶಸ್ವಿಯಾಗಲಿಲ್ಲ. ವಾಹನಸಂಚಾರ ಎಂದಿನಂತೆ ಇದೆ. ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿದ್ದವು.
ಇನ್ನು ಶಿರಸಿಯಲ್ಲಿ ಬಂದ್ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಶಾಲೆ-ಕಾಲೇಜುಗಳಿಗೆ ರಜೆ ಇರಲಿಲ್ಲ. ಅಂಗಡಿ, ಹೋಟೆಲ್ ಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ ಬಸ್ ಗಳು, ಖಾಸಗಿ ಬಸ್ ಗಳು ಎಂದಿನಂತೆ ಸಂಚರಿಸುತ್ತಿದ್ದವು. ಶಿವಮೊಗ್ಗದ್ದೂ ಇದೇ ಕತೆ.
ಹುಬ್ಬಳ್ಳಿಯಲ್ಲೂ ಅಬ್ಬರಿಸುತ್ತಿಲ್ಲ ಕರ್ನಾಟಕ ಬಂದ್!
ಕರಾವಳಿಯಲ್ಲಿ ಬಂದ್ ಕೇಳೋರೇ ಇಲ್ಲ
ನೀರಾವರಿ ಯೋಜನೆಗಳು ಹಾಗೂ ಸಾಲ ಮನ್ನಾಕ್ಕೆ ಆಗ್ರಹಿಸಿ ವಾಟಾಳ್ ನಾಗರಾಜ್ ಸೇರಿದಂತೆ ಇತರೆ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮಂಗಳೂರಿನಲ್ಲಿ ಬೆಂಬಲವೇ ಸಿಕ್ಕಿಲ್ಲ. ಹಾಗಂಥ ಇದೇ ಮೊದಲಲ್ಲ. ಎಲ್ಲಾ ಬಂದಿಗೂ ಇಲ್ಲಿನ ಜನ ಪ್ರತಿಕ್ರಿಯಿಸುವುದೇ ಹೀಗೆ.
ಬಂದ್ಗೆ ಕೆಲ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿದರೂ, ಬಹುತೇಕ ಸಂಘಟನೆಗಳು ಬೆಂಬಲ ನೀಡಲಿಲ್ಲ. ಹಾಗಾಗಿ ಬಂದ್ ಬಿಸಿ ನಾಗರಿಕರಿಗೆ ತಟ್ಟಿಲ್ಲ. ಖಾಸಗಿ, ಸರ್ಕಾರಿ ಬಸ್ಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ಯಾಥಾಸ್ಥಿತಿಯಲ್ಲಿದೆ. ಇನ್ನು ಶಾಲಾ, ಕಾಲೇಜು ಹಾಗೂ ಕಚೇರಿಗಳು ಸೇರಿದಂತೆ ಎಲ್ಲಾ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.
ಮಂಗಳೂರಿನಲ್ಲಿ ಕರ್ನಾಟಕ ಬಂದ್ ಬಿಸಿ ಇಲ್ಲ
ಬಂದ್ ವೈಫಲ್ಯಕ್ಕೆ ಮಾಧ್ಯಮಗಳೇ ಕಾರಣ
ಮಾಧ್ಯಮಗಳಿಂದಲೇ ಬಂದ್ ವಿಫಲವಾಗುತ್ತಿದೆ ಎಂದು ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ವೈಫಲ್ಯಕ್ಕೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು. ಇಂದು (ಜೂನ್ 12) ಬೆಳಗ್ಗೆ ಬೆಂಗಳೂರಿನ ಟೌನ್ ಹಾಲ್ ಬಳಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ವಾಟಾಳ್ ನಾಗರಾಜ್ ಸುದ್ದಿ ಗೋಷ್ಠಿ ನಡೆಸಿ, ನಾಳೆಯಿಂದ ಮತ್ತೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು. ಅವರ ಎಚ್ಚರಿಕೆ ನೋಡಿ ಜನ ಮಗ್ಗಲು ಬದಲಿಸಿ ಮಲಗಿದರು ಅಷ್ಟೆ.
ಪುಣ್ಯಕ್ಕೆ ಕೊನೆಗೂ ತಮ್ಮ ಬಂದ್ ಕರೆ ವಿಫಲವಾಗಿದೆ ಎಂಬುದನ್ನು ವಾಟಾಳ್ ಒಪ್ಪಿಕೊಂಡಿದ್ದೇ ಮಹಾಸಾಧನೆ!