ಗೋಮಾತೆಯ ಆಶೀರ್ವಾದದಿಂದ ರಾಘವೇಶ್ವರ ಶ್ರೀಗಳಿಗೆ ಏನೂ ಆಗಿಲ್ಲ
ಗೋಕರ್ಣ, ನ 4: ಗೋವು, ಧರ್ಮ ಗ್ರಂಥ, ಸಂತರ ಮೇಲೆ ನಡೆಯುತ್ತಿರುವ ಆಕ್ರಮಣ ಖಂಡನೀಯ. ಗೋಮಾತೆಯ ಆಶೀರ್ವಾದದಿಂದಾಗಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳಿಗೆ ಏನೂ ಆಗಿಲ್ಲ.
ಆದರೆ ಇನ್ನು ಮುಂದೆ ನಾಡಿನ ಯಾವುದೇ ಸಂತರ ಮೇಲೆ ಈ ರೀತಿಯ ಮಿಥ್ಯಾಪವಾದದ ಆಕ್ರಮಣ ಆಗದಂತೆ ಜಾಗೃತರಾಗಿ ನಾವೆಲ್ಲಾ ಒಗ್ಗಟ್ಟಾಗಬೇಕೆಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಗೋಕರ್ಣದಲ್ಲಿ ಬುಧವಾರ (ನ 4) 'ಧರ್ಮ ರಕ್ಷಕ ಯತಿ ಸಮಾವೇಶ' ದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದ ಸೂಲಿಬೆಲೆ, ಮಾತೃ ಹೃದಯದ ಸಂತರನ್ನು ಯಾರೂ ನೋಯಿಸಬಾರದು. ಸಂತರ ಮೇಲೆ ಸುಳ್ಳು ಆರೋಪ ಹೊರಿಸುವುದು ಮಾತೃ ಕುಲಕ್ಕೆ ಮಾಡುವ ಅವಮಾನ ಎಂದು ಅಭಿಪ್ರಾಯ ಪಟ್ಟಿದ್ದಾರೆ. (ಹೆಣ್ಣಿನ ಮೇಲೆ 169 ಬಾರಿ ಅತ್ಯಾಚಾರ ಆಗಲು ಸಾಧ್ಯವೇ)
ಶ್ರೀರಾಮಚಂದ್ರಾಪುರ ಮಠಕ್ಕೆ ಅದರದ್ದೇ ಆದ ವಿಶೇಷ ಪರಂಪರೆ ಇದೆ, ಪೀಠತ್ಯಾಗ ಎನ್ನುವುದು ಮಕ್ಕಳಾಟವಲ್ಲ. ಧರ್ಮವನ್ನು ರಕ್ಷಿಸುತ್ತಿರುವ ಸಂತ ಶ್ರೀರಾಘವೇಶ್ವರರ ವಿರುದ್ದ ಧರ್ಮವನ್ನು ರಕ್ಷಿಸಬೇಕಾದ ಕೆಲವರು ಧರ್ಮ ವಿದ್ವಂಸಕ ಕಾರ್ಯಮಾಡುತ್ತಿರುವುದು ಶೋಚನೀಯ ಎಂದು ಚಕ್ರವರ್ತಿ ಸೂಲಿಬೆಲೆ ವಿಷಾದ ವ್ಯಕ್ತಪಡಿಸಿದ್ದಾರೆ.
ಗೋಕರ್ಣದ ಧರ್ಮರಕ್ಷಕ ಯತಿ ಸಮಾವೇಶದಲ್ಲಿ ನಾಡಿನ ನಾನಾ ಭಾಗದಿಂದ ಬಂದ 300ಕ್ಕೂ ಹೆಚ್ಚು ಸಂತರು ಭಾಗವಹಿಸಿ ಸಭಾ ನಿರ್ಣಯವನ್ನು ಕೈಗೊಂಡಿದ್ದಾರೆ. ಮುಂದೆ ಓದಿ..
ಬ್ಲಾಕ್ ಮೇಲ್ ಪ್ರಕರಣದ ತನಿಖೆ ನಡೆಯಬೇಕು
ಶ್ರೀಮಠದ ಮೇಲೆ ವ್ಯವಸ್ಥಿತವಾಗಿ ನೆಡೆಯುತ್ತಿರುವ ಬ್ಲಾಕ್ ಮೇಲ್ ಪ್ರಕರಣದ ತನಿಖೆ ನಡೆಯಬೇಕು. ಆಗಲೇ, ಸತ್ಯ ಹೊರಬೀಳಲು ಸಾಧ್ಯ ಎಂದು ಸೂಲಿಬೆಲೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಂತರು-ಸೈನಿಕರು ಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ
ಸಂತರು ಮತ್ತು ಸೈನಿಕರು ಭಾರತ ಮಾತೆಯ ಎರಡು ಕಣ್ಣುಗಳಿದ್ದಂತೆ, ಸೈನಿಕ ದೇಶ ರಕ್ಷಿಸಿದರೆ, ಧರ್ಮವನ್ನು ರಕ್ಷಿಸುವರು ಸಂತರು. ಸಂತರು ಜಾಗೃತರಾದರೆ ದುಷ್ಟಶಕ್ತಿ ದೂರವಾಗುತ್ತದೆ, ಹಾಗಾಗಿ ಸಂತರು ಜಾಗೃತವಾಗಬೇಕು. ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಸೇರಿದಂತೆ ಇತರ ಸಂತರ ಮೇಲಾಗುತ್ತಿರುವ ಆಕ್ರಮಣವನ್ನು ಖಂಡಿಸಿ ನಾವು ಅವರ ಜೊತೆಗಿರಬೇಕು ಎಂದು ಗುಲ್ಬರ್ಗಾದ ಕರುಣೇಶ್ವರ ಸಂಸ್ಥಾನದ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಯತಿ ಸಮಾವೇಶದಲ್ಲಿ ಸಂತರಿಗೆ ಕರೆ ನೀಡಿದ್ದಾರೆ.
ಸಂತ ಸಮೂಹ ಶ್ರೀಗಳಿಗೆ ನೈತಿಕ ಬೆಂಬಲ ನೀಡುತ್ತದೆ
ಶ್ರೀ ಷ.ಬ್ರ ವಾಮದೇವ ಶ್ರೀಗಳು ಮಾತನಾಡಿ, ರಾಘವೇಶ್ವರ ಶ್ರೀಗಳು ಅವರು ತಮ್ಮ ಸಾಮಾಜಿಕ ಕಾರ್ಯಗಳಿಂದ ನಮಗೆ ಪರಿಚಿತರು, ಸಂತ ಸಮೂಹ ಶ್ರೀಗಳಿಗೆ ನೈತಿಕ ಬೆಂಬಲ ನೀಡುತ್ತದೆ ಎಂದು ಸಂತ ಸಮಾವೇಶದಲ್ಲಿ ಹೇಳಿದ್ದಾರೆ.
ವಿದ್ಯಾರಣ್ಯ ಭಾರತೀ ಸ್ವಾಮಿಗಳು
ಯತಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಹಂಪಿ ಶಂಕರಾಚಾರ್ಯ ಪೀಠದ ವಿದ್ಯಾರಣ್ಯ ಭಾರತೀ ಸ್ವಾಮಿಗಳು ಮಾತನಾಡುತ್ತಾ, ಇಂದು ಶ್ರೀ ರಾಘವೇಶ್ವರ ಶ್ರೀಗಳ ಮೇಲಾಗುತ್ತಿರುವ ಆಕ್ರಮಣ ನಾಳೆ ಬೇರೆಯ ಸಂತರ ಮೇಲೂ ಆಗಬಹುದು. ಹಾಗಾಗಿ ನಾವು ಜಾಗೃತರಾಗಿ ಇಂತಹ ಆಕ್ರಮಣಗಳನ್ನು ಖಂಡಿಸುಖಂಡಿಸುತ್ತೇವೆ ಎಂಬುದಾಗಿ ಸಂತ ಸಮೂಹದ ಪರವಾಗಿ ಹೇಳಿದ್ದಾರೆ.
ಗೋಕರ್ಣದ ಧರ್ಮರಕ್ಷಕ ಯತಿ ಸಮಾವೇಶ
300ಕ್ಕೂ ಹೆಚ್ಚು ಸಂತರು ಭಾಗವಹಿಸಿದ್ದ ಈ ಬೃಹತ್ ಸಮಾವೇಶಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಗೋಕರ್ಣದ ಸಮುದ್ರ ತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಈ ಯತಿ ಸಮಾವೇಶ ನಡೆಯಿತು.