ಕೆಪಿಎಸ್ಸಿ ಅಧ್ಯಕ್ಷರ ನೇಮಕ, ಸರ್ಕಾರಕ್ಕೆ ಮುಖಭಂಗ
ಬೆಂಗಳೂರು, ಮೇ 20 : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ನೇಮಕದ ವಿಚಾರದಲ್ಲಿ ಸರ್ಕಾರಕ್ಕೆ ಮುಖಭಂಗವಾಗಿದೆ. ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಶಿಫಾರಸು ಮಾಡಿದ್ದ ವಿ.ಆರ್.ಸುದರ್ಶನ್ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.
ರಾಜ್ಯಪಾಲ ವಜುಭಾಯಿ ವಾಲಾ ಅವರು ಕೆಪಿಎಸ್ಎಸ್ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡಿದ್ದ ವಿ.ಆರ್. ಸುದರ್ಶನ್, ಸದಸ್ಯ ಸ್ಥಾನಕ್ಕೆ ಶಿಫಾರಸುಗೊಂಡಿದ್ದ ಡಾ.ರವಿಕುಮಾರ್, ಸೈಯದ್ ಉಲ್ಫತ್ ಹುಸೇನ್ ಹಾಗೂ ಮೃತ್ಯುಂಜಯ ಅವರನ್ನು ನೇಮಕ ಮಾಡಲು ಸಾಧ್ಯವಿಲ್ಲ ಎಂದು ಕಡತವನ್ನು ಸರ್ಕಾರಕ್ಕೆ ವಾಪಸ್ ಕಳಿಸಿದ್ದಾರೆ. [ಸರ್ಕಾರ, ರಾಜಭವನದ ನಡುವೆ ಕೆಪಿಎಸ್ ಸಿ ಗುದ್ದಾಟ]
ವಿ.ಆರ್.ಸುದರ್ಶನ್ ಅವರ ಹೆಸರನ್ನು ಪರಿಗಣಿಸಬಾರದು ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ರಾಜ್ಯಪಾಲರು ಕಡತ ವಾಪಸ್ ಕಳಿಸಿರುವುದರಿಂದ ಸರ್ಕಾರಕ್ಕೆ ಮುಖಭಂಗ ಉಂಟಾಗಿದ್ದು, ಹೊಸ ಪಟ್ಟಿ ತಯಾರಿಸಬೇಕಾಗಿದೆ.
ಸರ್ಕಾರ ಕಳುಹಿಸಿದ್ದ ಪಟ್ಟಿಯಲ್ಲಿ ಪ್ರೊ. ಗೋವಿಂದಯ್ಯ, ರಘುನಂದನ್ ರಾಮಣ್ಣ, ಕಲಬುರ್ಗಿ ವಿ.ವಿ. ಪ್ರಾಧ್ಯಾಪಕಿ ನಾಗಾಬಾಯಿ ಬುಳ್ಳಾ, ಐಎಫ್ಎಸ್ ಅಧಿಕಾರಿ ಮೈಕಲ್ ಸೈಮನ್ ಬರೆಟ್ಟೊ ಅವರನ್ನು ಕೆಪಿಎಸ್ಸಿ ಸದಸ್ಯರಾಗಿ ನೇಮಕ ಮಾಡಲು ಮಾರ್ಚ್ನಲ್ಲಿ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಏನಿದು ಕೆಪಿಎಸ್ಸಿ ವಿವಾದ ಇಲ್ಲಿದೆ ಮಾಹಿತಿ.....
ಸರ್ಕಾರದ ಶಿಫಾರಸು ಏನು?
ಸರ್ಕಾರ 2014ರ ಡಿ. 24ರಂದು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ವಿ.ಆರ್.ಸುದರ್ಶನ್, ಸದಸ್ಯ ಸ್ಥಾನಕ್ಕೆ ಪ್ರೊ. ಗೋವಿಂದಯ್ಯ, ರಘುನಂದನ್ ರಾಮಣ್ಣ, ಕಲಬುರ್ಗಿ ವಿ.ವಿ. ಪ್ರಾಧ್ಯಾಪಕಿ ನಾಗಾಬಾಯಿ ಬುಳ್ಳಾ, ಮೈಕಲ್ ಸೈಮನ್ ಬರೆಟ್ಟೊ, ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯ ಡಾ.ರವಿಕುಮಾರ್, ಐಪಿಎಸ್ ಅಧಿಕಾರಿ ಸೈಯದ್ ಉಲ್ಫತ್ ಹುಸೇನ್, ಕೆಎಎಸ್ ಅಧಿಕಾರಿ ಕೆ.ಎಸ್. ಮೃತ್ಯುಂಜಯ ಅವರನ್ನು ನೇಮಕ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.
ಸದಸ್ಯರ ನೇಮಕಕ್ಕೆ ಒಪ್ಪಿಗೆ
ಒಬ್ಬರು ಅಧ್ಯಕ್ಷರು ಮತ್ತು ಏಳು ಸದಸ್ಯರ ಹೆಸರುಗಳ ಪೈಕಿ ರಾಜ್ಯಪಾಲರು ಪ್ರೊ. ಗೋವಿಂದಯ್ಯ, ರಘುನಂದನ್ ರಾಮಣ್ಣ, ಕಲಬುರ್ಗಿ ವಿ.ವಿ. ಪ್ರಾಧ್ಯಾಪಕಿ ನಾಗಾಬಾಯಿ ಬುಳ್ಳಾ, ಐಎಫ್ಎಸ್ ಅಧಿಕಾರಿ ಮೈಕಲ್ ಸೈಮನ್ ಬರೆಟ್ಟೊ ಅವರನ್ನು ಸದಸ್ಯರಾಗಿ ನೇಮಕ ಮಾಡಲು ಒಪ್ಪಿಗೆ ನೀಡಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡಿದ್ದ ವಿ.ಆರ್.ಸುದರ್ಶನ್ ಹೆಸರನ್ನು ಅವರು ತಿರಸ್ಕರಿಸಿದ್ದಾರೆ.
ಸುದರ್ಶನ್ ನೇಮಕಕ್ಕೆ ಬಿಜೆಪಿ ವಿರೋಧ ಮಾಡಿತ್ತು
ಅಧ್ಯಕ್ಷ ಹುದ್ದೆಗೆ ಶಿಫಾರಸುಗೊಂಡಿರುವ ವಿ.ಆರ್. ಸುದರ್ಶನ್ ಅವರು ಜಮೀನು ಒತ್ತುವರಿ ಮಾಡಿಕೊಂಡಿರುವುದಾಗಿ ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು, ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು ಮತ್ತು ಸುದರ್ಶನ್ ಅವರನ್ನು ನೇಮಕ ಮಾಡಬಾರದು ಎಂದು ಮನವಿ ಮಾಡಿತ್ತು. ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಸುದರ್ಶನ್ ನೇಮಕ ಮಾಡಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದರು.
ಲೋಕಾಯುಕ್ತ ಕ್ಲಿನ್ ಚಿಟ್ ಕೊಟ್ಟಿತ್ತು
ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ವಿ.ಆರ್.ಸುದರ್ಶನ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದಿಲ್ಲ ಎಂಬುದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿತ್ತು. ಟಿ.ಜೆ.ಅಬ್ರಾಹಂ ಸಲ್ಲಿಸಿದ್ದ ದೂರಿನ ತನಿಖೆ ನಡೆಸಿದ ಲೋಕಾಯುಕ್ತರು ಸುದರ್ಶನ್ ಅವರಿಗೆ ಕ್ಲೀನ್ಚಿಟ್ ನೀಡಿದ್ದರು. ಈ ವರದಿ ರಾಜಭವನಕ್ಕೂ ಸಲ್ಲಿಕೆಯಾಗಿತ್ತು. ಆದರೆ, ಸುದರ್ಶನ್ ನೇಮಕಕ್ಕೆ ವಜುಭಾಯಿ ವಾಲಾ ಒಪ್ಪಿಗೆ ನೀಡಿಲ್ಲ.
ಹೊಸ ಪಟ್ಟಿ ತರಾರಿಸುವುದು ಅನಿವಾರ್ಯ
ವಿ.ಆರ್.ಸುದರ್ಶನ್ ಸೇರಿದಂತೆ ನಾಲ್ವರ ನೇಮಕಕ್ಕೆ ರಾಜ್ಯಪಾಲರು ಒಪ್ಪಿಗೇ ನೀಡದಿರುವುದರಿಂದ ಸರ್ಕಾರ ಹೊಸಪಟ್ಟಿ ತಯಾರಿಸುವುದು ಅನಿವಾರ್ಯವಾಗಲಿದೆ. ಇದರಿಂದ ಈಗಾಗಲೇ ಎರಡು ವರ್ಷಗಳಿಂದ ಖಾಲಿ ಇರುವ ಕೆಪಿಎಸ್ಸಿ ಅಧ್ಯಕ್ಷರ ಹುದ್ದೆಯ ನೇಮಕ ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ.