ಉತ್ತರಾಖಂಡ ಮೇಘಸ್ಪೋಟದಲ್ಲಿ ಸಿಲುಕಿದ್ದ ಕನ್ನಡಿಗರು ಪಾರು
ಹುಬ್ಬಳ್ಳಿ, ಮೇ. 30, ಧಾರವಾಡ ನಗರದಿಂದ ಉತ್ತರಾಖಂಡದ ಕೇದಾರನಾಥಕ್ಕೆ ಪ್ರವಾಸ ತೆರಳಿದ್ದ 43 ಜನರು ಅಪಾಯದಿಂದ ಪಾರಾಗಿದ್ದಾರೆ. ಒಂದೇ ಒಂದು ದಿನದ ಅಂತರದಲ್ಲಿ ಭಾರೀ ಮಳೆಯಿಂದ ಬಚಾವ್ ಆಗಿದ್ದಾರೆ.
ಧಾರವಾಡ ನಗರದಿಂದ ಖಾಸಗಿ ಟ್ರಾವೆಲ್ಸ್ ಏಜೆನ್ಸಿಯಿಂದು ಸುಮಾರು 43 ಜನರು ಕೇದಾರನಾಥ ಮತ್ತು ಬದರಿನಾಥಕ್ಕೆ ಕರೆದುಕೊಂಡು ಮೇ.25 ರಂದು ತೆರಳಿತ್ತು. ಈ ಪ್ರವಾಸಿಗರು ಕೇದಾರನಾಥನ ದರ್ಶನ ಪಡೆದುಕೊಂಡು ಉತ್ತರ ಪ್ರದೇಶದ ಮಥುರಾಗೆ ಬಂದ ದಿನವೇ ಕೇದಾರನಾಥದಲ್ಲಿ ಭಾರೀ ಮಳೆಯಾಗಿದೆ. [ಉತ್ತರಾಖಂಡ ಕಾಡ್ಗಿಚ್ಚಿಗೆ ಮೂಲ ಕಾರಣ ಯಾರು?]
ನಾವು ಮಳೆ ಶುರುವಾಗುವುದಕ್ಕೆ ಕೇವಲ ಒಂದು ದಿನ ಮುನ್ನ ಬದರಿನಾಥದಿಂದ ಹೊರಟು ಬಂದೆವು. ಹಾಗಾಗಿ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳಲಿಲ್ಲ ಎಂದು ಪ್ರವಾಸಿಗ ಸಂಗಯ್ಯ ಶಾಸ್ತ್ರೀ ಹಿರೇಮಠ ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಮೇಘಸ್ಫೋಟಗೊಂಡು ಭಾರಿ ಮಳೆಯಾಗುತ್ತಿದೆ. ಈಗಾಗಲೇ ಸಾವಿರಾರು ಪ್ರವಾಸಿಗರು ಸಿಕ್ಕಿಕೊಂಡಿದ್ದಾರೆ. ಅವರಲ್ಲಿ ಕರ್ನಾಟಕದ 150 ಕ್ಕೂಹೆಚ್ಚು ಪ್ರವಾಸಿಗರಿದ್ದಾರೆ. ಧಾರವಾಡದ ಸರಸ್ವತಪುರದ ರಾಜಶೇಖರ ಶೆಟ್ಟರ್ ಕುಟುಂಬ, ಎಲ್.ಕೆ.ಗಾಮನಗಟ್ಟಿ ಕುಟುಂಬ ಮತ್ತು ಮುರಗೋಡ ಕುಟುಂಬ ಧಾರವಾಢಕ್ಕೆ ಸುರಕ್ಷಿತವಾಗಿ ಮರಳುತ್ತಿದೆ.[ಹುಬ್ಬಳ್ಳಿ ಪೊಲೀಸರ ಅಪಾಯಕಾರಿ ಹೆಲ್ಮೆಟ್ ಕಾರ್ಯಾಚರಣೆ!]
ಕೇದಾರನಾಥ ಯಾತ್ರೆಗೆ ತೆರಳಿದ್ದ ತುಮಕೂರು ಜಿಲ್ಲೆ ಕೊರಟಗೆರೆಯ 9 ಮಂದಿಯ ತಂಡವೂ ಸುರಕ್ಷಿತ ಸ್ಥಳದಲ್ಲಿದೆ. ಈ ತಂಡದಲ್ಲಿ ಕೊರಟಗೆರೆಯ ಹನುಮಂತಪ್ಪ ಸ್ವಾಮೀಜಿ ಮತ್ತು ವೀರಭದ್ರ ಶಿವಾಚಾರ್ಯಸ್ವಾಮೀಜಿ ಕೂಡ ಇದ್ದಾರೆ.
ಬೆಂಗಳೂರಿನ ನಾಗರಬಾವಿಯ 14 ಜನರ ತಂಡ ಹಾಗೂ ಧಾರವಾಡದ 12 ಜನರ ತಂಡ ಕೇದಾರನಾಥ ಯಾತ್ರೆಗೆ ತೆರಳಿತ್ತು ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿದ್ದರಾಮಯ್ಯ ಸೂಚನೆ ಕನ್ನಡಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಎಲ್ಲಾ ರೀತಿಯ ಪ್ರಯತ್ನ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
'ರಾಜ್ಯ ಸರ್ಕಾರದ ದೆಹಲಿ ಸ್ಥಾನಿಕ ಆಯುಕ್ತರು ಉತ್ತರಾಖಂಡ ಟೆಹ್ರಿ ಜಿಲ್ಲಾಡಳಿತದ ಸಂಪರ್ಕದಲ್ಲಿದ್ದಾರೆ. ಅಲ್ಲದೆ ವಿಪತ್ತು ನಿರ್ವಹಣಾ ಇಲಾಖೆಯೂ ಸಂತ್ರಸ್ತರನ್ನು ಕರೆತರಲು ಸನ್ನದ್ಧವಾಗಿದೆ. ಕೇಂದ್ರ ಮತ್ತು ದೆಹಲಿ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಸಹಾಯವಾಣಿ: ಸಂತ್ರಸತ್ರ ಬಗ್ಗೆ ಮಾಹಿತಿ ಪಡೆಯಲು ಸರ್ಕಾರ ಸಹಾಯವಾಣಿ ಆರಂಭ ಮಾಡಿದೆ. ನಿಯಂತ್ರಣ ಕೊಠಡಿ ಸಂಖ್ಯೆ 1070 ಅಥವಾ 080 22340676 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.