ಇನ್ಮುಂದೆ ’ಘನವೆತ್ತ’ ರಾಜ್ಯಪಾಲರು ಅನ್ನೋ ಹಾಗಿಲ್ಲ
ಬೆಂಗಳೂರು, ಡಿ 29: ಬ್ರಿಟಿಷರ ಕಾಲದಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯಕ್ಕೆ ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ತಿಲಾಂಜಲಿ ಹಾಡಿದ್ದಾರೆ.
ರಾಜ್ಯಪಾಲರ ಹೆಸರನ್ನು ಹೇಳುವ ಮುನ್ನ 'ಘನವೆತ್ತ ಅಥವಾ ಹಿಸ್ ಎಕ್ಸಲೆನ್ಸಿ'ಎಂದು ಗೌರವ ಪೂರ್ವಕವಾಗಿ ಸಂಭೋದಿಸಲಾಗುತ್ತಿತ್ತು. ಇನ್ನು ಮುಂದೆ 'ಸನ್ಮಾನ್ಯ' ಎನ್ನುವ ಪದ ಬಳಸಿದರೆ ಸಾಕು. (ಕರ್ನಾಟಕ ವರ್ಷದ ವ್ಯಕ್ತಿ 2014: ನಿಮ್ಮ ಆಯ್ಕೆ)
ಸ್ವಾತಂತ್ರ್ಯಪೂರ್ವ ದಿಂದಲೂ ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಗಳಿಗೆ ಈ ಪದವನ್ನು ಬಳಸಲಾಗುತ್ತಿತ್ತು. ಈ ಸಂಪ್ರದಾಯಕ್ಕೆ ತೆರೆ ಎಳೆಯಲು ರಾಜ್ಯಪಾಲ ವಾಲಾ ಬಯಸಿದ್ದಾರೆ. ಅಂತೆಯೇ ಸರಕಾರಕ್ಕೆ ಪತ್ರ ಮುಖೇನ ಕೆಲವು ದಿನಗಳ ಹಿಂದೆ ಸೂಚಿಸಿದ್ದರು ಕೂಡಾ.
ರಾಜ್ಯಪಾಲರ ಸೂಚನೆಯ ಮೇರೆಗೆ ಸರಕಾರ, ಇನ್ನು ಮುಂದೆ ಯಾವುದೇ ಸರಕಾರೀ ಕಾರ್ಯಕ್ರಮದಲ್ಲಿ 'ಸನ್ಮಾನ್ಯ' ಎನ್ನುವ ಪದವನ್ನು ಮಾತ್ರ ಬಳಸಬೇಕೆಂದು ಆದೇಶ ಹೊರಡಿಸಿದೆ.
ರಾಜ್ಯಪಾಲರು ಕಳುಹಿಸಿರುವ ಪತ್ರ ಸೂಚನೆಯ ಪ್ರಕಾರ ಡಿಪಿಎಆರ್ ಇಲಾಖೆ (Department of Personnel Administrative Reforms) ಎಲ್ಲಾ ಸರಕಾರೀ ಅಧೀನ ಖಾತೆಗಳಿಗೆ, ಜಿಲ್ಲಾಡಳಿತಕ್ಕೆ ಈ ಸಂಬಂಧ ಸೂಚನೆ ನೀಡಿ ಸರ್ಕ್ಯೂಲರ್ ಹೊರಡಿಸಿದೆ.
ಘನವೆತ್ತ ಎನ್ನುವ ಶಿಷ್ಟಾಚಾರದ ಪದವನ್ನು ಇನ್ನು ಮುಂದೆ ಬಳಸದಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಕ್ಟೋಬರ್ 2012ರಲ್ಲೇ ಕೇಂದ್ರ ಸರಕಾರಕ್ಕೆ ಸೂಚಿಸಿದ್ದರು.
ಬ್ರಿಟಿಷರು ಬಿಟ್ಟು ಹೋದ ಬಳುವಳಿಯಾದ 'ಘನವೆತ್ತ' ಎನ್ನುವ ಪದವನ್ನು ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ಬಳಸುವ ಸಂಪ್ರದಾಯ ಮುಂದುವರಿಯುತ್ತಲೇ ಬಂದಿತ್ತು.
ದೇಶದ ಹಲವಾರು ರಾಜ್ಯಗಳು ಈಗಾಗಲೇ ಈ ಶಿಷ್ಟಾಚಾರದ ಪದ ಬಳಸುವುದನ್ನು ನಿಲ್ಲಿಸಿವೆ.