ರಾಜ್ಯ ಭೇಟಿಗೆ 1ದಿನದ ಮುನ್ನ ಬಿಜೆಪಿ ನಾಯಕರಿಗೆ ಅಮಿತ್ ಶಾ ರವಾನಿಸಿದ ಸೂಚನೆ
ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟಿನ ವಿಚಾರದಲ್ಲಿ ವರಿಷ್ಠರ ಅನುಮತಿಯಿಲ್ಲದೇ ಯಾರಿಗೂ ಆಶ್ವಾಸನೆ ನೀಡಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಅಮಿತ್ ಶಾ, ರಾಜ್ಯ ಬಿಜೆಪಿ ಮುಖಂಡರಿಗೆ ರವಾನಿಸಿದ್ದಾರೆ.
ನವದೆಹಲಿ, ಆ 11: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮೂರು ದಿನಗಳ ಕರ್ನಾಟಕ ಪ್ರವಾಸ ಶನಿವಾರ (ಆ 12) ದಿಂದ ಆರಂಭವಾಗಲಿದೆ. ಚುನಾವಣಾ ವರ್ಷದಲ್ಲಿ ಅಮಿತ್ ಶಾ ರಾಜ್ಯ ಭೇಟಿ ಮಹತ್ವ ಪಡೆದಿದ್ದು, ರಾಜ್ಯ ಬಿಜೆಪಿ ನಾಯಕರು ಅಲರ್ಟ್ ಆಗಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟಿನ ವಿಚಾರದಲ್ಲಿ ವರಿಷ್ಠರ ಅನುಮತಿಯಿಲ್ಲದೇ ಯಾರಿಗೂ ಆಶ್ವಾಸನೆ ನೀಡಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಅಮಿತ್ ಶಾ, ರಾಜ್ಯ ಬಿಜೆಪಿ ಮುಖಂಡರಿಗೆ ರವಾನಿಸಿದ್ದಾರೆ.
ಕರ್ನಾಟಕ ಬಿಜೆಪಿಗೆ ಡೈನಾಮಿಕ್ ಲೀಡರ್ ತುರ್ತಾಗಿ ಬೇಕಾಗಿದ್ದಾರೆ
ಇತ್ತೀಚೆಗೆ ಪಕ್ಷಕ್ಕೆ ಸೇರಿದ ಮುಖಂಡರ ಅನುಭವದ ಲಾಭವನ್ನು ಪಡೆದುಕೊಳ್ಳಲು ಅಮಿತ್ ಶಾ ನಿರ್ಧರಿಸಿದ್ದು, ಹಾಗಾಗಿ ಅವರೊಂದಿಗೆ ಆಗಸ್ಟ್ ಹದಿನಾಲ್ಕರಂದು ಪ್ರತ್ಯೇಕ ಸಭೆ ಆಯೋಜಿಸಲಾಗಿದ್ದು, ಇದರಲ್ಲಿ ಸುಮಾರು 150 ಜನ ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಪಕ್ಷಕ್ಕೆ ಸೇರಿದ ಮುಖಂಡರ ಪೈಕಿ ಮಾಜಿ ಸಿಎಂ ಎಸ್ ಎಂ ಕೃಷ್ಣ, ಉಡುಪಿ - ಚಿಕ್ಕಮಗಳೂರು ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆ, ಕುಮಾರ್ ಬಂಗಾರಪ್ಪ, ಕೆ ಪಿ ನಂಜುಂಡಿ ಸೇರಿದಂತೆ, ಸಭೆಯಲ್ಲಿ ಭಾಗವಹಿಸುವ ಎಲ್ಲಾ ಪ್ರಮುಖರ ಪಟ್ಟಿಯನ್ನು ಅಮಿತ್ ಶಾ ಈಗಾಗಲೇ ತರಿಸಿಕೊಂಡಿದ್ದಾರೆ.
ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ
ಆಯಾಯ ಕ್ಷೇತ್ರದಲ್ಲಿ ನಡೆಸಲಾಗುವ ಸಮೀಕ್ಷೆ ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ, ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಅಮಿತ್ ಶಾ ಹೇಳುವ ಮೂಲಕ, ಟಿಕೆಟ್ ಹಂಚಿಕೆ ವರಿಷ್ಠರ ಅಣತಿಯಂತೇ ಸಾಗಲಿದೆ ಎನ್ನುವ ಸೂಚನೆಯನ್ನು ರಾಜ್ಯ ಮುಖಂಡರಿಗೆ ಶಾ ನೀಡಿದ್ದಾರೆ. ಮುಂದೆ ಓದಿ..
ರಣತಂತ್ರ ರೂಪಿಸಬೇಕು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಿ
ಆಯಾಯ ಕ್ಷೇತ್ರದಲ್ಲಿ ಯಾವ ರೀತಿ ರಣತಂತ್ರ ರೂಪಿಸಬೇಕು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಿ, ಪಕ್ಷದ ಟಿಕೆಟ್ ಸಮೀಕ್ಷೆಯನ್ನು ಆಧರಿಸಿ ನೀಡಲಾಗುವುದು. ಮುಂಬರುವ ಚುನಾವಣೆಯಲ್ಲಿ ಯಾವ ಪ್ರಮುಖ ವಿಷಯವನ್ನು ಮುಂದಿಟ್ಟುಕೊಂಡು ಎದುರಿಸಬೇಕು ಎನ್ನುವುದರ ಬಗ್ಗೆ ರಾಜ್ಯ ಭೇಟಿಯ ವೇಳೆ ಚರ್ಚಿಸೋಣ ಎಂದು ಅಮಿತ್ ಶಾ ರಾಜ್ಯ ಮುಖಂಡರಿಗೆ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.
ಯಡಿಯೂರಪ್ಪ, ಹಿರಿಯ ಮುಖಂಡ ಈಶ್ವರಪ್ಪ, ಬಿ ಎಲ್ ಸಂತೋಷ್
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಹಿರಿಯ ಮುಖಂಡ ಈಶ್ವರಪ್ಪ ಮತ್ತು ಬಿ ಎಲ್ ಸಂತೋಷ್ ಈಗಾಗಲೇ ಹಲವು ಮುಖಂಡರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎನ್ನುವ ಮಾಹಿತಿ ವರಿಷ್ಠರಿಗೆ ಲಭ್ಯವಾಗಿರುವ ಹಿನ್ನಲೆಯಲ್ಲಿ, ಅಮಿತ್ ಶಾ ಈ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಪಕ್ಷದಲ್ಲಿ ಯಾವುದೇ ಭಿನ್ನಮತವನ್ನು ಸಹಿಸಿಕೊಳ್ಳುವುದಿಲ್ಲ
ಸಿದ್ದರಾಮಯ್ಯ ಸರಕಾರದ ವೈಫಲ್ಯದ ಬಗ್ಗೆ ರಾಜ್ಯ ಭೇಟಿಯ ವೇಳೆ ಚರ್ಚಿಸೋಣ, ಚುನಾವಣಾ ಈ ವರ್ಷದಲ್ಲಿ ಪಕ್ಷದಲ್ಲಿ ಯಾವುದೇ ಭಿನ್ನಮತವನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ರಾಜ್ಯದ ಇಬ್ಬರು ಹಿರಿಯ ಮುಖಂಡರಿಗೆ ಅಮಿತ್ ಶಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಆಪ್ತರಿಗೆ, ಕುಟುಂಬದವರಿಗೆ ಟಿಕೆಟ್ ನೀಡುತ್ತೇವೆ ಎಂದು ಆಶ್ವಾಸನೆ ನೀಡಬೇಡಿ
ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಬೇಕು, ತಮ್ಮ ಆಪ್ತರಿಗೆ, ಕುಟುಂಬದವರಿಗೆ ಟಿಕೆಟ್ ನೀಡುತ್ತೇವೆ ಎಂದು ಆಶ್ವಾಸನೆ ನೀಡಬೇಡಿ. ಸಮೀಕ್ಷೆ ಮತ್ತು ಕಾರ್ಯಕರ್ತರ ಅಭಿಪ್ರಾಯ ಅವರ ಪರವಾಗಿದ್ದರೆ, ಟಿಕೆಟ್ ನೀಡೋಣ, ಇಲ್ಲದಿದ್ದರೆ ಯಾವ ಕಾರಣಕ್ಕೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ ಎನ್ನುವ ಮಾಹಿತಿಯಿದೆ.
ಪಕ್ಷದ ಟಿಕೆಟಿಗಾಗಿ ಬಿಜೆಪಿ ಸೇರಿರುವವರ ಬಗ್ಗೆ ಎಚ್ಚರದಿಂದ ಇರಬೇಕು
ಟಿಕೆಟ್ ಆಶ್ವಾಸನೆ ದೊರತ ಆಕಾಂಕ್ಷಿಗಳು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ ಎನ್ನುವ ಮಾಹಿತಿಯಿದೆ. ಹೊಸದಾಗಿ ಸೇರ್ಪಡೆಗೊಂಡವರೂ ಸೇರಿ, ಪಕ್ಷದ ಟಿಕೆಟಿಗಾಗಿ ಬಿಜೆಪಿ ಸೇರಿರುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅಮಿತ್ ಶಾ, ರಾಜ್ಯ ಬಿಜೆಪಿ ಘಟಕಕ್ಕೆ ಸೂಚಿಸಿದ್ದಾರೆ.