ಮಡೆಸ್ನಾನ ಪದ್ಧತಿಗೆ ಅಂತಿಮ ಮೊಳೆ ಹೊಡೆದ ಕೇಂದ್ರ ಸರಕಾರ
ನವದೆಹಲಿ, ಸೆ 14: ಪರವಿರೋಧಗಳ ನಡುವೆ ಬಹುಚರ್ಚಿತ ತುಳುನಾಡಿನ 'ಮಡೆಸ್ನಾನ' ಪದ್ಧತಿಗೆ ಕೇಂದ್ರ ಸರಕಾರ ಅಂತಿಮ ಮೊಳೆ ಹೊಡೆದಿದೆ.
ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಉರುಳುವ ಮಡೆಸ್ನಾನವನ್ನು ಅವರವರ ನಂಬಿಕೆಗೆ ಸಂಬಂಧಪಟ್ಟಿದ್ದು ಎನ್ನುವ ವಾದಕ್ಕೆ ಸೊಪ್ಪು ಹಾಕದ ಕೇಂದ್ರ ಸರಕಾರ ಈ ಪದ್ಧತಿಯನ್ನು ನಿಷೇಧಿಸಬೇಕೆಂದು ಅಧಿಕೃತವಾಗಿ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದೆ. (ಎಂಜಲೆಲೆಯ ಮೇಲೆ ಉರುಳಲು ಸಿದ್ಧ)
ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ, ಉಡುಪಿ ಕೃಷ್ಣಮಠದ ಆವರಣದಲ್ಲಿರುವ ದೇವಸ್ಥಾನ ಮತ್ತು ಉಡುಪಿ ಜಿಲ್ಲೆಯ ಮುಚ್ಚಿಲಕೋಡಿನಲ್ಲಿರುವ ಸುಬ್ರಮಣ್ಯ ದೇವಾಲಯದಲ್ಲಿ ಮಡೆಸ್ನಾನ ಮತ್ತು ಎಡೆಸ್ನಾನ ಪದ್ಧತಿ ಜಾರಿಯಲ್ಲಿದೆ.
ಚರ್ಮರೋಗ ನಿವಾರಣೆಗಾಗಿ ಎಲೆಯ ಮೇಲೆ ಉರುಳುವ ಈ ಪದ್ಧತಿ ಅನಾದಿ ಕಾಲದಿಂದಲೂ ಜಾರಿಯಲ್ಲಿದೆ. ಈ ಪದ್ಧತಿ ಅಮಾನವೀಯ ಮತ್ತು ಮೌಢ್ಯದಿಂದ ಕೂಡಿದ್ದು ಎಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ.
ಎಂಜಲೆಲೆಯ ಮೇಲೆ ಉರುಳುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರ, ಈ ಪದ್ಧತಿ ಪಾಲಿಸಲು ಬಲವಂತ ಮಾಡುವುದಿಲ್ಲ ಎನ್ನುವ ವಾದವನ್ನು ತಳ್ಳಿಹಾಕಿರುವ ಕೇಂದ್ರ ಸರಕಾರ ಸಂವಿಧಾನದ 25ನೇ ಪರಿಚ್ಛೇದದ ಹೆಸರಿನಲ್ಲಿ ಇಂಥ ಪದ್ಧತಿಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲವೆಂದು ತನ್ನ ಸ್ಪಷ್ಟ ನಿಲುವನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದೆ.