ಮೂವರು ಕಾರ್ಮಿಕರ ಜೀವ ತೆಗೆದ ಮಂಡ್ಯದ ನೀರಿನ ಟ್ಯಾಂಕ್
ಮಂಡ್ಯ,ಮಾರ್ಚ್,03: ಫ್ರೆಂಡ್ಲಿ ಲಾಜಿಸ್ಟಿಕ್ ಡೆವಲಪರ್ಸ್ ಎಂಬ ಸಂಸ್ಥೆಯು ನಿರ್ಮಿಸುತ್ತಿದ್ದ ನೀರಿನ ಟ್ಯಾಂಕ್ ಕುಸಿದು ಬಿದ್ದ ಪರಿಣಾಮ ಅವಶೇಷಗಳಡಿ ಸಿಲುಕಿ ಮೂವರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಶ್ರೀರಂಗಪಟ್ಟಣದ ಕಾವೇರಿ ನಗರದ ಜ್ಯೋತಿ ನಿವಾಸ್ ಶಾಲೆಯ ಹಿಂಭಾಗದಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಸಾತಿ ಗ್ರಾಮದ ನಿವಾಸಿಗಳಾದ ಮಂಜು, ಮಂಜುನಾಯ್ಕ, ಮಹದೇವ ಸಾವನ್ನಪ್ಪಿದ ದುರ್ದೈವಿಗಳು. ಪ್ರಭಾಕರ್, ಭೈರನಾಯಕ, ಸಿದ್ದರಾಜು, ಸಣ್ಣಸ್ವಾಮಿ ಗಂಭೀರ ಗಾಯಗೊಂಡಿದ್ದು ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿದೆ.[ಚಿತ್ರಗಳು : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಕಟ್ಟಡ ಕುಸಿತ]
ಫ್ರೆಂಡ್ಲಿ ಲಾಜಿಸ್ಟಿಕ್ ಡೆವಲಪರ್ಸ್ ನೂತನ ನಗರವನ್ನು ನಿರ್ಮಾಣ ಮಾಡುತ್ತಿದೆ. ಹಾಗಾಗಿ ಇಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಸುಮಾರು 40 ಅಡಿ ಎತ್ತರದ ನೀರಿನ ಟ್ಯಾಂಕನ್ನು ನಿರ್ಮಿಸುತ್ತಿತ್ತು. ಇದರ ನಿರ್ಮಾಣಕ್ಕಾಗಿ ಕೆ.ಆರ್.ನಗರ ಸಾತಿ ಗ್ರಾಮದಿಂದ ಏಳು ಜನ ಕಾರ್ಮಿಕರು ಬಂದಿದ್ದರು.
ರಾತ್ರಿ ವೇಳೆಯಲ್ಲೂ ವಾಟರ್ ಟ್ಯಾಂಕ್ ನಿರ್ಮಾಣದ ಕಾರ್ಯಕೈಗೊಂಡ ಇವರು ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಟ್ಯಾಂಕ್ ಕುಸಿದು ಬಿದ್ದಿದೆ. ಈ ಸಂದರ್ಭ ಕಾರ್ಮಿಕರ ಮೇಲೆ ಕಟ್ಟಡದ ಅವಶೇಷಗಳು ಬಿದ್ದು ಮೂವರು ಮೃತಪಟ್ಟರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.[ಕೊಪ್ಪಳ ಕೋಕಾ ಕೋಲಾದ 30 ಕಾರ್ಮಿಕರು ಅಸ್ವಸ್ಥ]
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಅವಶೇಷಗಳಡಿ ಸಿಲುಕಿ ಮೃತಪಟ್ಟ ಹಾಗೂ ಗಾಯಗೊಂಡ ಮಂದಿಯನ್ನು ಹೊರತೆಗೆದಿದ್ದಾರೆ. ನಂತರ ಬಂದ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್, ಪಾಂಡವಪುರ ಉಪವಿಭಾಗಾಧಿಕಾರಿ ಹೆಚ್.ಎಲ್.ನಾಗರಾಜ್ ಭೇಟಿ ನೀಡಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವೈಜ್ಞಾನಿಕವಾಗಿ ನೀರಿನ ಟ್ಯಾಂಕ್ ನ್ನು ನಿರ್ಮಿಸುತ್ತಿದದ್ದೇ ಈ ದುರ್ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.