ನಾ ಉಡುಪಿ ಬಿಟ್ಟು ಎಲ್ಲಿಗೂ ಹೋಗೊಲ್ಲ: ಎಸ್ ಪಿ ಅಣ್ಣಾಮಲೈ
ಉಡುಪಿ,ಫೆಬ್ರವರಿ,27: ಬೆಂಗಳೂರಿಗೆ ಡಿಸಿಪಿ (Deputy Commissioner of Police) ಯಾಗಿ ವರ್ಗಾವಣೆಯಾಗಿರುವ ಕುರಿತು ನನಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ನಾನು ಉಡುಪಿಯಲ್ಲೇ ಇರುತ್ತೇನೆ. ಜನರು ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದು ಉಡುಪಿ ಜಿಲ್ಲೆ ಎಸ್ ಪಿ ಅಣ್ಣಾಮಲೈ ಹೇಳಿದ್ದಾರೆ.
ಫೆಬ್ರವರಿ 20ರಂದು ನಡೆದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯ ಬಳಿಕ ಉಡುಪಿಯ ಎಸ್ಪಿ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡುವ ವಿಚಾರ ಪುನಃ ಗರಿಗೆದರಿದ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರು ಸ್ಪಷ್ಟನೆ ನೀಡುವುದರ ಮೂಲಕ ಉಡುಪಿ ಜನತೆಯಲ್ಲಿ ಎದ್ದಿರುವ ಗೊಂದಲ ನಿವಾರಿಸಿದ್ದಾರೆ.[ಉಡುಪಿಯ 'ಸಿಂಗಂ' ಎಸ್ಪಿ ಅಣ್ಣಾಮಲೈ]
ಕಳೆದ ಜನವರಿ ಬಳಿಕ ಎಸ್ಪಿ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ಡಿಸಿಪಿಯಾಗಿ ಪದೋನ್ನತಿಗೊಳಿಸಲಾಗಿದೆ ಎಂಬ ಗಾಳಿ ಸುದ್ದಿ ವಾಟ್ಸಪ್ ಹಾಗೂ ಫೇಸ್ ಬುಕ್ ನಂತಹ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದ ವದಂತಿಯಿಂದಾಗಿ ಉಡುಪಿ ಜನತೆ ಇವರನ್ನು ವರ್ಗಾವಣೆ ಮಾಡುವ ಆಲೋಚನೆಯನ್ನು ಕೈ ಬಿಡಬೇಕೆಂದು ಪ್ರತಿಭಟನೆ ಕೈಗೊಂಡಿದ್ದರು.[ಕೊಲ್ಲೂರು: ಪ್ರಾಮಾಣಿಕತೆ ಮೆರೆದ ಪತ್ನಿಯ ಗಂಡ ಪೊಲೀಸರ ಅತಿಥಿ]
ಏನೆಂದು ಸುದ್ದಿ ಹಬ್ಬಿತ್ತು?
ಮೂಲಗಳ ಪ್ರಕಾರ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು, ಉಡುಪಿಯ ಎಸ್ಪಿ ಅಣ್ಣಾಮಲೈ ಅವರಿಗೆ ಬೆಂಗಳೂರಿನ ಡಿಸಿಪಿ ಹುದ್ದೆ ನೀಡಿ ಬೆಂಗಳೂರಿಗೆ ವರ್ಗಾಯಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂಬ ಸುದ್ದಿ ಉಡುಪಿ ಜಿಲ್ಲೆಯಾದ್ಯಂತ ಹರಡಿ, ಜನತೆಯ ನಿದ್ದೆಗೆಡುವಂತೆ ಮಾಡಿತ್ತು. ಅಷ್ಟರಲ್ಲೇ ಜಿಪಂ ಹಾಗೂ ತಾಪಂ ಚುನಾವಣೆ ಘೋಷಣೆಯಾದ ಕಾರಣ ಎಸ್ಪಿ ವರ್ಗಾವಣೆ ತಡೆ ನೀಡಲಾಗಿದೆ ಎಂಬ ವಿಚಾರ ಜನರಲ್ಲಿ ನೆಮ್ಮದಿಯ ಉಸಿರು ಬಿಡುವಂತೆ ಮಾಡಿತ್ತು.[ಕಾರ್ಕಳದ ಜೈನ ಬಸದಿಯಲ್ಲಿ ನಾನಾ ವಿಗ್ರಹಗಳು ಕಳವು]
ಉಡುಪಿ ಬಿಟ್ಟು ಎಲ್ಲಿಗೂ ಹೋಗಲ್ಲ : ಅಣ್ಣಾಮಲೈ
ಉಡುಪಿ ಜಿಲ್ಲೆಯಿಂದ ಬೆಂಗಳೂರಿಗೆ ವರ್ಗಾವಣೆಯಾಗಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಇದುವರೆಗೆ ನನಗೆ ಅಂತಹ ಯಾವುದೇ ಆದೇಶವೂ ಬಂದಿಲ್ಲ. ಡಿಸಿಪಿಯಾಗಿ ಬೆಂಗಳೂರಿಗೆ ನೇಮಕವಾಗಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿ ಸುಳ್ಳು. ನಾನು ಉಡುಪಿಯಲ್ಲೇ ಉಳಿಯುತ್ತೇನೆ ಎಂದು ಎಸ್ಪಿ ಅಣ್ಣಾಮಲೈ ಸ್ಪಷ್ಟ ಪಡಿಸಿದ್ದಾರೆ.