ಎತ್ತಿನಹೊಳೆ ಪರಿಹಾರಕ್ಕೆ ಮುಂದಾದ ಪೇಜಾವರ ಶ್ರೀ
ಉಡುಪಿ, ಜನವರಿ,27: ಎತ್ತಿನ ಹೊಳೆ ಯೋಜನೆಯ ಸಾಧಕ ಬಾದಕಗಳ ಬಗ್ಗೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆ ಭಾಗದ ತಜ್ಞರು ಹಾಗೂ ಸಾರ್ವಜನಿಕರನ್ನೊಳಗೊಂಡ ಸಭೆ ನಡೆಸಲು ಚಿಂತನೆ ನಡೆಸಿರುವುದಾಗಿ ಪರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಪೇಜಾವರ ಮಠದ ಅಧೀನ ಸಂಸ್ಥೆ ಬೆಂಗಳೂರಿನ ಪೂರ್ಣಪ್ರಮತಿ ಮಹೋತ್ಸವ ಪ್ರಯುಕ್ತ ಸೋಮವಾರ ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ನಡೆದ ಸಮಗ್ರ ಕಲಿಕೆ ಮತ್ತು ಬದುಕುವಿಕೆಯ ಮೂಲಕ ಪರಂಪರೆಯ ಬೀಜರಾಕ್ಷೆ ವಿಚಾರ ಸಂಕಿರಣದಲ್ಲಿ ಈ ವಿಷಯ ತಿಳಿಸಿದರು.[ಬುದ್ಧಿ ಜೀವಿಗಳಿಗೆ ಪೇಜಾವರ ಸ್ವಾಮಿ ಬಹಿರಂಗ ಸವಾಲ್!]
ಎತ್ತಿನಹೊಳೆ ಯೋಜನೆ ಪರಿಣಾಮದ ಕುರಿತು ಬಯಲುಸೀಮೆ ಜನ ಒಂದು ರೀತಿ ಮಾತನಾಡಿದರೆ , ಕರಾವಳಿ ಜನ ಬೇರೊಂದು ರೀತಿ ಮಾತನಾಡುತ್ತಿದ್ದಾರೆ. ಇದು ಪ್ರಾದೇಶಿಕ ಆಗ್ರಹವಾಗಿದೆ ನಿಷ್ಪಕ್ಷವಾಗಿ ತಜ್ಞರಿಂದಲೇ ಚರ್ಚೆ ಏರ್ಪಡಿಸಿ ಗೊಂದಲ ನಿವಾರಿಸಬೇಕು.
ಕಳಸಾ ಬಂಡೂರಿ ಯೋಜನೆಯಲ್ಲೂ ಇದೇ ತೀರಿ ಪ್ರಾದೇಶಿಕ ಆಗ್ರಹಗಳೇ ಬಿಂಬಿತವಾಗುತ್ತಿವೆ. ಇದರ ವಿಚಾರದಲ್ಲಿ ಕರ್ನಾಟಕ, ಗೋವಾ ರಾಜ್ಯಗಳು ಪರಸ್ಪರ ವಾದದಲ್ಲಿ ತೊಡಗಿವೆ. ನೀರಿನ ಬಗ್ಗೆ ನಿಷ್ಪಕ್ಷಪಾತ ಚರ್ಚೆಗಳು ನಡೆಯಬೇಕು. ದೇಶದ ಇಂತಹ ಗಂಭೀರ ಸಮಸ್ಯೆಗಳ ಕುರಿತು ವಿಚಾರ ವಿನಿಮಯವಾಗಬೇಕು ಎಂದು ಪೇಜಾವರ ಶ್ರೀ ತಮ್ಮ ಅಭಿಮತ ವ್ಯಕ್ತಪಡಿಸಿದರು.[ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]
ಶ್ರೀಸಾನಂದ ಸ್ವಾಮೀಜಿ (ಪೂರ್ವಾಶ್ರಮದಲ್ಲಿ ಪ್ರೊ. ಜಿ. ಡಿ. ಅಗರ್ವಾಲ್), ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಕುಮುದ್ವತಿ ಪುನಶ್ಚೇತನ ಕಾರ್ಯಕ್ರಮ ನಿರ್ದೇಶಕ ಲಿಂಗರಾಜು, ಬೆಂಗಳೂರು ಐಐಎಸ್ ವಿಜ್ಞಾನಿ ಹರೀಶ್ ಭಟ್, ಭಾರತೀಯ ಭೂ ವಿಜ್ಞಾನ ಸಂಸ್ಥೆ ಕಾರ್ಯದರ್ಶಿ ಆರ್. ಎಚ್. ಸಾಹುಕಾರ್, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿವಿ ನಿವೃತ್ತ ಉಪಕುಲಪತಿ ಪ್ರೊ. ಡಿ. ಪ್ರಹ್ಲಾದ್ ಆಚಾರ್ಯ ವಿವಿಧ ವಿಷಯಗಳನ್ನು ಮಂಡಿಸಿದರು.