ಉಡುಪಿ ನಗರಸಭಾ ಸದಸ್ಯ ಯಶ್ ಪಾಲ್ ಸುವರ್ಣ ಅಮಾನತು
ಉಡುಪಿ,ಜನವರಿ,08: ಹಣಕಾಸು ಅವ್ಯವಹಾರ ಮತ್ತು ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಸ್ಥಾನದಿಂದ ಉಡುಪಿ ನಗರಸಭಾ ಸದಸ್ಯ ಯಶ್ ಪಾಲ್ ಸುವರ್ಣ ಅವರನ್ನು ಅಮಾನತು ಮಾಡಿ ಫೆಡರೇಶನ್ಗೆ ಸರ್ಕಾರದ ಆಡಳಿತಾಧಿಕಾರಿಯಾಗಿ ಜಿಲ್ಲಾ ಸಹಕಾರಿ ರಿಜಿಸ್ಟ್ರಾರ್ ಪ್ರವೀಣ್ ನಾಯಕ್ ನೇಮಕಗೊಂಡಿದ್ದಾರೆ.
ಯಶ್ ಪಾಲ್ ಸುವರ್ಣ ಫೆಡರೇಶನ್ನ ಹಣ ದುರುಪಯೋಗ ಮತ್ತು ಇತರ ಹಗರಣಗಳಲ್ಲಿ ಭಾಗಿಯಾಗಿದ್ದಾರೆಂದು ಜೆ.ಆರ್.ಸಿ.ಎಸ್ ನ್ಯಾಯ ಮಂಡಳಿ ಸಹಕಾರಿ ಕಾಯ್ದೆ ಸೆಕ್ಷನ್ 29ಸಿ ಮೇರೆಗೆ ಅಮಾನತು ಆದೇಶ ಹೊರಡಿಸಿದೆ. ಇವರ ಜೊತೆಗೆ 90 ನಿರ್ದೇಶಕರನ್ನು ಸಹ ಅಮಾನತು ಮಾಡಲಾಗಿದೆ.[ಸಕಾಲ ಯೋಜನೆಯಲ್ಲಿ ಉಡುಪಿ ರಾಜ್ಯಕ್ಕೆ ಪ್ರಥಮ]
ಕಳೆದ ಹಲವು ವರ್ಷಗಳಿಂದ ಫೆಡರೇಶನ್ನ ಅಧ್ಯಕ್ಷರಾಗಿರುವ ಯಶ್ ಪಾಲ್ ಸುವರ್ಣ ವಿರುದ್ದ ಭ್ರಷ್ಟಾಚಾರದ ಆರೋಪಗಳು ಎರಡು ವರ್ಷಗಳ ಹಿಂದೆ ಕೇಳಿ ಬಂದಿತ್ತು. ಅಮಾನತುಗೊಂಡ ಯಶ್ ಪಾಲ್ ಸುವರ್ಣ ಮುಂದಿನ ಆರು ವರ್ಷಗಳ ಕಾಲ ಸಹಕಾರಿ ಸಂಸ್ಥೆಗಳ ಚುನಾವಣೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಮೂಲಗಳು ತಿಳಿಸಿವೆ.[ಎಟಿಎಂ ಮಾಹಿತಿ ಕೊಟ್ಟು 28 ಸಾವಿರ ಕಳೆದುಕೊಂಡ್ರು!]
ಕೊಡಗು ಜಿಪಂ ಅಧ್ಯಕ್ಷೆಯಿಂದ ಕೊಲೆ ಬೆದರಿಕೆ
ಮಡಿಕೇರಿ,ಜನವರಿ,08: ಮಹಿಳೆಯೊಬ್ಬರಿಗೆ ಸೇರಿದ ತೋಟದೊಳಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ ಸೇರಿದಂತೆ ಸುಮಾರು 15 ಮಂದಿ ಅಕ್ರಮ ಪ್ರವೇಶ ಮಾಡಿದ್ದು, ಆಕೆಗೆ ಕೊಲೆಬೆದರಿಕೆ ಒಡ್ಡಿದ್ದಾರೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊನ್ನಂಪೇಟೆ ಸಮೀಪದ ನಿಟ್ಟೂರು ಗ್ರಾಮದ ಕಳ್ಳೆಂಗಡ ಲತಾ ಎಂಬ ಮಹಿಳೆಗೆ ಜನವರಿ 6 ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ ಸೇರಿದಂತೆ ಕಮಲಾಕ್ಷಿ, ಪ್ರೇಮ, ಪ್ರವೀಣ್, ಚೊಡುಮಾಡ ಸೂರಜ್ ಸುಬ್ಬಯ್ಯ, ಅಳಮೇಂಗಡ ಬೋಸ್ ಮಂದಣ್ಣ, ಕಾಟಿಮಾಡ ಶರೀನ್, ಮಲ್ಲೇಂಗಡ ಜೀವನ್, ವೀನಸ್, ಮುಕ್ಕಾಟಿರ ಸೋಮಯ್ಯ. ಪಿ.ಎ. ಪ್ರಭುಕುಮಾರ್, ಪೊರಂಗಡ ಡಾಲಿ ಚಿಟ್ಟಿಯಪ್ಪ ಬೆದರಿಕೆ ಹಾಕಿದ್ದಾರೆ.[ಸಿಂಹದ ಮರಿಯಂತೆ ಕಾಣುವ ಪರ್ಷಿಯನ್ ಬೆಕ್ಕು ನೋಡಿದ್ದೀರಾ?]
ಕಾಫಿ ತೋಟದೊಳಗೆ ಅಕ್ರಮ ಪ್ರವೇಶ ಮಾಡಿದ 15 ಮಂದಿ ತೋಟದ ಮಾಲೀಕರಾದ ಲತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಕೊಲೆ ಬೆದರಿಕೆ ಒಡ್ಡಿದ್ದು, ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿ ಕಿತ್ತು ಕಾಫಿ, ಮೆಣಸಿನ ಬಳ್ಳಿ ಹಾಳುಮಾಡಿದ್ದಾರೆ. ಕಾಫಿ ಮತ್ತು ಅಡಿಕೆಯನ್ನು ಕಳ್ಳತನ ಮಾಡಿದ್ದಾರೆಂದು ಲತಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.