ಉಡುಪಿಯಲ್ಲಿ ಖರ್ಜೂರ ಬೆಳೆದು ತೋರಿಸಿದ ಸಾಧಕ!
ಉಡುಪಿ, ಜೂನ್ 15 : ಸೌದಿ ಅರೇಬಿಯಾಗಳಂತಹ ಮರುಭೂಮಿ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಖರ್ಜೂರ ಕರಾವಳಿಯ ವಾತಾವರಣಕ್ಕೆ ಬೆಳೆಯುವುದಿಲ್ಲ ಎಂಬ ಮಾತಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಖರ್ಜೂರ ಬೆಳೆದರೆ ಅದು ಅಚ್ಚರಿಯೇ ಸರಿ. ಆದರೆ, ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಕರ್ನಿರೆಯ ಮನೆಯೊಂದರ ವರಾಂಡದಲ್ಲಿ ಅಚ್ಚರಿ ನಡೆದಿದೆ.
ಕಾರ್ಕಳ ಪಡುಬಿದ್ರಿ ರಾಜ್ಯ ರಸ್ತೆಯಿಂದ ಸುಮಾರು 5 ಕಿ.ಮೀ ದೂರದಲ್ಲಿನ ಅಡ್ವೆಯಿಂದ ಬಲಕ್ಕೆ ತಿರುಗಿ ಫಲಿಮಾರು ಮಾರ್ಗವಾಗಿ ಕರ್ನಿರೆಯನ್ನು ತಲುಪಬಹುದು. ಇಲ್ಲಿನ ನಿವಾಸಿ ಕೆ.ಎಸ್.ಸಯ್ಯದ್ ಹಾಜಿ ಅವರ ಮಹಲ್ ನಂತಿರುವ ಮನೆ ಎಲ್ಲರಿಗೂ ಚಿರಪರಿಚಿತ. [ರಜೆ ಕಳೆಯಲು ಬಂದ ಇಂಜಿನಿಯರ್ ಕಲ್ಲಂಗಡಿ ಬೆಳೆದರು!]
ಮನೆಯ ಸುತ್ತ ಬಹಳ ಸುಂದರವಾದ ಪರಿಸರ ನಿರ್ಮಿಸಿ, ಎಲ್ಲರಿಗೂ ಚಿರಪರಿಚಿತರಾಗಿರುವ ಸೈಯದ್ ಅವರು ವರಾಂಡದಲ್ಲಿ 12 ಖರ್ಜೂರದ ಗಿಡಗಳನ್ನು ಬೆಳೆದಿದ್ದರು. ಇದರ ಪೈಕಿ 4 ಖರ್ಜೂರ ಗಿಡಗಳಲ್ಲಿ ಖರ್ಜೂರ ಫಸಲು ಬಂದಿದೆ. ಕಳೆದ 2 ತಿಂಗಳಿನಿಂದ ನಿರಂತರ ಫಸಲು ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. [ಬಿಸಿಲ ನಾಡಲ್ಲಿ ಅರಳುತ್ತಿರುವ ಜರ್ಬೆರಾ ಹೂಗಳು!]
'ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಫಸಲು ಕಡಿಮೆಯಾಗಿದೆ. ಎರಡು ವರ್ಷಗಳ ಹಿಂದೆ ಈ ಗಿಡಗಳನ್ನು ಗೋವಾದ ನರ್ಸರಿಯಿಂದ ಖರೀದಿಸಲಾಗಿತ್ತು. ಮನೆಯ ಎದುರಿನ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಗಿದೆ. ಆದರೆ, ಫಸಲು ಬರಬಹುದೆಂದು ನೆಟ್ಟಿರಲಿಲ್ಲ' ಎನ್ನುತ್ತಾರೆ ಮನೆಯ ಮುಹಮ್ಮದ್ ಅಶ್ರಫ್. [ಕೃಷಿ ಅಭಿವೃದ್ಧಿ ಪ್ರಚಾರಾಂದೋಲನದ ಬಗ್ಗೆ ತಿಳಿಯಿರಿ]
'ಖರ್ಜೂರದ ಮರದಲ್ಲಿ ಹೂ ಬಿಟ್ಟಾಗ ಇದರ ಬಗ್ಗೆ ಸೌದಿಯಲ್ಲಿ ಅಧ್ಯಯನ ನಡೆಸಿದ್ದ ಕಾಟಿಪಳ್ಳ ನಿವಾಸಿ ಪಿ.ಇ.ಮುಹಮ್ಮದ್ ಅವರನ್ನು ಸಂಪರ್ಕಿಸಿದ್ದರು. ಅವರು ಬಂದು ಪರಿಶೀಲಿಸಿ ಗಿಡಗಳ ಬಗ್ಗೆ ಆರೈಕೆ ಮಾಡಿದ್ದರು. ಎರಡು ವಾರಗಳ ಬಳಿಕ ಫಸಲು ಬರಲು ಆರಂಭವಾಯಿತು. ಫಸಲು ಬಂದಿರುವುದನ್ನು ನೋಡಿ ತುಂಬಾ ಸಂತೋಷ ಮತ್ತು ಅಚ್ಚರಿ ಉಂಟಾಯಿತು' ಎನ್ನುತ್ತಾರೆ ಮುಹಮ್ಮದ್ ಅಶ್ರಫ್ ಹೇಳುತ್ತಾರೆ.
ಹೇಗೆ ಫಸಲು ಬರಲು ಸಾಧ್ಯ? : 28 ವರ್ಷಗಳ ಕಾಲ ಸೌದಿಯ ಕಂಪೆನಿಯೊಂದರಲ್ಲಿ ಉದ್ಯೋಗ ನಡೆಸುತಿದ್ದ ಪಿ.ಇ.ಮುಹಮ್ಮದ್ ಕಾಟಿಪಳ್ಳ ಅವರು ಸೌದಿಯಲ್ಲಿ ಖರ್ಜೂರದ ಗಿಡಗಳನ್ನು ನೋಡಿ ಆಸಕ್ತಿ ಬೆಳೆದು ಅದರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು.
'ಇಲ್ಲಿನ ವಾತಾವರಣಕ್ಕೆ ಖರ್ಜೂರ ಗಿಡದಲ್ಲಿ ಖರ್ಜೂರ ಆಗುವುದು ಅಚ್ಚರಿ ಮೂಡಿಸಿದೆ. ಕರಾವಳಿಯ ಸಮುದ್ರ ತೀರದಲ್ಲಿ ಮರಳು ಮತ್ತು ಉಪ್ಪಿನ ತೇವಾಂಶ ಇರುವುದರಿಂದ ಖರ್ಜೂರ ಫಸಲು ಬರಲು ಸಾಧ್ಯ. ಖರ್ಜೂರದ ಗಿಡಗಳಲ್ಲಿ ಸಾವಿರಕ್ಕೂ ಅಧಿಕ ಜಾತಿಗಳಿವೆ. ಖರ್ಜೂರದ ಗಿಡದಲ್ಲಿ ಗಂಡು ಹೆಣ್ಣು ಎಂಬ ಎರಡು ಗಿಡಗಳಿರುತ್ತವೆ. ಗಂಡು ಗಿಡದಲ್ಲಿ ಹೂಬಿಟ್ಟ ತಕ್ಷಣ ಕೆಲವೊಂದು ವಿಧಾನಗಳ ಮೂಲಕ ಹೆಣ್ಣು ಗಿಡದ ಆರೈಕೆ ಮಾಡಿಕೊಳ್ಳಬೇಕು. ಬಳಿಕ ಹೆಣ್ಣು ಗಿಡದಲ್ಲಿ ಫಸಲು ಬರುತ್ತದೆ ಎನ್ನುತ್ತಾರೆ' ಮುಹಮ್ಮದ್.